ಸುದ್ದಿಒನ್, ಹಿರಿಯೂರು, ಆಗಸ್ಟ್. 23 : ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಬದುಕು ಸಾಗಿಸುತ್ತಿರುವ ಕಾಡುಗೊಲ್ಲ ಸಮುದಾಯ ವಾಸಿಸುತ್ತಿರುವ ಹಟ್ಟಿಗಳು ಇಂದಿಗೂ ಜನಪದಕಲೆಗಳ ಮಹಾ ಕಣಜಗಳು ಎಂದು ವಿಶ್ವೇಶ್ವರಯ್ಯ ಜನ ನಿಗಮ ಮಂಡಳಿ ನಿವೃತ್ತ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿ ಸಣ್ಣಚಿತ್ತಯ್ಯ ಹೇಳಿದರು.
ತಾಲ್ಲೂಕಿನ ಶ್ರವಣಗೆರೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದ ಬೋರಲಿಂಗೇಶ್ವರ ಸ್ವಾಮಿ, ಕದರಿ ನರಸಿಂಹ ಸ್ವಾಮಿ ಹಾಗೂ ಶ್ರೀ ವೀರಮಲ್ಲತ್ರಾಯ ಸ್ವಾಮೀಯ ಏಕಾದಶಿ ಹಬ್ಬದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಕಾಡುಗೊಲ್ಲ ಸಮುದಾಯದ ಕಲೆಯಲ್ಲಿ ಶ್ರೀಮಂತಿಕೆ ಹೊಂದಿರುವ ಜನಾಂಗವಾಗಿದೆ.ಈ ಬುಡಕಟ್ಟು ಜನಾಂಗದ ಕಾಡುಗೊಲ್ಲರಿಗೆ ಗಣೆಯೂ ಅಷ್ಟೇ ಮುಖ್ಯ. ದೈವೀ ಶಕ್ತಿಯ ಪ್ರತಿರೂಪ ಎಂದು ನಂಬಿರುವ ಕಾಡುಗೊಲ್ಲರು ಕರಿಯ ಕಂಬಳಿ ಹೊದ್ದು ಗದ್ದುಗೆ ಮೇಲೆ ಗಣೆಯನ್ನು ಇಟ್ಟು ಪೂಜಿಸಿದರೆ ಎಲ್ಲಾ ಸಾಂಸ್ಕೃತಿಕ ವೀರರು ಗಣೆಯನ್ನು ಪ್ರತಿನಿಧಿಸುತ್ತಾರೆ ಎಂಬ ನಂಬಿಕೆ ಇದೆಯಿದೆ. ಜನಪದ ಕಲೆಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ ಗಣೆ, ಕೋಲಾಟ, ಭಜನೆ ಹಾಗೂ ಸೋಬಾನೆ ಪದಗಳನ್ನು ಸಮುದಾಯದ ಯುವಕ, ಯುವತಿಯರು ಮೈಗೂಡಿಸಿಕೊಂಡು, ಮುಂದಿನ ಯುವಪೀಳಿಗೆಗೆ ಪಾರಂಪರಿಕ ಕಲೆಯನ್ನು ತಿಳಿಸಿಕೊಡುವತ್ತ ಶ್ರಮಿಸಬೇಕು. ಜಾತ್ರೆ, ಉತ್ಸವಗಳಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಜನಪದ ಕಲೆ ಉಳಿಸುವಲ್ಲಿ ತಮ್ಮದೇ ರೀತಿಯಲ್ಲಿ ಶ್ರಮಿಸಬೇಕು ಎಂದರು.
ದಶಕಗಳಿಂದ ವಾಸಿಸುತ್ತಿರುವ ನೂರಾರು ಕಾಡುಗೊಲ್ಲರ ಹಟ್ಟಿಗಳನ್ನು ಇಂದಿಗೂ ಕಂದಾಯ ಗ್ರಾಮಗಳೆಂದು ಘೋಷಿಸಿಲ್ಲ. ಇದರಿಂದಾಗಿ ಹಟ್ಟಿಗಳಿಗೆ ಸಿಗಬೇಕಾದ ರಸ್ತೆ, ಕುಡಿಯುವ ನೀರು, ವಿದ್ಯುತ್ ಹಾಗೂ ಮನೆ ನಿರ್ಮಾಣಕ್ಕೆ ತಾಂತ್ರಿಕ ತೊಡಕು ಉಂಟಾಗುತ್ತಿದೆ. ಸಮುದಾಯ ಅಭಿವೃದ್ಧಿ ಹೊಂದಲು ರಾಜಕೀಯ ಅನಿವಾರ್ಯವಾಗಿದೆ. ಆಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಿ ರಾಜಕೀಯ ಅಸ್ತಿತ್ವ ಪಡೆದುಕೊಳ್ಳಬೇಕಿದೆ. ಹಿರಿಯೂರು ಉಪಚುನಾವಣೆಯಲ್ಲಿ ಕಾಡುಗೊಲ್ಲರಿಗೆ ಟಿಕೆಟ್ ನೀಡುವ ಮೂಲಕ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು. ಸರ್ಕಾರ ಕೂಡಲೇ ರಾಜ್ಯದ ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಘೋಷಣೆ ಮಾಡಬೇಕು. ಜತೆಗೆ ಸಮುದಾಯದ ಮಕ್ಕಳಿಗೆ ವಸತಿ ಶಾಲೆಗಳು ಮತ್ತು ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಬೇಕು. ಹಾಲಿನ ಉತ್ಪಾದನೆ ಮತ್ತು ಕುರಿ-ಮೇಕೆ ಸಾಕಣೆಯನ್ನೇ ನಂಬಿಕೊಂಡಿರುವ ಸಮಾಜಕ್ಕೆ ಆಧುನಿಕ ತಂತ್ರಜ್ಞಾನದ ತರಬೇತಿ ಹಾಗೂ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಬೇಕು ಎಂದರು.









