ಬೆಂಗಳೂರು; ಕಾಂಗ್ರೆಸ್ ಸರ್ಕಾರ ಇಂದು ಸಾಧನಾ ಸಮಾವೇಶ ಮಾಡುತ್ತಿದೆ. ಎರಡು ವರ್ಷ ಪೂರೈಸಿದ ಹಿನ್ನೆಲೆ ಸಾಧನಾ ಸಮಾವೇಶದ ಮೂಲಕ ರಾಜ್ಯದ ಜನತೆಗೆ ಧನ್ಯವಾದ ಅರ್ಪಣೆ ಮಾಡುತ್ತಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಆಕ್ರೋಶ ಹೊರ ಹಾಕಿದ್ದಾರೆ.
ಅಭಿವೃದ್ಧಿ ಎಂಬುದು ಸಂಪೂರ್ಣವಾಗಿ ನಿಂತು ಹೋಗಿದೆ. ಕಳೆದ ಎರಡು ವರ್ಷದಿಂದ ಏನು ಅಭಿವೃದ್ಧಿ ಮಾಡಿದ್ದಾರೆ. ಆಡಳಿತ ಪಕ್ಷದ ಶಾಸಕರೇ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಡ್ತಾ ಇಲ್ಲ ಅಂತ ಬೇಸತ್ತಿರೋದನ್ನ ನೋಡಿದ್ದೇವೆ, ಜಗಜ್ಜಾಹೀರಾಗಿದೆ. ನಾವೂ ಕೂಡ ಮೊದಲ ಬಾರಿಗೆ ಗೆದ್ದಂತ ಶಾಸಕರು, ನಮ್ಮ ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಶಾಲಾ ಕೊಠಡಿಯನ್ನ ಕಟ್ಟಿಸೋದಕ್ಕೆ ಸಾಧ್ಯ ಆಗ್ತಾ ಇಲ್ಲ. ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯ ಕೊಡುವುದಕ್ಕೆ ಸಾಧ್ಯ ಆಗ್ತಾ ಇಲ್ಲ ನಮ್ಮ ಶಾಸಕರಿಗೆ. ಯಾವುದೇ ಒಂದು ಹೊಸ ನೀರಾವರಿ ಯೋಜನೆಯನ್ನ ತರುವುದಕ್ಕೆ ಸಾಧ್ಯ ಆಗ್ತಾ ಇಲ್ಲ.
ಇಷ್ಟೆಲ್ಲ ಆದ್ರೂ ಕೂಡ ರಾಜ್ಯ ಸರ್ಕಾರ, ದುಂದು ವೆಚ್ಚವನ್ನ ಮಾಡಿಕೊಂಡು, ಏನೋ ಬಹಳ ಕಡಿದು ಕಟ್ಟೆ ಹಾಕಿರುವವರಂತೆ, ರಾಜ್ಯದಲ್ಲಿ ಕಿಸಿದಿದ್ದೇವೆ ಅಂತ ಇವತ್ತು ಸಾಧನಾ ಸಮಾವೇಶ ಮಾಡೋದಕ್ಕೆ ಹೊರಟಿದ್ದಾರೆ. ಸರ್ಕಾರದ ಬಗ್ಗೆ ಇಂದು ರಾಜ್ಯದ ಜನ ನಗ್ತಾ ಇದ್ದಾರೆ. ಈ ಸರ್ಕಾರ್ ನಡವಳಿಕೆ ಬಗ್ಗೆ ನಾಡಿನ ಜನ ಟೀಕೆ ಮಾಡ್ತಾ ಇದ್ದಾರೆ. ಆದರೂ ಸಹ ಇವರದ್ದು ಭಂಡ ಸರ್ಕಾರ. ಯಾವುದೊಂದು ಅಭಿವೃದ್ಧಿ ಕೆಲಸ ಮಾಡದೆ ಇದ್ದರು ಪರವಾಗಿಲ್ಲ, ಜಾಹೀರಾತುಗಳನ್ನ ಕೊಡಬೇಕು. ಇದೊಂದು ರೀತಿ ಜಾಹೀರಾತಿನ ಸರ್ಕಾರವಾಗಿದೆ. ನಿರಂತರವಾಗಿ ಜಾಹೀರಾತುಗಳನ್ನು ಕೊಟ್ಟು, ಗ್ಯಾರಂಟಿಗಳನ್ನು ಸಹ ಸರಿಯಾಗಿ ಕೊಡದೆ ಜನರಿಗೆ ಮೋಸ ಮಾಡ್ತಾ ಇದ್ದಾರೆ. ಇದರ ನಡುವೆ ಸಾಧನ ಸಮಾವೇಶ ಮಾಡೋದಕ್ಕೆ ಹೊರಟಿದೆ ಎಂದು ಗುಡುಗಿದ್ದಾರೆ.










