ಬೆಂಗಳೂರು: ಈಗಾಗಲೇ ಒಳಮೀಸಲಾತಿ ಜಾರಿ ಬಗ್ಗೆ ದಲಿತ ಸಚಿವರಿ, ಶಾಸಕರು ಒಗ್ಗಟ್ಟಾಗಿರಬೇಕೆಂದು ನಿರ್ಧಾರ ಮಾಡಿದ್ದಾರೆ. ಈ ಸಂಬಂಧ ಇಂದು ಮತ್ತೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ.ಪರಮೇಶ್ವರ್, ಒಳಮೀಸಲಾತಿ ವಿಚಾರದಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.
ಮಾಧ್ಯಮದವರ ಜೊತೆಗೆ ಮಾತನಾಡಿದ ಪರಮೇಶ್ವರ್ ಅವರು, ವರದಿ ಜಾರಿಗೆ ಬದ್ಧ ಎಂದು ಚಿತ್ರದುರ್ಗದಲ್ಲಿ ಘೋಷಣೆ ಮಾಡಲಾಗಿತ್ತು. ನಮ್ಮ ಪ್ರಣಾಳಿಕೆಯಲ್ಲೂ ಭರವಸೆಯನ್ನು ನೀಡಿದ್ದೆವು. ಒಳಮೀಸಲಾತಿ ಏಕಾಏಕಿ ಜಾರಿಯಾದ್ರೆ ಕಾನೂನಿನ ಪ್ರಕರಾ ನಿಲ್ಲುವುದಿಲ್ಲ. ಹಾಗಾಗಿ ಪ್ರಾಯೋಗಿಕವಾಗಿ ಡೇಟಾ ಪಡೆದು ಜಾರಿ ಮಾಡುತ್ತೇವೆ. ನ್ಯಾ.ಸದಾಶಿವ ಆಯೋಗದಲ್ಲಿ ಡೇಟಾ ಸಿಕ್ಕಿಲ್ಲವೆಂದು ಬಿಜೆಪಿ ತಿರಸ್ಕರಿಸಿತ್ತು. ಹಾಗಾಗಿ ನಾವೂ ನ್ಯಾ.ನಾಗಮೋಹನ್ ದಾಸ್ ಆಯೋಗ ರಚಿಸಿದೆವು ಎಂದಿದ್ದಾರೆ.
ಯಾರಿಗೂ ಅನ್ಯಾಯವಾಗದಂತೆ ಒಳಮೀಸಲಾತಿ ಜಾರಿ ಮಾಡುತ್ತೇವೆ. ನಾಳೆ ವರದಿ ಸಲ್ಲಿಕೆಯಾಗಲಿದೆ. ಜಾರಿ ಮಾಡುವ ಜವಾಬ್ದಾರಿ ನಮ್ಮದು. ಗ್ರಾಮಾಂತರ ಪ್ರದೇಶದಲ್ಲಿ ಶೇಕಡಾ 95 ರಷ್ಟು ಸಮೀಕ್ಷೆ ನಡೆದಿದೆ. ನಗರ, ಪಟ್ಟಣದಲ್ಲಿ ಸ್ವಲ್ಪ ಕಡಿಮೆ ಆಗಿದೆ ಅನ್ನೋದು ಚರ್ಚೆ ಇದೆ ಎಂದಿದ್ದಾರೆ.
ಇದೇ ವೇಳೆ ಪ್ರಜ್ವಲ್ ರೇವಣ್ಣನಿಗೆ ಆದ ಶಿಕ್ಷೆ ಬಗ್ಗೆ ಮಾತನಾಡಿ, ನಮ್ಮ ಪೊಲೀಸ್ ಇಲಾಖೆಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಹಳ ಅಚ್ಚುಕಟ್ಟಾಗಿ ಮೊದಲಿನಿಂದಾನೂ ಮಾಡಿದ್ದಾರೆ. ಎಲ್ಲಾ ರೀತಿಯ ಸಾಕ್ಷಿಗಳನ್ನ ಕೊಟ್ಟಿದ್ದಾರೆ. ಹೀಗಾಗಿ ನ್ಯಾಯಾಧೀಶರು ತೀರ್ಮಾನ ತೆಗೆದುಕೊಳ್ಳುವುದಕ್ಕೆ ಅನುಕೂಲ ಆಯ್ತು. ಸಿಒಡಿ ತಂಡ ಎಲ್ಲಾ ರೀತಿಯ ಕೆಲಸವನ್ನು ಚೆನ್ನಾಗಿ ಮಾಡಿದ್ದಾರೆ. ಒಂದು ವರ್ಷ ನಾಲ್ಕು ತಿಂಗಳಲ್ಲಿಯೇ ಮುಗಿಸಿದ್ದಾರೆ. ಇದರಲ್ಲಿ ಎಂಥಾ ರಾಜಕೀಯ ಬರುತ್ತೆ. ಇದನ್ನ ರಾಜಕೀಯ ದೃಷ್ಟಿಯಿಂದ ನೋಡಲೇ ಬಾರದು ಎಂದಿದ್ದಾರೆ.


