ಸುದ್ದಿಒನ್, ಹಿರಿಯೂರು, ಜುಲೈ. 19 : ತಾಲ್ಲೂಕಿನ ಐಮಂಗಲ ಹೋಬಳಿಯ ಗೋಕಟ್ಟೆಗಳು ಹಾಗೂ 61ಕೆರೆಗಳು ಒಳಗೊಂಡಂತೆ ಧರ್ಮಪುರ ಹೋಬಳಿಯ 4 ಕೆರೆಗಳು ಸೇರಿದಂತೆ ಒಟ್ಟು 65 ಕೆರೆಗಳಿಗೆ ನೀರು ತುಂಬಿಸುವ ಜೊತೆಗೆ 37644 ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಮೂಲಕ ನೀರು ಉಣಿಸುವ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಸಿರು ನಿಶಾನೆ ತೋರಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ತಿಳಿಸಿದರು.
ನಗರದ ನಗರಸಭೆ ಕಾರ್ಯಾಲಯ ಸಭಾಂಗಣದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಮಾಹಿತಿ ನೀಡಿದರು.
ಈ ಕಾಮಗಾರಿಯ ಶೇಕಡಾ 90% ಕೆಲಸ ಮುಕ್ತಾಯ ಹಂತ ತಲುಪಿದೆ. ಕಾಮಗಾರಿ ಅನುಷ್ಠಾನ ಹಂತದಲ್ಲಿ ಗ್ರಾಮಿಟಿ ಮುಖಾಂತರ ನೀರು ಹರಿಸಲು ಸಾಧ್ಯವಿರುವ ಹಾಗೂ ಮೂಲ ಡಿಪಿಆರ್ ನಲ್ಲಿ ಕೈಬಿಟ್ಟ ಐಮಂಗಲ ಹೋಬಳಿಯ 49 ಕೆರೆಗಳು ಹಾಗು ಗೋಕಟ್ಟೆಗಳನ್ನು ಸೇರ್ಪಡೆಗೊಳಿಸಿ ಒಟ್ಟಾರೆಯಾಗಿ ನೀರು ತುಂಬಿಸುವ ಯೋಜನೆಗೆ ಕ್ರಮ ಕೈಗೊಳ್ಳಲಾಗಿದ್ದು, ಐಮಂಗಲ ಹೋಬಳಿಯ ಚಿಕ್ಕಸಿದ್ದವ್ವನಹಳ್ಳಿ ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲಿ ಗ್ರಾಮಿಟಿ ಮುಖಾಂತರ ತುಂಬಿಸಲು ಸಾಧ್ಯವಿಲ್ಲದ ಕಾರಣದಿಂದ ಈ ಕೆರೆಯನ್ನು ಈ ಟೆಂಡರ್ ಕಾಮಗಾರಿ ಕೆಲಸದಲ್ಲಿ ಸೇರ್ಪಡೆಗೊಳಿಸುವ ಸಂಬಂಧ ಈಗಾಗಲೇ ವಿಶ್ವೇಶ್ವರ ಜಲ ನಿಗಮದ ಅಧಿಕಾರಿಗಳು ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಚರ್ಚಿಸಲಾಗಿದ್ದು ಕಾಮಗಾರಿ ಅನುಷ್ಠಾನ ವೇಳೆ ಯಾವುದಾದರು ಮೂಲದಲ್ಲಿ ಸೇರ್ಪಡೆಗೊಳಿಸಿ ಕಾಮಗಾರಿ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.
ವಿಶ್ವೇಶ್ವರ ಜಲ ನಿಗಮ ಮುಖಾಂತರ 4 ಪ್ಯಾಕೇಜ್ ಗಳಲ್ಲಿ ಹಿರಿಯೂರು ತಾಲೂಕು ವ್ಯಾಪ್ತಿಗೆ 1421 ಕೋಟಿಗಳ ಟೆಂಡರ್ ಕರೆಯಲಾಗಿದೆ. ಹಿರಿಯೂರು ಕ್ಷೇತ್ರಕ್ಕೆ ಕಳೆದ ಎರಡೂವರೆ ವರ್ಷಗಳಲ್ಲಿ 1400ಕೋಟಿ ರೂಪಾಯಿ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಇದೇ ತಿಂಗಳ ಕೊನೆ ವಾರದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಚಿತ್ರದುರ್ಗ ನಗರಕ್ಕೆ ಭೇಟಿ ನೀಡಲಿದ್ದು, ಅಂದು ಭದ್ರಾ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದರು.
















