ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 05 : ಬೀದರ್ ನಿಂದ ಚಾಮರಾಜನಗರದವರೆಗೆ ಪ್ರವಾಸ ಕೈಗೊಂಡು ರಾಜ್ಯ ಸರ್ಕಾರಿ ಮಹಿಳಾ ನೌಕರರನ್ನು ಸಂಘಟಿಸಲಾಗುವುದೆಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಶಿನಿಗೌಡ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರವಾಸದ ಸಂದರ್ಭದಲ್ಲಿ ಸದಸ್ಯತ್ವ ಅಭಿಯಾನ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಗುವುದು. ಮಹಿಳೆಯರಿಗೆ ವೈದ್ಯಕೀಯ ತಪಾಸಣೆ, ಕಾನೂನು ಅರಿವು ಕುರಿತು ಕಾರ್ಯಾಗಾರ ನಡೆಸುವ ಮೂಲಕ ಜಾಗೃತಿ ಮೂಡಿಸಲಾಗುವುದು.
ಮಹಿಳಾ ನೌಕರರ ಮೇಲೆ ಹಲ್ಲೆ, ಕಿರುಕುಳ, ದೌರ್ಜನ್ಯ ನಡೆಸುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದೆಂದರು.
ಸಂಘಟನೆ ಹುಟ್ಟಿಕೊಂಡು ಎರಡುವರೆ ವರ್ಷಗಳಾಗಿದೆ. ರಾಜ್ಯದ 20 ಜಿಲ್ಲೆಗಳಲ್ಲಿ ಸಂಘಟನೆಯಿದೆ. ಉಳಿದ ಜಿಲ್ಲೆಗಳಲ್ಲಿಯೂ ಸರ್ಕಾರಿ ಮಹಿಳಾ ನೌಕರರನ್ನು ಸಂಘಟಿಸಿ ಸ್ವಾಭಿಮಾನ, ರಕ್ಷಣೆ, ಬದ್ದತೆ, ಹೇಗೆ ಹಕ್ಕು ಪ್ರತಿಪಾದಿಸಬೇಕೆನ್ನುವುದರ ಕುರಿತು ಅರಿವು ಮೂಡಿಸಲಾಗುವುದು. ಆರೋಗ್ಯ ಸಂಜೀವಿನಿ ಯೋಜನೆ
ಪುನರ್ ಪರಿಶೀಲಿಸುವುದು ಸೇರಿದಂತೆ ಎನ್.ಪಿ.ಎಸ್. ರದ್ದುಪಡಿಸಿ ಓ.ಪಿ.ಎಸ್. ಯೋಜನೆ ಜಾರಿಗೆ ತರುವಂತೆ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದರು.
ಮುಂದಿನ ಅಧಿವೇಶನದಲ್ಲಿ ಋತುಚಕ್ರ ರಜೆ ಕಾಯಿದೆ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಿದ್ದಾರೆ. ಸೆ.13 ರನ್ನು ಮಹಿಳಾ ನೌಕರರ ದಿನಾಚರಣೆಯೆಂದು ಘೋಷಿಸುವಂತೆ ಸರ್ಕಾರವನ್ನು ಕೇಳಿದ್ದೇವೆ. ಶಿಶುಪಾಲನಾ ಕೇಂದ್ರ ಸ್ಥಾಪನೆಗೂ ನಮ್ಮ ಬೇಡಿಕೆಯಿದೆ ಎಂದು ರೋಶಿನಿಗೌಡ ಹೇಳಿದರು.
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಎಂ.ಸುಶ್ಮರಾಣಿ, ರಾಜ್ಯ ಖಜಾಂಚಿ ಡಾ.ವೀಣಾ ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿಗಳಾದ ಮಂಜುಳ, ಲಲಿತಮ್ಮ, ಎಂ.ಆಶಾರಾಣಿ, ಡಾ.ವಿಜಯಲಕ್ಷ್ಮಿ ಚಳ್ಳಕೆರೆ ತಾಲ್ಲೂಕು ಅಧ್ಯಕ್ಷೆ ಕರಿಯಮ್ಮ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

