ಶಿವಮೊಗ್ಗ: ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಪಕ್ಷದ ರಾಷ್ಟ್ರೀಯ ನಾಯಕರ ಮೇಲೆ ಇಡಿ ಪ್ರಭಾವ ಬೀರಿ ಅನಗತ್ಯ ಆರೋಪ ಸೃಷ್ಟಿಸಿರುವುದು ಹಾಗೂ ನರೇಗಾ ಹೆಸರು ಬದಲಾವಣೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಬೆಳಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಜೊತೆಗೆ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವುದಕ್ಕೂ ಯತ್ನಿಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಮಹಿಳಾ ಪೊಲೀಸ್ ಅಧಿಕಾರಿಯ ಚಿನ್ನದ ಸರ ಕಳ್ಳತನವಾಗಿರುವ ಘಟನೆ ನಡೆದಿದೆ.
ಪ್ರತಿಭಟನೆ ಜೋರಾಗುತ್ತಲೇ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ ನೂಕಾಟವೂ ಹೆಚ್ಚಾಗಿದೆ. ಈ ತಳ್ಳಾಟ ನೂಕಾಟದಲ್ಲಿ ಎಎಸ್ಐ ಅಮೃತಬಾಯಿ ಅವರ ಕೊರಳಲ್ಲಿದ್ದ ಮಾಂಗಲ್ಯ ಸರವನ್ನೇ ಎಗರಿಸಿದ್ದಾರೆ. ಅಮೃತಬಾಯಿ, ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕಳ್ಳತನವಾಗಿರುವ ಅಮೃತಬಾಯಿ ಅವರ ಸರ ಸುಮಾರು, 60 ಗ್ರಾಂ ತೂಕವಿದ್ದು, ಸುಮಾರು 8 ಲಕ್ಷ ರೂಪಾಯಿ ಬೆಲೆ ಬಾಳುತ್ತಿತ್ತು. ಸರ ಕಳ್ಳತನವಾಗಿದೆ ಎಂದು ತಿಳಿಯುತ್ತಿದ್ದಂತೆ ಆ ಮಹಿಳಾ ಪೊಲೀಸ್ ಅಧಿಕಾರಿ ಕಣ್ಣೀರಾಕಿದ್ದಾರೆ. ಈ ಘಟನೆಯಿಂದ ಪೊಲೀಸರಿಗೆ ಕೊಂಚ ಮುಜುಗರವೂ ಆಗಿದೆ. ಯಾಕಂದ್ರೆ ಎಂತ ಜನಜಂಗುಳಿಯೇ ಇರಲಿ. ಅಲ್ಲಿ ಏನು ಅಹಿತಕರ ಘಟನೆ ನಡೆಯದಂತೆ, ಕಳ್ಳತನಗಳು ಆಗದಂತೆ ಎಚ್ಚರಿಕೆ ವಹಿಸುವುದು ಇದೇ ಪೊಲೀಸರು. ಆದರೆ ಈಗ ನೋಡಿದ್ರೆ ಪೊಲೀಸ್ ಅಧಿಕಾರಿಯ ಕೊರಳಲ್ಲಿರೋ ಮಾಂಗಲ್ಯವೇ ಕಳ್ಳತನವಾಗಿದೆ. ಆ ಕಳ್ಳ ಇನ್ನೆಂಥ ಚಾಲಾಕಿ ಇರಬೇಡ, ಇನ್ನೆಷ್ಟೊ ಮೊಂಡ ಧೈರ್ಯ ಮಾಡಿರಬಹುದು ಎಂಬ ಪ್ರಶ್ನೆಗಳು ಎಲ್ಲರನ್ನು ಕಾಡುತ್ತಿವೆ.





