ಸುದ್ದಿಒನ್, ಹೊಸದುರ್ಗ, ಅಕ್ಟೋಬರ್. 04 : ತಾಲ್ಲೂಕಿನ ಮಧುರೆ ಗ್ರಾಮದ ಮಾರುತಿ ಎಂಬುವವರ ಮನೆ ಪಕ್ಕದಲ್ಲಿರುವ ಶೆಡ್ ನಲ್ಲಿ ಕೂಡಿಹಾಕಿದ್ದ ಕುರಿಗಳ ಪೈಕಿ ಎರಡು ಕುರಿಗಳನ್ನು ಕಳುವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದುರ್ಗ ಪೊಲೀಸರು ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿದ್ದಾರೆ.
ಶಿವಮೊಗ್ಗದ ರಾಜು (30 ವರ್ಷ) ಮತ್ತು ವಿಜೇಂದ್ರ (26 ವರ್ಷ) ಬಂಧಿತ ಆರೋಪಿಗಳು. ಕುರಿಗಳನ್ನು ಕಳ್ಳತನ ಮಾಡಿರುವ ಸಂಬಂಧ ಮಧುರೆ ಗ್ರಾಮದ ಮಾರುತಿ ಎಂಬುವವರು ಸೆಪ್ಟೆಂಬರ್. 30 ರಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಹೊಸದುರ್ಗ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದರು.
ಖಚಿತ ಮಾಹಿತಿ ಮೇರೆಗೆ ಅಕ್ಟೋಬರ್ 02 ರಂದು ಬೆಳಿಗ್ಗೆ 4-00 ಗಂಟೆಯ ಸಮಯದಲ್ಲಿ ಹೊಸದುರ್ಗ ತಾಲ್ಲೂಕಿನ ಜೋಡಿಶ್ರೀರಂಗಾಪುರ ಗ್ರಾಮದಲ್ಲಿರುವ ಹೈಸ್ಕೂಲ್ ಬಳಿ ಮಾರುತಿ ಸುಜುಕಿ ಎರಿಟಿಗಾ ಕಾರನಲ್ಲಿದ್ದ ಆರೋಪಿಗಳಾದ ಶಿವಮೊಗ್ಗ ಮೂಲದ
ರಾಜು (30 ವರ್ಷ) ಮತ್ತು ವಿಜೇಂದ್ರ (26 ವರ್ಷ) ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಅವರಿಂದ ಹೊಸದುರ್ಗ ಪೊಲೀಸ್ ಠಾಣೆಯ 1, ಪಂಚನಹಳ್ಳಿ ಪೊಲೀಸ್ ಠಾಣೆಯ 1 ಹಾಗೂ ಹೊನ್ನವಳ್ಳಿ ಪೊಲೀಸ್ ಠಾಣೆಯ 1 ಪ್ರಕರಣದಲ್ಲಿ ಒಟ್ಟು 3,40,000/- ರೂ ಬೆಲೆಯ 14 ಕುರಿಗಳನ್ನು ಮತ್ತು 8 ಮೇಕೆಗಳನ್ನು ವಶಕ್ಕೆ ಪಡೆದುಕೊಂಡಿದ್ದು ಹಾಗೂ ಕೃತ್ಯಕ್ಕೆ ಉಪಯೋಗಿಸಿದ 12 ಲಕ್ಷ ಬೆಲೆಯ ಕಾರು ಸೇರಿದಂತೆ ಒಟ್ಟು 15,40,000/- ಮೌಲ್ಯದ ಕುರಿಮೇಕೆಗಳು ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಂಜಿತ್ ಕುಮಾರ ಬಂಡಾರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪತ್ತೆ ಕಾರ್ಯಾಚರಣೆಯು ಎಸ್.ಪಿ. ರಂಜಿತ್ ಕುಮಾರ ಬಂಡಾರು ಅವರ ಸೂಚನೆಯ ಮೇರೆಗೆ,
ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶಿವಕುಮಾರ ಮಾರ್ಗದರ್ಶನದಲ್ಲಿ,
ಶಿವಕುಮಾರ ಟಿ ಎಂ ಡಿ.ವೈ.ಎಸ್.ಪಿ ಹಿರಿಯೂರುರವರ ಉಸ್ತುವಾರಿಯಲ್ಲಿ
ರಮೇಶ್ ಕೆ. ಟಿ. ಪಿ.ಐ. ಹೊಸದುರ್ಗರವರ ನೇತೃತ್ವದಲ್ಲಿ ಹೊಸದುರ್ಗ ಪೊಲೀಸ್ ಠಾಣೆ ಮಹೇಶ್ ಕುಮಾರ ಪಿ ಎಸ್ ಐ ಹಾಗೂ ಸಿಬ್ಬಂದಿಯವರಾದ ಉಮೇಶ್, ಕುಮಾರ, ಗಂಗಾಧರ, ಚಂದ್ರಪ್ಪ ತಾಂತ್ರಿಕ ಸಿಬ್ಬಂದಿಯವರಾದ ಸತೀಶ್, ಪ್ರಕಾಶ್ ಮುಂತಾದವರು ಭಾಗವಹಿಸಿದ್ದರು.

