ವಿಜಯೇಂದ್ರ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲು ಒಪ್ಪಿಗೆ : ಹೈಕಮಾಂಡ್ ಹಾಕಿದ ಷರತ್ತುಗಳೇನು..?

suddionenews
1 Min Read

ಬೆಂಗಳೂರು: ಬಿಜೆಪಿಯಲ್ಲಿ ಬಣ ರಾಜಕೀಯ ಜೋರಾಗಿತ್ತು. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಏರಿದಾಗಿನಿಂದಲೂ ಶಾಸಕ ಯತ್ನಾಳ್ ಬಣ ಆಂತರಿಕ ಯುದ್ಧವನ್ನು ಸಾರಿತ್ತು. ಬಹಿರಂಗವಾಗಿಯೇ ಆಕ್ರೋಶ ಹೊರ ಹಾಕುತ್ತಿದ್ದರು. ಅದರಲ್ಲೂ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಯತ್ನಾಳ್ ಸೇರಿದಂತೆ ಹಲವರು ಆಕಾಂಕ್ಷಿಯಾಗಿದ್ದರು. ಇದೀಗ ಚುನಾವಣೆಗೂ ಮುನ್ನವೇ ಹೈಕಮಾಂಡ್ ನಾಯಕರಿಂದ ಬಿ.ವೈ.ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷ ಎಂಬ ಗ್ರೀನ್ ಸಿಗ್ನಲ್ ನೀಡಿದೆ. ಇದರ ಜೊತೆಗೆ ಹಲವು ಷರತ್ತುಗಳನ್ನು ವಿಧಿಸಿದೆ.

ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿದ್ದ ಯತ್ನಾಳ್ ಗೆ ಶೋಕಾಸ್ ನೋಟೀಸ್ ಜಾರಿ ಮಾಡುವ ಮೂಲಕ ಭಿನ್ನರ ಬಾಯಿಗೆ ಬೀಗ ಹಾಕಿದ್ದಾರೆ. ವಿಜಯೇಂದ್ರ ಅವರನ್ನು ಚುನಾವಣೆ ಇಲ್ಲದೆಯೇ ಅವಿರೋಧವಾಗಿ ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಿದೆ. ಆದರೆ ಹಿಂದೊಮ್ಮೆ ಬೆಂಗಳೂರಿಗೆ ಬಂದಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆ ಎಂದಿದ್ದರು. ಒಂದು ವೇಳೆ ಚುನಾವಣೆ ನಡೆದರೆ ಯತ್ನಾಳ್ ಅವರೇ ಸ್ಪರ್ಧೆಗೆ ನಿಲ್ಲಬಹುದು ಅಥವಾ ಅವರ ಬಣದ ಯಾರನ್ನಾದರೂ ನಿಲ್ಲಿಸಬಹುದು. ಆಗ ಬಿಜೆಪಿಗೆನೆ ಮುಜುಗರ ಎದುರಾಗುತ್ತದೆ. ಹೀಗಾಗಿ ಯತ್ನಾಳ್ ಅವರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಸಾಧ್ಯವಾದಷ್ಟು ಅವಿರೋಧವಾಗಿ ಆಯ್ಕೆ ಮಾಡುವುದಕ್ಕೇನೆ ತೀರ್ಮಾನಿಸಿದೆ.

ಇದರ ಜೊತೆಗೆ ಬಿ.ವೈ.ವಿಜಯೇಂದ್ರ ಅವರಿಗೂ ಷರತ್ತು ಸಹಿತ ಬೆಂಬಲ ನೀಡಿರುವುದು ಎದ್ದು ಕಾಣಿಸುತ್ತಿದೆ. ವಿಜಯೇಂದ್ರ ಅವರಿಗೂ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಂತೆ ಕಾಣಿಸುತ್ತಿಲ್ಲ. ಯಾಕಂದ್ರೆ ಈಗಾಗಲೇ ಎಲ್ಲಾ ಜಿಲ್ಲೆಗೂ ಜಿಲ್ಲಾಧ್ಯಕ್ಷರನ್ನ ನೇಮಕ ಮಾಡಲಾಗಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂದೀಪ್ ರೆಡ್ಡಿ ನೇಮಕಾತಿಯನ್ನು ಡಾ.ಕೆ.ಸುಧಾಕರ್ ವಿರೋಧಿಸುತ್ತ ಬಂದಿದ್ದರು. ಈ ಕಾರಣಕ್ಕೆ ಆ ಜಿಲ್ಲೆಯ ಅಧ್ಯಕ್ಷರ ಆಯ್ಕೆಯನ್ನು ತಡೆಹಿಡಿಯಲಾಗಿದೆ. ಈ ಮೂಲಕ ವಿಜಯೇಂದ್ರ ಅವರಿಗೆ ಹೈಕಮಾಂಡ್ ಕೂಡ ಶಾಕ್ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *