ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 09 : ಚಿತ್ರದುರ್ಗದ ಇತಿಹಾಸ ಸುಧೀರ್ಘವಾದುದು. ವೈವಿದ್ಯಮಯ ಹೆಸರುಗಳನ್ನು ಚಿತ್ರದುರ್ಗಕ್ಕೆ ಬಳಸಲಾಗಿದೆ. ಸೂಳ್ಗಲ್, ಚಿತ್ರಕಲ್ ದುರ್ಗ ಎಂತಲೂ ಹಿಂದೆ ಕರೆಯಲಾಗುತ್ತಿತ್ತು ಎಂದು ಇತಿಹಾಸ ಸಂಶೋಧಕರಾದ ಡಾ.ಬಿ.ರಾಜಶೇಖರಪ್ಪ ಹೇಳಿದರು.
ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ, ಸರ್ಕಾರಿ ಕಲಾ ಕಾಲೇಜು ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಚಿತ್ರದುರ್ಗ ಪರಿಸರದ ಬಯಲಾಟಗಳು ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಶನಿವಾರ ನಡೆದ ಮೊದಲ ಗೋಷ್ಠಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಭೌಗೋಳಿಕ ಹಿನ್ನೆಲೆ ಎಂಬ ವಿಷಯ ಕುರಿತು ಮಾತನಾಡಿದರು.
ಹಿಡಿಂಬಿ ಪಟ್ಟಣ, ಬೂತನಾಥನ ದುರ್ಗವೆಂದು ಕರೆಯಲಾಗಿದೆ. ಭೌಗೋಳಿಕತೆ ಪ್ರಭಾವದಿಂದ ಅನೇಕ ಹೆಸರುಗಳಿಂದ ಚಿತ್ರದುರ್ಗಕ್ಕಿದೆ. ಹಿಡಂಬಿವನ ಎಂತಲೂ ಹೆಸರಿಸಲಾಗಿದೆ. ಹಾಗಾಗಿ ಭೌಗೋಳಿಕತೆ ಇಲ್ಲಿ ಪ್ರಧಾನ ಪಾತ್ರ ವಹಿಸಿದೆ ಎನ್ನುವುದಕ್ಕೆ ಇಲ್ಲಿ ಭೌಗೋಳಿಕ ಶಾಸನಗಳು ಇವೆ. ವೇದಾವತಿ ನದಿ ಕದಂಬ ಮಯೂರ ವರ್ಮನ ಇತಿಹಾಸದ ಭಾಗವಾಗಿ ಸೇರಬೇಕು. ಭೌಗೋಳಿಕ ಅಂಶಗಳು ಚರಿತ್ರೆಯಲ್ಲಿ ಹಾಸು ಹೊಕ್ಕಾಗಿವೆ. ಚಿತ್ರದುರ್ಗದ ಕೋಟೆಯನ್ನು ಬಲಿಷ್ಟಗೊಳಿಸಿದವರು ಪಾಳೆಯಗಾರ ಅರಸರು.
ಭರಮಣ್ಣನಾಯಕನ ಕಾಲದಲ್ಲಿ ತೋಪು, ತೋಟಗಳು ನಿರ್ಮಾಣವಾದವು. ರಸಸಿದ್ದರು, ನಾಥ ಸಂಪ್ರದಾಯಕ್ಕೆ ಸೇರಿದ ಯೋಗಿಗಳು ಇಲ್ಲಿ ವಾಸವಿದ್ದರೆನ್ನುವುದಕ್ಕೆ ಇಲ್ಲಿರುವ ಗವಿಗಳು, ಗುಹೆಗಳೆ ಕಾರಣ. ಚಿತ್ರದುರ್ಗ ಜಿಲ್ಲೆ ಭೌಗೋಳಿಕತೆಯನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ ಎಂದರು.
ಜಿಲ್ಲೆಯ ಜಾನಪದ ಕುರಿತು ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಜಿಲ್ಲೆಯ ಬಯಲಾಟ ಪರಂಪರೆ ಬಗ್ಗೆ ಡಾ.ಬಿ.ಎಂ.ಗುರುನಾಥ ಇವರುಗಳು ಮಾತನಾಡಿದರು.

