ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡವನ್ನು ಲಕ್ಷ್ಮಿದೇವಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ಮಹತ್ವದ ಜೊತೆಗೆ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಶುದ್ಧತೆಯನ್ನು ಹೆಚ್ಚಿಸುವ ಗಿಡವೆಂದು ವಾಸ್ತು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಆದರೆ, ಸರಿಯಾದ ಆರೈಕೆ ಮಾಡಿದರೂ ತುಳಸಿ ಗಿಡ ಏಕಾಏಕಿ ಬಾಡುವುದು ಅಥವಾ ಎಲೆಗಳು ಉದುರುವ ಲಕ್ಷಣ ಕಂಡುಬಂದರೆ, ಅದನ್ನು ನಿರ್ಲಕ್ಷಿಸಬಾರದು ಎಂದು ಜ್ಯೋತಿಷ್ಯ ಹಾಗೂ ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ಜ್ಯೋತಿಷ್ಯ ನಂಬಿಕೆಯ ಪ್ರಕಾರ ತುಳಸಿ ಗಿಡವು ಬುಧ ಗ್ರಹದೊಂದಿಗೆ ಸಂಬಂಧ ಹೊಂದಿದೆ. ಗಿಡ ಬಾಡಲು ಶುರುವಾದರೆ ಬುಧನ ಸ್ಥಿತಿ ದುರ್ಬಲವಾಗಿರುವ ಸೂಚನೆ ಎಂದು ಪರಿಗಣಿಸಲಾಗುತ್ತದೆ. ಇದು ಬುದ್ಧಿವಂತಿಕೆ, ವ್ಯವಹಾರ, ಸಂವಹನ ಮತ್ತು ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.
ಇದಲ್ಲದೆ, ತುಳಸಿ ಗಿಡ ಪದೇ ಪದೇ ಒಣಗುವುದನ್ನು ಕೆಲವರು ‘ಪಿತೃ ದೋಷ’ದ ಸೂಚನೆಯಾಗಿ ನೋಡುತ್ತಾರೆ. ಪೂರ್ವಜರ ಅಸಮಾಧಾನದಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ, ಮಾನಸಿಕ ಒತ್ತಡ, ಕಲಹ ಹಾಗೂ ಅಭಿವೃದ್ಧಿಯಲ್ಲಿ ಅಡಚಣೆಗಳು ಎದುರಾಗಬಹುದು ಎಂಬ ನಂಬಿಕೆಯೂ ಇದೆ.
ವಾಸ್ತು ಪ್ರಕಾರ ತುಳಸಿ ಗಿಡವನ್ನು ಸರಿಯಾದ ಸ್ಥಳದಲ್ಲಿ ಇಡುವುದು ಮುಖ್ಯ. ಮೇಲ್ಚಾವಣಿಯಲ್ಲಿ ಇಡುವುದನ್ನು ತಪ್ಪಾಗಿ ಪರಿಗಣಿಸಲಾಗುತ್ತದೆ. ಬದಲಿಗೆ ಮನೆಯ ಮುಖ್ಯ ದ್ವಾರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದರಿಂದ ಶಾಂತಿ, ಸಮೃದ್ಧಿ ಹಾಗೂ ಆರ್ಥಿಕ ಸ್ಥಿರತೆ ಹೆಚ್ಚುತ್ತದೆ ಎಂದು ನಂಬಲಾಗಿದೆ.ತುಳಸಿ ಗಿಡ ಚೆನ್ನಾಗಿ ಬೆಳೆಯಲು ಕೆಲವು ಸರಳ ಕ್ರಮಗಳನ್ನು ಅನುಸರಿಸಬಹುದು.
ಪ್ರತಿದಿನ ನೀರು ಹಾಕುವಾಗ ಸ್ವಲ್ಪ ಗಂಗಾಜಲ ಸೇರಿಸುವುದು, ಬೆಳಿಗ್ಗೆ–ಸಂಜೆ ದೀಪ ಹಚ್ಚಿ ಪೂಜೆ ಮಾಡುವುದು, ಗಿಡವನ್ನು ಸ್ವಚ್ಛ ಸ್ಥಳದಲ್ಲಿ ಇಡುವುದು ಮತ್ತು ಅನಗತ್ಯವಾಗಿ ಎಲೆಗಳನ್ನು ಕೀಳದಿರುವುದು ಒಳಿತು.ಆದರೆ, ಈ ಎಲ್ಲವು ಧಾರ್ಮಿಕ ಮತ್ತು ಜ್ಯೋತಿಷ್ಯ ನಂಬಿಕೆಗಳ ಆಧಾರಿತವಾಗಿದ್ದು, ವೈಜ್ಞಾನಿಕ ದೃಢೀಕರಣ ಇರುವುದಿಲ್ಲ ಎಂಬುದನ್ನೂ ಗಮನಿಸಬೇಕು.



















