ಜೀತ ಪದ್ಧತಿ ಸಾಮಾಜಿಕ ಅನ್ಯಾಯವಲ್ಲ, ಸಂವಿಧಾನಬದ್ಧವಾಗಿ ದಂಡನೀಯ ಅಪರಾಧ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 09 : ಜೀತ ಪದ್ಧತಿ ಕೇವಲ ಸಾಮಾಜಿಕ ಅನ್ಯಾಯವಲ್ಲ, ಅದು ಸಂವಿಧಾನಬದ್ಧವಾಗಿ ದಂಡನೀಯ ಅಪರಾಧವಾಗಿದೆ ಎಂದು ಗೌರವಾನ್ವಿತ ನ್ಯಾಯಾಧೀಶರಾದ ಪುನಿತ್ ಬಿ.ಆರ್.ಹೇಳಿದರು.
ಜೀತ ಪದ್ಧತಿ ಎಂಬ ಅಘೋಷಿತ ಶೋಷಣಾ ವ್ಯವಸ್ಥೆಗೆ ತೆರೆ ಎಳೆಯುವ ನಿಟ್ಟಿನಲ್ಲಿ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ ಚಳ್ಳಕೆರೆ, ವಕೀಲರ ಸಂಘ, ತಾಲ್ಲೂಕು ಆಡಳಿತ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಪೋಲೀಸ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಕಾನೂನು ಅರಿವು–ನೆರವು ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಮಾತನಾಡಿ, ಜೀತ ಪದ್ಧತಿಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ನ್ಯಾಯಾಂಗ ಹಾಗೂ ಆಡಳಿತ ಸಿದ್ಧವಿದೆ ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.

ಜೀತ ಪದ್ದತಿಯಿಂದ ಮುಕ್ತಿಗೊಂಡವರಿಗೆ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಉಚಿತ ಕಾನೂನು ನೆರವು ಲಭ್ಯವಿದ್ದು, ಹಿಂಜರಿಕೆ ಬೇಡ ಎಂದು ಹೇಳಿದರು.
ತಹಶಿಲ್ದಾರ ರೇಹಾನ್ ಪಾಷ ಮಾತನಾಡಿ, ಜೀತ ಪದ್ಧತಿ ನಿರ್ಮೂಲನೆಗೆ ತಾಲೂಕು ಆಡಳಿತ ಬದ್ಧವಾಗಿದ್ದು , ತಾಲ್ಲೂಕಿನಲ್ಲಿ ಜೀತ ಪದ್ದತಿ ಇರುವು ಗಮನಕ್ಕೆ ಬಂದರೆ ತಕ್ಷಣವೇ ತಾಲ್ಲೂಕು ಆಡಳಿತಕ್ಕೆ ತಿಳಿಸಬೇಕು.ತಾಲ್ಲೂಕು ಮಟ್ಟದಲ್ಲಿ ಪರಿಶೀಲನೆ ಹಾಗೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಕೀಲರ ಸಂಘದ ಉಪಾಧ್ಯಕ್ಷೆ ಬಿ.ಟಿ. ಶ್ಯಾಮಲ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಜೀತ ಪದ್ಧತಿ ವಿಭಿನ್ನ ರೂಪಗಳಲ್ಲಿ ಮುಂದುವರಿಯುತ್ತಿದ್ದು, ಅದನ್ನು ತಡೆಗಟ್ಟಲು ಕಾನೂನು ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.

ಉಪನ್ಯಾಸಕ ಕುಮಾರಸ್ವಾಮಿ ಮಾತನಾಡಿ, ಕಾರ್ಮಿಕರು ತಮ್ಮ ಶ್ರಮಕ್ಕೆ ನ್ಯಾಯಸಮ್ಮತ ಕೂಲಿ ಪಡೆಯುವುದು ಹಕ್ಕು; ಶೋಷಣೆ ಕಂಡುಬಂದಲ್ಲಿ ತಕ್ಷಣ ಆಡಳಿತ ಹಾಗೂ ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.

ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ಆರ್. ಆಶ್ವತ್ ನಾಯಕ ಜೀತ ಪದ್ಧತಿ ವಿರುದ್ಧ ಕಾನೂನುಗಳ ಅನುಷ್ಠಾನದಲ್ಲಿ ವಕೀಲರ ಸಂಘ ಸದಾ ಸಹಕಾರ ನೀಡಲಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಇಒ ಕೆ.ಎಸ್. ಸುರೇಶ್, ಪಿಎಸ್‌ಐ ಈರೇಶ, ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಕಾರ್ಮಿಕ ನಿರೀಕ್ಷಕಿ ಟಿ. ಕುಸುಮ, ವಕೀಲರ ಸಂಘದ ಖಜಾಂಚಿ ಕುಮಾರಿ ಬಸವರಾಜೇಶ್ವರಿ, ಉಪನ್ಯಾಸಕರಾದ ಶಾಂತಕುಮಾರಿ, ಶ್ರೀನಿವಾಸ್,ತಾಲ್ಲೂಕು ಕಚೇರಿ ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Share This Article
Enable Notifications OK No thanks