Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡೂಮ್ ಸ್ಕ್ರೋಲಿಂಗ್ ಎಂಬ ಮಾಯಾಜಾಲ: ನಮಗೆ ಗೊತ್ತಿಲ್ಲದಂತೆ ನಮ್ಮ ಮೆದುಳನ್ನು ನಿಯಂತ್ರಿಸುತ್ತಿದೆಯೇ ಈ ಅಪಾಯಕಾರಿ ಅಭ್ಯಾಸ?

---Advertisement---

ದೆಹಲಿ.ಜುಲೈ.14: ಒಂದು ಕಾಲವಿತ್ತು, ದಿನಪತ್ರಿಕೆಗಳು ದಿನಕ್ಕೆ ಒಮ್ಮೆ ಮಾತ್ರ ಮನೆಬಾಗಿಲಿಗೆ ಬರುತ್ತಿದ್ದವು. ರಾತ್ರಿಯ ಟಿವಿ ಸುದ್ದಿ ತಪ್ಪಿಹೋದರೆ ಮರುದಿನವೇ ಅಪ್ಡೇಟ್ ತಿಳಿಯಬೇಕಿತ್ತು. ಅಂದೂ ಕೆಟ್ಟ ಸುದ್ದಿಗಳಿದ್ದವು, ಆದರೆ ಅದಕ್ಕೊಂದು ಕೊನೆಯಿತ್ತು. ಪತ್ರಿಕೆ ಮಡಚಿಟ್ಟು ಅಥವಾ ಟಿವಿ ಆಫ್ ಮಾಡಿ ಜನ ತಮ್ಮ ಕೆಲಸದಲ್ಲಿ ನಿರತರಾಗುತ್ತಿದ್ದರು. ಆದರೆ ಇಂದು ಆ ಪರಿಸ್ಥಿತಿ ಇಲ್ಲ.

ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಪ್ರತೀ ಸೆಕೆಂಡಿಗೂ ಬ್ರೇಕಿಂಗ್ ನ್ಯೂಸ್ಗಳು ಅಪ್ಡೇಟ್ ಆಗುತ್ತಲೇ ಇರುತ್ತವೆ. ಒಂದೇ ಒಂದು ‘ಸ್ವೈಪ್’ ಮಾಡಿದರೆ ಸಾಕು; ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆಯುತ್ತಿರುವ ದುರಂತ, ಯುದ್ಧ ಅಥವಾ ವಿವಾದಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ. ಸಾಕು ಎನಿಸಿದರೂ ಹೆಬ್ಬೆರಳು ಮಾತ್ರ ತಾನಾಗಿಯೇ ಸ್ಕ್ರಾಲ್ ಮಾಡುತ್ತಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಬಳಸುವ ಬಹುತೇಕರು ಈ ‘ಡೂಮ್ಸ್ಕ್ರೋಲಿಂಗ್’ (ಹಿಂಸೆ, ನಕಾರಾತ್ಮಕ ಅಥವಾ ಕೆಟ್ಟ ಸುದ್ದಿಗಳನ್ನು ಮೊಬೈಲ್ನಲ್ಲಿ ಗಂಟೆಗಟ್ಟಲೆ ನಿರಂತರವಾಗಿ ಓದುವ/ನೋಡುವ ಅಭ್ಯಾಸ) ಜಾಲಕ್ಕೆ ಸಿಲುಕಿದ್ದಾರೆ. ಕೊನೆಗೆ ಫೋನ್ ಕೆಳಗಿಟ್ಟಾಗ ಅವರೆಲ್ಲರಿಗೂ ಒಂದು ರೀತಿಯ ಮಾನಸಿಕ ಆಯಾಸ ಆವರಿಸಿರುತ್ತದೆ.

ಇದು ಕೇವಲ ಸುದ್ದಿಯ ವ್ಯಾಮೋಹವಲ್ಲ, ಸ್ಪಷ್ಟತೆಯ ಹುಡುಕಾಟ!
ಜನರು ಅಂದುಕೊಂಡಂತೆ ಡೂಮ್ಸ್ಕ್ರೋಲಿಂಗ್ ಎಂದರೆ ಕೇವಲ ಕೆಟ್ಟ ಸುದ್ದಿಗಳ ಮೇಲಿನ ಹಪಹಪಿತನವಲ್ಲ. ಇದರ ಹಿಂದೆ ಮನುಷ್ಯನಿಗೆ ಬೇಕಿರುವ ‘ಸ್ಪಷ್ಟತೆ’ ಅಥವಾ ಭರವಸೆಯ ಹಂಬಲವಿರುತ್ತದೆ. ಜಗತ್ತಿನಲ್ಲಿ ಏನೋ ಅನಾಹುತ ನಡೆದಾಗ, ಮುಂದೇನಾಗಬಹುದು ಎಂಬ ಆತಂಕದಲ್ಲಿ ನಾವು ಅಪ್ಡೇಟ್ಗಳಿಗಾಗಿ ಹುಡುಕಲಾರಂಭಿಸುತ್ತೇವೆ. ಮುಂದಿನ ಆರ್ಟಿಕಲ್ ಅಥವಾ ಮುಂದಿನ ವಿಡಿಯೋ ನೋಡಿದರೆ ನಮಗೆ ಸಂಪೂರ್ಣ ಮಾಹಿತಿ ಸಿಗಬಹುದು ಎಂದು ನಮ್ಮ ಮೆದುಳು ನಂಬಿರುತ್ತದೆ. ಆದರೆ ವಾಸ್ತವದಲ್ಲಿ ಪ್ರತಿ ಉತ್ತರವೂ ಮತ್ತೊಂದು ಹೊಸ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಕೊನೆಗೆ ಮಾಹಿತಿ ಪಡೆಯುವುದಕ್ಕಿಂತ ಹೆಚ್ಚಾಗಿ, ಫೋನ್ ಸ್ಕ್ರಾಲ್ ಮಾಡುವುದನ್ನು ನಿಲ್ಲಿಸಲಾಗದೆ ನಾವು ಒದ್ದಾಡುತ್ತೇವೆ.

ಮೆದುಳಿನ ರಕ್ಷಣಾ ತಂತ್ರವೇ ನಮಗೆ ಶಾಪವಾಯಿತೇ?
ಮನಶ್ಶಾಸ್ತ್ರಜ್ಞರ ಪ್ರಕಾರ: ಮನುಷ್ಯನಿಗೆ ಹುಟ್ಟಿನಿಂದಲೇ ‘ನೆಗೆಟಿವಿಟಿ ಬಯಾಸ್’ (Negativity Bias) ಅಂದರೆ ಸಕಾರಾತ್ಮಕ ವಿಷಯಗಳಿಗಿಂತ ನಕಾರಾತ್ಮಕ ಅಥವಾ ಅಪಾಯಕಾರಿ ವಿಷಯಗಳಿಗೆ ಬೇಗನೆ ಸ್ಪಂದಿಸುವ ನೈಸರ್ಗಿಕ ಗುಣವಿರುತ್ತದೆ.

ಸಾವಿರಾರು ವರ್ಷಗಳ ಹಿಂದೆ ಕಾಡಿನಲ್ಲಿ ಬದುಕುತ್ತಿದ್ದಾಗ, ಪೊದೆಯಲ್ಲಿ ಏನೋ ಶಬ್ದವಾದರೆ ತಕ್ಷಣ ಎಚ್ಚೆತ್ತುಕೊಳ್ಳುವುದು ಮನುಷ್ಯನ ಬದುಕುಳಿಯುವಿಕೆಗೆ ಅನಿವಾರ್ಯವಾಗಿತ್ತು. ಇಂದು ಕಾಡು ಇಲ್ಲದಿದ್ದರೂ ನಮ್ಮ ಮೆದುಳು ಅದೇ ರೀತಿ ಕೆಲಸ ಮಾಡುತ್ತಿದೆ. ಇಂದು ಕಾಡುಪ್ರಾಣಿಗಳ ಜಾಗವನ್ನು ಬ್ರೇಕಿಂಗ್ ನ್ಯೂಸ್ಗಳು ಮತ್ತು ಆತಂಕಕಾರಿ ವಿಡಿಯೋಗಳು ಆಕ್ರಮಿಸಿಕೊಂಡಿವೆ. ಹೀಗಾಗಿ ಪ್ರತೀ ಅಪ್ಡೇಟ್ ಅನ್ನೂ ಮೆದುಳು ಒಂದು ‘ಅಪಾಯ’ ಎಂಬಂತೆ ಭಾವಿಸಿ, ನಮ್ಮ ಗಮನವನ್ನು ಅಲ್ಲಿಂದ ಬೇರೆಡೆಗೆ ಹೋಗಲು ಬಿಡುವುದಿಲ್ಲ.

ಕೊನೆಯೇ ಇಲ್ಲದ ಡಿಜಿಟಲ್ ಲೋಕ
ದಿನಪತ್ರಿಕೆ ಅಥವಾ ಟಿವಿ ಬುಲೆಟಿನ್ಗಳಂತೆ ಸಾಮಾಜಿಕ ಜಾಲತಾಣಗಳಿಗೆ ಯಾವುದೇ ಕೊನೆಯಿರುವುದಿಲ್ಲ. ನೀವು ಸಾಕು ಎನ್ನುವವರೆಗೂ ಅದು ಹೊಸ ಹೊಸ ಕಂಟೆಂಟ್ಗಳನ್ನು ನೀಡುತ್ತಲೇ ಇರುತ್ತದೆ. ಒಂದು ಕ್ಷಣದಲ್ಲಿ ನೀವು ಅಡುಗೆಯ ವಿಡಿಯೋ ನೋಡುತ್ತಿದ್ದರೆ, ಮರುಕ್ಷಣದಲ್ಲೇ ಪ್ರವಾಹದ ದೃಶ್ಯ, ನಂತರ ಯುದ್ಧದ ಅಪ್ಡೇಟ್, ಆಮೇಲೆ ಸೆಲೆಬ್ರಿಟಿಗಳ ವಿವಾದಗಳು ನಿಮ್ಮ ಕಣ್ಣಮುಂದೆ ಬರುತ್ತವೆ. ಒಂದು ಸುದ್ದಿಯ ಭಾವನೆಯನ್ನು ನಮ್ಮ ಮನಸ್ಸು ಜೀರ್ಣಿಸಿಕೊಳ್ಳುವ ಮುನ್ನವೇ ಮತ್ತೊಂದು ಸುದ್ದಿ ಬಂದು ಅಪ್ಪಳಿಸುತ್ತದೆ. ಇದೇ ಕಾರಣಕ್ಕೆ ಜನರು ಯಾವುದೇ ದೈಹಿಕ ಶ್ರಮವಿಲ್ಲದಿದ್ದರೂ ತೀವ್ರ ಮಾನಸಿಕ ಆಯಾಸಕ್ಕೆ ಒಳಗಾಗುತ್ತಿದ್ದಾರೆ.

ಅಲ್ಗಾರಿದಮ್ಗಳ ಮಾಯಾಜಾಲ
ಸಾಮಾಜಿಕ ಜಾಲತಾಣಗಳ ಉದ್ದೇಶ ನಿಮ್ಮನ್ನು ಬೇಸರಗೊಳಿಸುವುದಲ್ಲ, ಬದಲಿಗೆ ನಿಮ್ಮ ಗಮನವನ್ನು ಹಿಡಿದಿಟ್ಟುಕೊಳ್ಳುವುದು ಮಾತ್ರ. ನೀವು ಒಂದು ನಕಾರಾತ್ಮಕ ಸುದ್ದಿಯ ವಿಡಿಯೋವನ್ನು ಹೆಚ್ಚು ಹೊತ್ತು ನೋಡಿದರೆ, ಅಲ್ಲಿನ ‘ಅಲ್ಗಾರಿದಮ್’ ನಿಮಗೆ ಅಂತಹದ್ದೇ ಮತ್ತಷ್ಟು ವಿಡಿಯೋಗಳನ್ನು ಸಜೆಸ್ಟ್ ಮಾಡಲು ಆರಂಭಿಸುತ್ತದೆ. ಹೀಗಾಗಿ ಜಗತ್ತು ನಮಗೆ ವಾಸ್ತವಕ್ಕಿಂತಲೂ ಹೆಚ್ಚು ಕರಾಳವಾಗಿ ಕಾಣಿಸಲು ಆರಂಭವಾಗುತ್ತದೆ.

ಈ ಅಭ್ಯಾಸದಿಂದ ಹೊರಬರುವುದು ಹೇಗೆ?
ಸುದ್ದಿಗಳಿಂದ ದೂರವಿರುವುದು ಅಥವಾ ಜಗತ್ತಿನಲ್ಲಿ ನಡೆಯುವ ಘಟನೆಗಳನ್ನು ನಿರ್ಲಕ್ಷಿಸುವುದು ಇದಕ್ಕೆ ಪರಿಹಾರವಲ್ಲ. ಬದಲಿಗೆ ಮಾಹಿತಿಯನ್ನು ಜವಾಬ್ದಾರಿಯುತವಾಗಿ ಬಳಸುವುದು ಮುಖ್ಯ ಎನ್ನುತ್ತಾರೆ ತಜ್ಞರು.

ಸಮಯ ನಿಗದಿಪಡಿಸಿ: ದಿನದಲ್ಲಿ ಇಷ್ಟೇ ಸಮಯ ಮಾತ್ರ ಸುದ್ದಿ ನೋಡುತ್ತೇನೆ ಎಂದು ನಿರ್ಧರಿಸಿ.

ವಿಶ್ವಾಸಾರ್ಹ ಮೂಲಗಳನ್ನು ನಂಬಿ: ಸಾಮಾಜಿಕ ಜಾಲತಾಣಗಳ ಫೀಡ್ಗಳ ಬದಲಿಗೆ ಬೆರಳೆಣಿಕೆಯಷ್ಟು ಅಧಿಕೃತ ಸುದ್ದಿ ಸಂಸ್ಥೆಗಳನ್ನು ಮಾತ್ರ ಫಾಲೋ ಮಾಡಿ.

ಪ್ರಜ್ಞಾಪೂರ್ವಕವಾಗಿ ತಡೆಯಿರಿ: ನೀವೇಕೆ ಸ್ಕ್ರಾಲ್ ಮಾಡುತ್ತಿದ್ದೀರಿ ಎಂದೇ ತಿಳಿಯದಿದ್ದಾಗ, ತಕ್ಷಣ ಫೋನ್ ಪಕ್ಕಕ್ಕಿಡಿ.

ಇನ್ನು ಕೇವಲ ಐದು ನಿಮಿಷ ನೋಡಿ ಮಲಗುತ್ತೇನೆ ಎಂಬ ನಮ್ಮ ಆಲೋಚನೆಯೇ ಡೂಮ್ಸ್ಕ್ರೋಲಿಂಗ್ ಮೂಲ ಕಾರಣ. ಜಗತ್ತಿನ ಎಲ್ಲಾ ಸುದ್ದಿಗಳೂ ನಮಗೆ ರಾತ್ರೋರಾತ್ರಿ ತಿಳಿಯಬೇಕಾಗಿಲ್ಲ. ಕೆಲವು ಸುದ್ದಿಗಳು ನಾಳೆ ಬೆಳಗ್ಗಿನವರೆಗೂ ಕಾಯಬಲ್ಲವು ಎಂಬ ಸತ್ಯವನ್ನು ಅರಿತುಕೊಳ್ಳುವುದೇ ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now