ಸುದ್ದಿಒನ್,ಶಿವಮೊಗ್ಗ,ಮೇ.12: ಪ್ರಕೃತಿಯಲ್ಲಿ ಉಂಟಾಗುತ್ತಿರುವ ಅನಿರೀಕ್ಷಿತ ಹವಾಮಾನ ವೈಪರೀತ್ಯಗಳಿಂದಾಗಿ ಮುಂದಿನ ದಿನಗಳಲ್ಲಿ ಜಗತ್ತು ‘ಜಲ ಕಂಟಕ’ಕ್ಕೆ ಸಾಕ್ಷಿಯಾಗಲಿದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಸೋಮವಾರ ಸೊರಬ ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಮುಂಬರುವ ದಿನಗಳಲ್ಲಿ ಪ್ರಕೃತಿಯಲ್ಲಿ ಭಾರಿ ಬದಲಾವಣೆಗಳು ಕಂಡುಬರಲಿವೆ. ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಜಲಪ್ರಳಯದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಅತಿಯಾದ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಮಳೆಯ ಆರ್ಭಟಕ್ಕೆ ಭೂಮಿ ನಲುಗಲಿದೆ ಎಂದು ಹೇಳಿದ್ದಾರೆ.

ಆಕಸ್ಮಿಕ ಅವಘಡಗಳು ಸಂಭವಿಸುವ ಮೂಲಕ ದೊಡ್ಡ ದೊಡ್ಡ ನಗರಗಳು ತೀವ್ರ ಸಂಕಷ್ಟಕ್ಕೆ ಸಿಲುಕಲಿವೆ ಎಂದು ಅವರು ಎಚ್ಚರಿಸಿದ್ದಾರೆ. ಪ್ರಕೃತಿಯ ವಿಕೋಪದ ನಡುವೆಯೂ ರೈತರಿಗೆ ಒಂದು ಸಮಾಧಾನಕರ ಸುದ್ದಿಯನ್ನು ಶ್ರೀಗಳು ನೀಡಿದ್ದಾರೆ. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗಲಿದ್ದು, ಕೃಷಿ ಕ್ಷೇತ್ರಕ್ಕೆ ಪೂರಕವಾದ ವಾತಾವರಣ ಇರಲಿದೆ ಎಂದು ಅವರು ಆಶಾದಾಯಕವಾಗಿ ನುಡಿದಿದ್ದಾರೆ.


















