ಚಿತ್ರದುರ್ಗ. ಆ.29: ಹರ್ ಘರ್ ಜಲ್ ಘೋಷಣೆಯಾದ ಕಾಮಗಾರಿಗಳ ಪೂರ್ಣಕ್ಕೆ ಕಾಲಾವಧಿ ವಿಸ್ತರಣೆ ನೀಡಲಾಗಿದ್ದು, 391 ಕಾಮಗಾರಿಗಳ ಪೈಕಿ, 386 ಕಾಮಗಾರಿಗಳ ಕಾಲಾವಧಿ ವಿಸ್ತರಣೆಗೆ ಕೋರಿ ಗುತ್ತಿಗೆದಾರರು ಪ್ರಸ್ತಾವನೆ ಮನವಿ ಸಲ್ಲಿಸಿದ್ದಾರೆ ಎಂದು ಜಿ.ಪಂ.ಸಿಇಓ ಡಾ.ಆಕಾಶ್.ಎಸ್. ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ನೀರ್ಲ್ಯಾಬ್ನಲ್ಲಿ ಶನಿವಾರ ಜರುಗಿದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಹಿಂದಿನ ಸಭೆಯಲ್ಲಿ ಸಂಬಂಧಪಟ್ಟ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ, ಗುತ್ತಿಗೆದಾರರು ನಮೂನೆ-1 ರಲ್ಲಿ ವಿಳಂಬವಾಗಿದ್ದಕ್ಕೆ ಕಾರಣ ನೀಡಿ ಮನವಿ ಪತ್ರ ಸಲ್ಲಿಸಲು ತಿಳಿಸಲಾಗಿತ್ತು. ಇದರ ಅನ್ವಯ ಚಳ್ಳಕೆರೆ 105, ಚಿತ್ರದುರ್ಗ 56, ಹಿರಿಯೂರು 46, ಹೊಳಲ್ಕೆರೆ 84, ಹೊಸದುರ್ಗ 68, ಮೊಳಕಾಲ್ಮೂರು 27 ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ.
ಇವುಗಳನ್ನು ಆಧರಿಸಿ 7 ದಿನಗಳ ಒಳಗಾಗಿ ಗ್ರಾ.ಪಂ.ಗಳ ಪಿಡಿಓ ಹಾಗೂ ಆಡಳಿತ ಅಧಿಕಾರಿ, ಶಾಖಾಧಿಕಾರಿ ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿಗಳು ನಮೂನೆ-2 ರಲ್ಲಿ ಧೃಢಿಕರಣ ವರದಿಯನ್ನು ನೀಡಬೇಕು. ಜಿಲ್ಲಾ ಪಂಚಾಯಿತಿಯಿಂದ ಸಿಬ್ಬಂದಿ ನಿರಂತರವಾಗಿ ಮೇಲ್ವಿಚಾರಣೆ ನಡೆಸಿ ವರದಿಗಳನ್ನು ಪಡೆದುಕೊಳ್ಳುವಂತೆ ಸಿಇಓ ಡಾ.ಆಕಾಶ್.ಎಸ್ ಸೂಚನೆ ನೀಡಿದರು.
ಕಾಮಗಾರಿಗಳ ವ್ಯತ್ಯಾಸದ ಮೊತ್ತಕ್ಕೆ ಅನುಮೋದನೆ:
ಚಿತ್ರದುರ್ಗ ತಾಲ್ಲೂಕಿನ ಕೆ.ಬಳ್ಳೆಕಟ್ಟೆ ಗ್ರಾಮದ 239 ಹಾಗೂ ಬೆಟ್ಟದನಾಗೇನಹಳ್ಳಿ ಗ್ರಾಮದ 155 ಕಾರ್ಯಾತ್ಮಕ ನಳ ಸಂಪರ್ಕ ಕಾಮಗಾರಿಗಳ ವ್ಯತ್ಯಾಸದ ಮೊತ್ತಕ್ಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಸದರಿ ಕಾಮಗಾರಿಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ದಾವಣಗೆರೆ ವೃತ್ತದಿಂದ ತಾಂತ್ರಿಕವಾಗಿ ಪರಿಶೀಲಿಸಿ, ಸಮಿತಿಯ ಅನುಮೋದನೆ ಶಿಫಾರಸ್ಸು ಮಾಡಲಾಗಿತ್ತು.
ಕೆ.ಬಳ್ಳೆಕಟ್ಟೆ ಗ್ರಾಮದ ಕಾಮಗಾರಿಯ ರೂ.5.22 ಲಕ್ಷ ಹಾಗೂ ಬೆಟ್ಟದನಾಗೇನಹಳ್ಳಿಯ ಕಾಮಗಾರಿಯ ರೂ.7.61 ಲಕ್ಷದ ವ್ಯತ್ಯಾಸದ ಮೊತ್ತದ ಕುರಿತು ಸಭೆಯಲ್ಲಿ ಕುಲಂಕುಷವಾಗಿ ಚರ್ಚಿಸಿ ಅನುಮೋದಿಸಲಾಯಿತು.
ಎಂ.ಆರ್.ಎಫ್ ಘಟಕ ಕಾಮಗಾರಿ ವಿಳಂಬ ದಂಡಕ್ಕೆ ವಿನಾಯಿತಿ:
ಸ್ವಚ್ಛ ಭಾರತ ಮಿಷನ್ ಅಡಿ ಹಿರಿಯೂರು ತಾಲ್ಲೂಕಿನ ಬುರಜಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಟಿಡಿಪಿ (ಟನ್ಸ್ ಪರ್ ಡೇ) ಸಾಮಾಥ್ರ್ಯದ ಎಂ.ಆರ್.ಎಫ್(ಮೆಟಿರಿಯಲ್ ರಿಕವರಿ ಫೆಸಿಲಿಟಿ) ಘಟಕವನ್ನು ನಿರ್ಮಿಸಲಾಗುತ್ತಿದೆ. ಸದ್ಯ ಸಿವಿಲ್ ಕಾಮಾಗಾರಿಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿವೆ. ಯಂತ್ರೋಪಕರಣಗಳ ಅಳವಡಿಕೆ ಹಾಗೂ ವಿದ್ಯುತ್ ಸಂಪರ್ಕ ನೀಡುವುದಕ್ಕೆ ಶೀಘ್ರ ಟೆಂಡರ್ ಕರೆಯಲಾಗುವುದು. ಈ ಹಿಂದೆ ಗುತ್ತಿಗೆದಾರಿಗೆ ಸಿವಿಲ್ ಕಾಮಗಾರಿ ಪೂರ್ಣಗೊಳಿಸಲು ನೀಡಿದ ಕಾಲಾವಧಿಯನ್ನು ವಿಸ್ತರಿಸುವ ಪ್ರಸ್ತಾವನೆಗೆ ಅನುಮೋದನೆಗೆ ನೀಡಲು ಇಲಾಖೆಯಿಂದ ವಿಳಂಬವಾಗಿದ್ದರ ಪರಿಣಾಮವಾಗಿ, ಸಮಿತಿಯಿಂದ ದಂಡ ರಹಿತವಾಗಿ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಲು ಅನುಮತಿ ನೀಡಲಾಗುತ್ತಿದೆ ಎಂದು ಸಿಇಓ ಡಾ.ಆಕಾಶ್.ಎಸ್ ವಿವರಿಸಿದರು.
ಎಂ.ಆರ್.ಎಫ್ ಘಟಕ ಕಾರ್ಯಾರಂಭ ಮಾಡಿದರೆ, ಚಿತ್ರದುರ್ಗ ಹಾಗೂ ಹಿರಿಯೂರಿನ ಸುಮಾರು 50 ಗ್ರಾಮ ಪಂಚಾಯಿತಿಗಳಲ್ಲಿ ಸಂಗ್ರಹಿಸುವ ಪ್ಲಾಸ್ಟಿಕ್, ಕಬ್ಬಿಣ, ಇ ತ್ಯಾಜ್ಯಗಳನ್ನು ಸಂಸ್ಕøರಿಸಲು ಅವಕಾಶವಾಗಲಿದೆ. ಇನ್ನೂ 2 ತಿಂಗಳಲ್ಲಿ ಘಟಕ ಆರಂಭವಾಗುವ ನಿರೀಕ್ಷೆ ಇದ್ದು, ಎನ್.ಜಿ.ಓ ಸಹಭಾಗಿತ್ವದಲ್ಲಿ ಘಟಕದ ನಿರ್ವಹಣೆ ಮಾಡುವುದಾಗಿ ತಿಳಿಸಿದರು.
ಜಿ.ಪಂ.ಉಪಕಾರ್ಯದರ್ಶಿ ಎಂ.ಬಾಬು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಅಮರನಾಥ್ ಜೈನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಂ.ಸಿ.ಸುನೀಲ್ ಕುಮಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಕಾರ್, ಜಲತಜ್ಞ ದೇವರಾಜ ರೆಡ್ಡಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.















