ಚಿತ್ರದುರ್ಗ: ಸಾವು ಯಾವಾಗ ಹೇಗೆ ಬರುತ್ತೆ ಅನ್ನೋದನ್ನ ನಿಜಕ್ಕೂ ಊಹೆ ಮಾಡುವುದಕ್ಕೆ ಆಗಲ್ಲ. ಹಾಗಂತ ಕರುಣೆಯೇ ಇಲ್ಲದೆ ಬರುವ ಸಾವನ್ನ ಸ್ವೀಕರಿಸುವುದು ಹೇಗೆ. ಅದು ಅನಿವಾರ್ಯತೆ ಕೂಡ. ಇಂದು ಚಿತ್ರದುರ್ಗದ ಬಳಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದವರ ಮನೆಯವರ ಕಥೆ.
ಈ ಅಪಘಾತದಲ್ಲಿ ಇಬ್ಬರು ಗೆಳತಿಯರು ಕೂಡ ಸಾವನ್ನಪ್ಪಿದ್ದಾರೆ. ಮಾನಸ ಹಾಗೂ ನವ್ಯಾ. ಇನ್ನು ತುಂಬಾ ಚಿಕ್ಕ ವಯಸ್ಸು. ಈಗಷ್ಟೇ ಜವಾಬ್ದಾರಿ ತೆಗೆದುಕೊಂಡ ವಯಸ್ಸು, ಈಗಷ್ಟೇ ಕನಸುಗಳು ಗರಿಗೆದರಿ ಹಾರುವ ವಯಸ್ಸು. ವಿಧಿ ಇಷ್ಟು ಕ್ರೂರವಾಗಬಾರದಿತ್ತು ಎಂದು ಶಾಪ ಹಾಕುವ ಘಟನೆ ಇದು. ನವ್ಯಾ ಹಾಗೂ ಮಾನಸಾಗೆ ಕೇವಲ 26 ಹಾಗೂ 27 ವರ್ಷ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವರು. ಅದೇನೊ ಇಬ್ಬರು ಅಕ್ಕತಂಗಿಯರಲ್ಲದೆ ಹೋದರು, ಒಟ್ಟಿಗೆ ಹುಟ್ಟದೆ ಹೋದರು ಒಟ್ಟಿಗೆ ಮಸಣ ಸೇರಿದ್ದಾರೆ.
ಇಬ್ಬರು ಇಂಜಿನಿಯರಿಂಗ್ ಅನ್ನು ಒಟ್ಟಿಗೆ ಮುಗಿಸಿದ್ದರು. ಬೆಂಗಳೂರಿಗೆ ಬಂದು ಒಟ್ಟಿಗೆ ಕೆಲಸ ಮಾಡುತ್ತಿದ್ದರು. ರಜೆ ಬೇರೆ ಎಲ್ಲಾದರೂ ಹೋಗಿ ಬರೋಣಾವೆಂದು ಸೀ ಬರ್ಡ್ ಬಸ್ ಬುಕ್ ಮಾಡಿದ್ದಾರೆ. ಇವರ ಜೊತೆಗೆ ಮಿಲನಾ ಕೂಡ ಜೊತೆಯಾಗಿದ್ದರು. ಆದರೆ ಅದೃಷ್ಟವಶಾತ್ ಮಿಲನಾ ಸಾವಿನ ದವಡೆಯಿಂದ ಬಚಾವ್ ಆಗಿದ್ದಾರೆ. ಒಟ್ಟಿಗೆ ಓದಿದ ಗೆಳತಿಯರು ಒಟ್ಟಿಗೆ ಮಸಣಕ್ಕೂ ಹೋಗಿದ್ದು ಮಾತ್ರ ದುರಂತ. ಕೇವಲ 26 ವರ್ಷದ ಮಕ್ಕಳನ್ನ ಕಳೆದುಕೊಳ್ಳುವುದು ಅಂದ್ರೆ ತಂದೆ ತಾಯಿಗೆ ಮರೆಯಲು ಸಾಧ್ಯವಾಗುವ, ಸಹಿಸಲು ಸಾಧ್ಯವಾಗುವ ದುಃಖವೂ ಅಲ್ಲ. ಮಗಳ ನೆನಪಲ್ಲೇ ಆ ಜೀವಗಳು ಕಣ್ಣೀರಿಡುತ್ತಿವೆ, ಕೊರಗುತ್ತಿವೆ.





