Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬರ ಘೋಷಿಸದೆ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ ರಾಜ್ಯ ಸರ್ಕಾರ”: ಚಿತ್ರದುರ್ಗದಲ್ಲಿ ಡಾ. ನವೀನ್ ಕುಮಾರ್ ಆಕ್ರೋಶ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜು. 11 : ರಾಜ್ಯ ಸರ್ಕಾರ ರೈತರ ಬಗ್ಗೆ ಕಾಳಜಿಯನ್ನು ವಹಿಸುತ್ತಿಲ್ಲ, ಬರೀ ರಿಯಲ್ ಎಸ್ಟೇಟ್ ಹಾಗೂ ಟೌನ್ ಪಿಷ್ ಮಾಡುವಲ್ಲಿ ಮುಂದಾಗಿದೆ, ರಾಜ್ಯದಲ್ಲಿ ಬರ ಛಾಯೆ ಕಂಡು ಬರುತ್ತಿದ್ದರೂ ಸಹಾ ಬರ ಎಂದು ಘೋಷಣೆ ಮಾಡದೇ ರೈತರನ್ನು ಸಂಕಷ್ಟಕ್ಕೆ ಈಡು ಮಾಡಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಕುಮಾರ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 

ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳಿಗೆ ಭೇಟಿ ನೀಡಿ ಅಲ್ಲಿನ ಮಳೆಯ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ರೈತರೊಂದಿಗೆ ಸಮಾಲೋಚನೆಯನ್ನು ನಡೆಸಿ ಕೃಷಿ ಅಧಿಕಾರಿಗಳೊಂದಿಗೆ ಜಿಲ್ಲೆಯ ಮಳೆ-ಬೆಳೆಯ ಪರಿಸ್ಥಿತಿಯನ್ನು ತಿಳಿದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ ಮಳೆ ಇಲ್ಲದೆ ಬರಗಾಲ ಆವರಿಸುತ್ತಿದೆ, ರೈತರು ಕೈಯಲ್ಲಿ ಹೊಲವನ್ನು ಹದ ಮಾಡಿಕೊಂಡು ಕೈಯಲ್ಲಿ ಬಿತ್ತನೆಯ ಬೀಜ, ಗೊಬ್ಬರವನ್ನು ಇಟ್ಟು ಕೊಂಡು ವರಣನ ಕೃಪೆಗಾಗಿ ಕಾಯುತ್ತಿದ್ದಾರೆ.ಆದರೆ ವರುಣ ಕೃಪೆ ತೋರುತ್ತಿಲ್ಲ, ರಾಜ್ಯ ಸರ್ಕಾರ ಬರ ಎಂದು ಘೋಷಣೆ ಮಾಡುತ್ತಿಲ್ಲ ಇನ್ನೂ ಮಳೆಗಾಗಿ ನವಂಬರ್ ವರೆಗೂ ಕಾಯೋಣ ಎಂಬ ಮಾತುಗಳನ್ನು ಆಡುತ್ತಿದೆ, ಜಿಲ್ಲೆಯಲ್ಲಿ ಬಿತ್ತನೆಯ ಪ್ರಮಾಣ ಕಡಿಮೆಯಾಗಿದೆ, ಅಧಿಕಾರಿಗಳ ನಿಗಧಿ ಪಡಿಸಿದ ಗುರಿಯನ್ನು ಮುಟ್ಟಲಾಗಿಲ್ಲ, ಇನ್ನೂ ಮುಂದಿನ ದಿನದಲ್ಲಿ ಮಳೆ ಬರುತ್ತದೆ ಎಂಬ ನಂಬಿಕೆಯಲ್ಲಿ ಸರ್ಕಾರ ಇದ್ದರೆ ರೈತ ಮಾತ್ರ ಮಳೆ ಇಲ್ಲದೆ ತಲೆಯ ಮೇಲೆ ಕೈ ಹೊತ್ತು ಕುಳಿತ್ತಿದ್ದಾನೆ ಎಂದ ಅವರು. ರಾಜ್ಯದಲ್ಲಿ ಸಿದ್ದರಾಮಯ್ಯ ಆಡಳಿತ ಹೋಗಿ ಶಿವಕುಮಾರ್‍ರವರ ಆಡಳಿತ ಬಂದಾಗಿದೆ ಸರ್ಕಾರ ಇನ್ನೂ ಟೇಕ್ ಆಫ್ ಆಗಿಲ್ಲ, ಸಚಿವ ಸಂಪುಟ ಪೂರ್ಣ ಪ್ರಮಾಣದಲ್ಲಿ ತಯಾರು ಆಗಿಲ್ಲ ಅರ್ಧದಲ್ಲಿ ರಾಜ್ಯ ಭಾರ ಮಾಡುತ್ತಿದ್ದಾರೆ, ಕೃಷಿ ಸಚಿವರಿಲ್ಲದೆ ಕೃಷಿ ಚಟುವಟಿಕೆಗಳು ನಿಷ್ಕಿಯೆಗೊಂಡಿವೆ, ರೈತರ ಕಷ್ಟಗಳನ್ನು ಯಾರ ಹತ್ತಿರ ಹೇಳಬೇಕಿದೆ ಎನ್ನುವುದು ಸಮಸ್ಯೆಯಾಗಿದೆ. ಎಂದರು.

 

ರಾಜ್ಯ ಸರ್ಕಾರವು ಇನ್ನು ಒಂದು ವಾರ ಅಥವಾ ಹತ್ತು ದಿನಗಳ ಒಳಗಾಗಿ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಿ ರೈತರ ಖಾತೆಗಳಿಗೆ ತಲಾ 25,000 ರೂಪಾಯಿಗಳನ್ನು ತಕ್ಷಣವೇ ಜಮೆ ಮಾಡಬೇಕು. ಮುಂದಿನ ಹಂತದಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಮತ್ತು ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳ ಅನ್ವಯ ತೋಟಗಾರಿಕೆ ಹಾಗೂ ನೀರಾವರಿ ಬೆಳೆಗಳಿಗೆ ಹೆಕ್ಟೇರ್‍ಗೆ ನೀಡುವ ಪರಿಹಾರವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಲಾಯಿತು.

ರಾಜ್ಯದಲ್ಲಿ ಈಗಾಗಲೇ ಮೂರು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ಕಾರದ ಬೇಜವಾಬ್ದಾರಿತನ ಮುಂದುವರಿದರೆ ಈ ಸಂಖ್ಯೆ ಹೆಚ್ಚಾಗುವ ಭೀತಿ ಇದೆ. ರೈತ ಮೋರ್ಚಾ ವತಿಯಿಂದ ಮೊದಲ ಹಂತವಾಗಿ ಚಿತ್ರದುರ್ಗ ಸೇರಿದಂತೆ ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ವರದಿ ಸಿದ್ಧಪಡಿಸಲಾಗುತ್ತಿದೆ. ಮುಂದಿನ ಎರಡು ವಾರಗಳಲ್ಲಿ ಸಂಪೂರ್ಣ ವರದಿಯನ್ನು ಸಿದ್ಧಪಡಿಸಿ ರಾಜ್ಯಪಾಲರಿಗೆ ಸಲ್ಲಿಸಿ, ಮುಂದಿನ ಹೋರಾಟದ ರೂಪುರೇಷೆಗಳನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್, ಕಾರ್ಯದರ್ಶಿ ರಾಜೇಶ್ ಆರ್ ಬುರುಡೆಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ವೆಂಕಟೇಶ್ ಯಾದವ್, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್, ವಕ್ತಾರ ನಾಗರಾಜ್ ಬೇದ್ರೇ, ಹೂಸದುರ್ಗ ತಾಲ್ಲೂಕು ರೈತ ಮೋರ್ಚಾದ ಅಧ್ಯಕ್ಷ ಮನುಕುಮಾರ್, ಕಾರ್ಯದರ್ಶಿ ಈಶ್ವರ್, ಪ್ರಧಾನ ಕಾರ್ಯದರ್ಶಿ ರವಿಕಿರಣ ಪಾಟೀಲ್, ಹಿರಿಯೂರು ತಾಲ್ಲೂಕು ರೈತ ಮೋರ್ಚಾದ ಅಧ್ಯಕ್ಷ ಮನೋಹರ್, ಜಿಲ್ಲಾ ಕಾರ್ಯದರ್ಶಿ ಗೋವಿಂದರಾಜು, ಸೇರಿದಂತೆ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕು ಮಂಡಲದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.

 

ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ, ಚಳ್ಳಕೆರೆ ತಾಲ್ಲೂಕಿನ ಭುಟ್ಟಟ್ಮಿ ಸುತ್ತಲಿನ ಗ್ರಾಮ ಓಬಣ್ಣರವರ ಮನೆಗೆ ಭೇಟಿ ಹಾಗೂ ಮೊಳಕಾಲ್ಮೂರಿನ ಕಟ್ಟನಾಯಕನ ಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ರೈತರನ್ನು ಮಾತನಾಡಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now