ತುಮಕೂರು: ಜಿಲ್ಲೆಯ ಸಿದ್ದಗಂಗಾ ಮಠ ಅಂದ್ರೆ ಇಡೀ ರಾಜ್ಯದಲ್ಲಿಯೇ ಹೆಸರುವಾಸಿ. ರಾಜ್ಯದ ಮೂಲೆ ಮೂಲೆಯಿಂದಾನೂ ಮಕ್ಕಳು ಇಲ್ಲಿಗೆ ಓದುವ ಸಲುವಾಗಿ ಬರ್ತಾರೆ. ಸಾವಿರಾರು ಮಕ್ಕಳು ಮಠದಲ್ಲಿದ್ದಾರೆ. ಹೀಗಿರುವಾಗ ಮಠಕ್ಕೆ ಬರುವ ನೀರಿಗೆ ಸಮಸ್ಯೆಯಾದರೆ ಎಷ್ಟು ಸಂಕಟವಾಗಬೇಡ. ಇದಕ್ಕೆಲ್ಲ ಕಾರಣವಾಗಿದ್ದಿದ್ದು, ಕೆಐಎಡಿಬಿ ವಿದ್ಯುತ್ ಬಿಲ್ ಪಾವತಿ ಮಾಡದೆ ಇದ್ದದ್ದೆ ಕಾರಣ.
ಕೆಐಎಡಿಬಿ ವಿದ್ಯುತ್ ಬಿಲ್ ಪಾವತಿ ಮಾಡದೆ ಇದ್ದ ಕಾರಣಕ್ಕೆ ಹೊನ್ನೇನಹಳ್ಳಿ ಕೆರೆಗೆ ದೇವರಾಯಪಟ್ಟಣದ ಕೆರೆಗೆ ನೀರು ಹರಿಸುವ ವ್ಯವಸ್ಥೆಯನ್ನು ವಿದ್ಯುತ್ ಇಲಾಖೆ ಸ್ಥಗಿತಗೊಳಿಸಿತ್ತು. ಇದು ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಎಚ್ಚೆತ್ತುಕೊಂಡ ಕೆಐಎಡಿಬಿ ಇದೀಗ 1.96 ಕೋಟಿ ಹಣವನ್ನ ಪಾವತಿ ಮಾಡಿದೆ. ಇದರಿಂದ ಮಠದ ನೀರಿನ ಸಮಸ್ಯೆಗೆ ಪರಿಹಾರವೂ ಸಿಕ್ಕಂತೆ ಆಗಿದೆ. ಕಳೆದ ವರ್ಷ ವಿದ್ಯುತ್ ವೆಚ್ಚ ಭರಿಸುವ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಮಠವು ನೀರನ್ನು ಬಳಸದೇ ಇದ್ದರೂ ವಿದ್ಯುತ್ ಬಿಲ್ ಪಾವತಿಸುವಂತೆ ನೋಟಿಸ್ ನೀಡಲಾಗಿತ್ತು.
ಈ ವಿಷಯ ಗಮನಕ್ಕೆ ಬಂದ ನಂತರ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರು ವೆಚ್ಚವನ್ನು ಸರ್ಕಾರವೇ ಭರಿಸುವ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ, ದೀರ್ಘಕಾಲ ಬಿಲ್ ಪಾವತಿ ಆಗದ ಹಿನ್ನೆಲೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಪ್ರತಿದಿನ ಸಾವಿರಾರು ಭಕ್ತರು ಹಾಗೂ ಸುಮಾರು ಸಾವಿರಾರು ವಿದ್ಯಾರ್ಥಿಗಳು ಮಠದ ಮೇಲೆ ಅವಲಂಬಿತರಾಗಿರುವುದರಿಂದ ನೀರಿನ ಕೊರತೆ ದೊಡ್ಡ ಸಮಸ್ಯೆಯಾಗಲಿದೆ ಎಂಬ ಆತಂಕ ವ್ಯಕ್ತವಾಗಿತ್ತು. ದೇವರಾಯಪಟ್ಟಣ ಕೆರೆಗೆ ಹಲವು ತಿಂಗಳಿನಿಂದ ನೀರು ಹರಿಯದ ಹಿನ್ನೆಲೆ ಸ್ಥಳೀಯ ರೈತರಲ್ಲಿಯೂ ಚಿಂತೆ ಹೆಚ್ಚಾಗಿತ್ತು.

