ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಚಿತ್ರದುರ್ಗ : ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ಜಾರಿಗೊಳಿಸದಿದ್ದರೆ ದಲಿತರಿಗೆ ಅನ್ಯಾಯವಾಗುತ್ತದೆಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂಕೋರ್ಟ್ ಮಹತ್ತರ ತೀರ್ಪು ನೀಡಿ ಎರಡು ವರ್ಷಗಳಿಗೆ ಸಮೀಪಿಸುತ್ತಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಒಳ ಮೀಸಲಾತಿ ಜಾರಿಗೊಳಿಸಿದರೂ ಸಂಪೂರ್ಣವಾಗಿ ಅನುಷ್ಟಾನವಾಗಿಲ್ಲ. ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರು ಒಳ ಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿ ಮಾಡದಿದ್ದರೆ ಮುಂಬರುವ ಎಲ್ಲಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷ ನಷ್ಟ ಅನುಭವಿಸಬೇಕಾಗುತ್ತದೆಂದು ಎಚ್ಚರಿಸಿದರು.
ಒಳ ಮೀಸಲಾತಿಗಾಗಿ ಕಳೆದ 35 ವರ್ಷಗಳಿಂದಲೂ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ತಮಿಳುನಾಡು, ತೆಲಂಗಾಣದವರು ಒಳ ಮೀಸಲಾತಿಯನ್ನು ಜಾರಿಗೆ ತಂದಿದ್ದಾರೆ. ನಮ್ಮ ರಾಜ್ಯದಲ್ಲಿ ಇನ್ನು ಅನ್ಯಾಯ ಸರಿಪಡಿಸಿಲ್ಲ. 56 ಸಾವಿರ ಹುದ್ದೆಗಳಿಗೆ ನೋಟಿಫಿಕೇಶನ್ ಹೊರಡಿಸಿರುವ ಸರ್ಕಾರ ಕ್ಯಾಬಿನೆಟ್ನಲ್ಲಿ ತೀರ್ಮಾನಿಸಿದೆ. ಆದರೆ ಕ್ಲಾಸ್ ಒನ್, ಕ್ಲಾಸ್-ಟುಗೆ ಇದೆ ಅನ್ವಯವಾಗುವುದಿಲ್ಲ ಎನ್ನುವುದಾದರೆ ಒಳ ಮೀಸಲಾತಿಯಿದ್ದೂ ಏನು ಪ್ರಯೋಜನ ಎಂದು ಪ್ರಶ್ನಿಸಿದರು? ಎಸ್ಸಿಪಿ, ಟಿಎಸ್ಪಿ. ಹಣ ಉನ್ನತ ಶಿಕ್ಷಣ, ಮೆಟ್ರೋ, ಪಬ್ಲಿಕ್ ವಕ್ರ್ಸ್, ಡ್ಯಾಂಗಳ ನಿರ್ಮಾಣಕ್ಕೆ ಬಳಸಲಾಗಿದೆ. ನಾಲ್ಕು ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರೂ.ಹಣ ಖರ್ಚಾಗಿದೆ. ಇದರಿಂದ ನಿಜವಾಗಿಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರು ವಂಚಿತರಾಗುತ್ತಿದ್ದಾರೆಂದರು.

ಮಾದಿಗ ಸಮುದಾಯಕ್ಕೆ ಸೇರಿದ ಕೆ.ಹೆಚ್.ಮುನಿಯಪ್ಪನವರಿಗೆ ಮತ್ತೆ ಆಹಾರ ಖಾತೆಯನ್ನೇ ನೀಡಲಾಗಿದೆ. ಲಂಬಾಣಿ, ಭೋವಿಗಳಿಗೆ ಪ್ರಾತಿನಿಧ್ಯ ಇಲ್ಲ. ಆರ್.ಬಿ.ತಿಮ್ಮಾಪುರ್ರವರರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನಮಾನ ನೀಡಬೇಕು. ಎಸ್ಸಿ, ಎಸ್ಟಿ, ನಿಗಮ ಮಂಡಳಿಗಳಿಗೆ ಒಂದು ಸಾವಿರ ಕೋಟಿ ರೂ.ಅನುದಾನ ಕೊಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ರಾತ್ರೋರಾತ್ರಿ ಬದಲಾವಣೆ ಮಾಡಿದ್ದು, ಅತ್ಯಂತ ಖಂಡನೀಯ. ಹರಳಯ್ಯ ಸ್ವಾಮೀಜಿ ಮೇಲೆ ಹಲ್ಲೆ ನಡೆಸಿರುವವರನ್ನು ರೌಡಿ ಪಟ್ಟಿಗೆ ಸೇರಿಸಿ ಗಡಿಪಾರ್ ಮಾಡಿ ಸ್ವಾಮೀಜಿಗೆ ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.
ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್, ರಾಜ್ಯ ಕಾರ್ಯದರ್ಶಿ ಭೀಮನಕೆರೆ ಶಿವಮೂರ್ತಿ, ಮಂಜುನಾಥ ಎ.ತಾಳಿಕೆರೆ, ಕೆ.ಪಿ.ಶ್ರೀನಿವಾಸ್, ಹನುಮಂತರಾಯ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.










