ನವದೆಹಲಿ; ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ಇದು ಇಡೀ ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ಪಡುವಂತ ಸಂಗತಿಯಾಗಿದೆ. ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕ ಸಂಭ್ರಮ ಸ್ಯಾಂಡಲ್ ವುಡ್ ನಲ್ಲಿ ಮನೆ ಮಾಡಿದೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಿನ್ನೆ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರು ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಿದ್ದಾರೆ.
ಸಿನಿಮಾ ಲೋಕದಲ್ಲಿ ಹಿರಿಯ ನಟ ಅನಂತ್ ನಾಗ್ ಅವರು ಮಾಡಿರುವ ಸಾಧನೆ ಕಡಿಮೆ ಏನು ಅಲ್ಲ. ಈ ಸಾಧನೆಗಾಗಿಯೇ ಪದ್ಮಭೂಷಣ ಪ್ರಶಸ್ತಿಯನ್ನು ಅನಂತ್ ನಾಗ್ ಅವರಿಗೆ ನೀಡಲಾಗಿದೆ. ಪದ್ಮಭೂಷಣ ಪ್ರಶಸ್ತಿ, ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದು. ಈಗ ಆ ಪ್ರಶಸ್ತಿ ಅನಂತ್ ನಾಗ್ ಅವರ ಮುಡಿಗೇರಿದೆ.
ಈ ಪ್ರಶಸ್ತಿ ಘೋಷಣೆಯಾದಾಗಲೇ ಅನಂತ್ ನಾಗ್ ಅವರು, ಈ ಪ್ರಶಸ್ತಿಯನ್ನ ಕರ್ನಾಟಕದ ಜನತೆ ಹಾಗೂ ಕರ್ನಾಟಕಕ್ಕೆ ಅರ್ಪಣೆ ಮಾಡ್ತೇವೆ ಎಂದಿದ್ದರು. ಅನಂತ್ ನಾಗ್ ಅವರು 1948ರ ಸೆಪ್ಟೆಂಬರ್ 4ರಂದು ಉತ್ತರ ಕನ್ನಡದ ಶಿರಳ್ಳಿ ಎಂಬ ಗ್ರಾಮದಲ್ಲಿ ಜನಿಸಿದರು. ಆದರೆ ಮನೆ ಮನ ಗೆದ್ದದ್ದು ಕಲೆ ಮೂಲಕ.
1973ರ ಸಂಕಲ್ಪ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದರು. ಬಳಿಕ ನಾ ನಿನ್ನ ಬಿಡಲಾರೆ, ಬಯಲುದಾರಿ ಸೇರಿದಂತೆ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನ ಮಾಡಿದರು. ನಟನೆ ಮೂಲಕ ಸಾಕಷ್ಟು ಹೆಸರನ್ನು ಕೂಡ ಮಾಡಿದರು. ಚಲನಚಿತ್ರರಂಗದಲ್ಲಿ ಮಾಡಿದ ಸಾಧನೆಗಾಗಿ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.






