ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಿನ್ನೆ ಶಾಸಕ ವಿನಯ್ ಕುಲಕರ್ಣಿ ಸೇರಿ ಒಟ್ಟು 17 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದ ಹಿನ್ನೆಲೆಯಲ್ಲಿ, ಇಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಪ್ರಕರಣದ ಗಂಭೀರತೆಯನ್ನು ಉಲ್ಲೇಖಿಸಿದ ಸಿಬಿಐ ಪರ ವಕೀಲರು, ಆರೋಪಿಗಳಿಗೆ ಗರಿಷ್ಠವಾದ ಗಲ್ಲು ಶಿಕ್ಷೆ ವಿಧಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ತಮ್ಮ ತಮ್ಮ ವೈಯಕ್ತಿಕ ಪರಿಸ್ಥಿತಿಗಳನ್ನು ಉಲ್ಲೇಖಿಸಿ ಶಿಕ್ಷೆ ಕಡಿಮೆ ಮಾಡುವಂತೆ ಕೋರಿ ಮನವಿ ಸಲ್ಲಿಸಿದರು. A15 ಆರೋಪಿಯಾದ ಶಾಸಕ ವಿನಯ್ ಕುಲಕರ್ಣಿ, “ನಾನು 27 ವರ್ಷಗಳಿಂದ ರಾಜಕೀಯದಲ್ಲಿ ಇದ್ದು ಯಾರಿಗೂ ಅನ್ಯಾಯ ಮಾಡಿಲ್ಲ. ರಾಜಕೀಯ ದ್ವೇಷದಿಂದ ನನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕುಟುಂಬದಲ್ಲಿ ಮದುವೆ ಯೋಗ್ಯ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದಾರೆ. ಕೃಷಿಕನಾಗಿ ಜೀವನ ನಡೆಸುತ್ತಿದ್ದು, ಕ್ಷೇತ್ರದಲ್ಲಿ ಯಾರಿಗೂ ತೊಂದರೆ ನೀಡಿಲ್ಲ” ಎಂದು ನ್ಯಾಯಾಲಯದ ಮುಂದೆ ತಿಳಿಸಿದರು.

ಇತರ ಆರೋಪಿಗಳೂ ಸಹ ತಮ್ಮ ಕುಟುಂಬ ಮತ್ತು ಆರೋಗ್ಯ ಸಂಬಂಧಿತ ಕಾರಣಗಳನ್ನು ಉಲ್ಲೇಖಿಸಿದರು. A4 ಆರೋಪಿ ತನ್ನನ್ನು ಆಟೋ ಚಾಲಕರಾಗಿ ಪರಿಚಯಿಸಿಕೊಂಡು, ತಂದೆ-ತಾಯಿಯ ಜವಾಬ್ದಾರಿ ಇರುವುದರಿಂದ ಶಿಕ್ಷೆ ಕಡಿಮೆ ಮಾಡುವಂತೆ ಮನವಿ ಮಾಡಿದರು. A5 ಆರೋಪಿ ತಾನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದು, ಕುಟುಂಬದ ಹೊಣೆಗಾರಿಕೆ ಇರುವುದಾಗಿ ತಿಳಿಸಿದರು. A6 ಆರೋಪಿ ಚಿಕ್ಕ ಮಕ್ಕಳ ಜವಾಬ್ದಾರಿ ಹಾಗೂ ಕಣ್ಣಿನ ಸಮಸ್ಯೆಯನ್ನು ಉಲ್ಲೇಖಿಸಿದರು.
ಇನ್ನು A16 ಆರೋಪಿ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಕುಟುಂಬದ ಪರಿಸ್ಥಿತಿ ಸಂಕಷ್ಟದಲ್ಲಿದೆ ಎಂದು ವಿವರಿಸಿದರು. A17 ಆರೋಪಿ ಇಬ್ಬರು ಚಿಕ್ಕ ಮಕ್ಕಳ ಜವಾಬ್ದಾರಿ ಇರುವುದರಿಂದ ಸಹಾನುಭೂತಿ ತೋರಿಸಬೇಕೆಂದು ಕೋರಿದರು. A19 ಆರೋಪಿ ತನ್ನ ವಿರುದ್ಧ ಯಾವುದೇ ಕೆಟ್ಟ ದಾಖಲೆ ಇಲ್ಲವೆಂದು ಹೇಳಿ ಶಿಕ್ಷೆ ಕಡಿಮೆ ಮಾಡುವಂತೆ ಮನವಿ ಮಾಡಿದರು.ಎಲ್ಲಾ ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡ ನ್ಯಾಯಾಲಯ, ಇಂದು ಅಂತಿಮವಾಗಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲು ಮುಂದಾಗಿದೆ. ಈ ತೀರ್ಪು ರಾಜ್ಯ ರಾಜಕೀಯದಲ್ಲಿಯೂ ಭಾರೀ ಪರಿಣಾಮ ಬೀರುವ ನಿರೀಕ್ಷೆಯಿದೆ.















