ಬೆಂಗಳೂರು: ರಾಜ್ಯ ಶಾಲಾ ಶಿಕ್ಷಣ ಇಲಾಖೆಯು ಬೋಧಕೇತರ ನೌಕರರ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಅಧಿಕೃತ ಕೌನ್ಸಿಲಿಂಗ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈಗಾಗಲೇ ಶೇಕಡಾ 4ರಷ್ಟು ಕೋರಿಕೆ ವರ್ಗಾವಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ಮುಂದಿನ ಹಂತವಾಗಿ ದೀರ್ಘಾವಧಿಯಿಂದ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ಶೇಕಡಾ 20ರ ಮಿತಿಯಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸಲು ಇಲಾಖೆ ಸಜ್ಜಾಗಿದೆ.
ಜುಲೈ 2 ಮತ್ತು 3 ರಂದು ಇಇಡಿಎಸ್ (EEDS) ತಂತ್ರಾಂಶದಲ್ಲಿ ನೌಕರರ ಸೇವಾ ಮಾಹಿತಿಗಳ ಇಂದೀಕರಣ ಹಾಗೂ ಪರಿಶೀಲನೆ ಕಾರ್ಯ ನಡೆದಿದೆ. ಜುಲೈ 3 ರಂದು ದೀರ್ಘಾವಧಿ ಸೇವೆಯಲ್ಲಿರುವ ಸಿಬ್ಬಂದಿಗಳ ತಾತ್ಕಾಲಿಕ ಆದ್ಯತಾ ಪಟ್ಟಿಯನ್ನು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಈ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು ಜುಲೈ 3 ರಿಂದ ಜುಲೈ 6 ರವರೆಗೆ ಕಾಲಾವಕಾಶ ನೀಡಲಾಗಿದೆ. ಸ್ವೀಕೃತವಾಗುವ ಆಕ್ಷೇಪಣೆಗಳ ಪರಿಶೀಲನೆ ಮತ್ತು ಅವುಗಳ ಇತ್ಯರ್ಥ ಪ್ರಕ್ರಿಯೆಯು ಜುಲೈ 9 ರೊಳಗೆ ಪೂರ್ಣಗೊಳ್ಳಲಿದ್ದು, ಜುಲೈ 10 ರಂದು ಅಂತಿಮ ಆದ್ಯತಾ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.
ಅಂತಿಮ ಜೇಷ್ಠತಾ ಪಟ್ಟಿಯ ಆಧಾರದ ಮೇಲೆ ಜುಲೈ 13 ರಂದು ಕೌನ್ಸಿಲಿಂಗ್ ಪ್ರಕ್ರಿಯೆ ನಡೆಯಲಿದೆ. ಕೌನ್ಸಿಲಿಂಗ್ ದಿನದಂದು ನೌಕರರ ಜೇಷ್ಠತಾ ಕ್ರಮಾಂಕವನ್ನು ಪರಿಗಣಿಸಿ ಸ್ಥಳ ಆಯ್ಕೆಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ. ಮೈಸೂರು ಮತ್ತು ಬೆಂಗಳೂರು ವಿಭಾಗದ ಸಹ ನಿರ್ದೇಶಕರ ನೇರ ಮೇಲುಸ್ತುವಾರಿಯಲ್ಲಿ ಆಯಾ ಉಪನಿರ್ದೇಶಕರ (ಡಿಡಿಪಿಐ) ಕಚೇರಿ ಕೇಂದ್ರಗಳಲ್ಲಿ ಈ ಪ್ರಕ್ರಿಯೆ ಜರುಗಲಿದೆ. ವಿಶೇಷವಾಗಿ ಬೆಂಗಳೂರು ವ್ಯಾಪ್ತಿಯ ಕೇಂದ್ರ ಕಚೇರಿಗಳು ಹಾಗೂ ಉಪನಿರ್ದೇಶಕರ ಕಚೇರಿಗಳ ಸಿಬ್ಬಂದಿಗಳು ಬೆಂಗಳೂರು ದಕ್ಷಿಣ ಜಿಲ್ಲಾ ಕೇಂದ್ರಕ್ಕೆ ಹಾಜರಾಗಿ ಕೌನ್ಸಿಲಿಂಗ್ ಪಡೆಯಬೇಕಾಗಿ ಇಲಾಖೆ ಸೂಚಿಸಿದೆ. ಒಂದು ವೇಳೆ ನೌಕರರು ಕೌನ್ಸಿಲಿಂಗ್ಗೆ ಹಾಜರಾಗದೆ ಅಥವಾ ಸ್ಥಳ ಆಯ್ಕೆ ಮಾಡದೆ ನಿರ್ಲಕ್ಷ್ಯ ವಹಿಸಿದರೆ, ‘ಡಮ್ಮಿ ಕೌನ್ಸಿಲಿಂಗ್’ ಮೂಲಕ ಇಲಾಖೆಯೇ ನೇರವಾಗಿ ತಂತ್ರಾಂಶದ ಆಧಾರದ ಮೇಲೆ ಸ್ಥಳ ನಿಯುಕ್ತಿಗೊಳಿಸಲಿದೆ.
ಅಂತಿಮ ಆದ್ಯತಾ ಪಟ್ಟಿಯನ್ನು ಸಿದ್ಧಪಡಿಸುವಾಗ ಜೇಷ್ಠತಾ ಅಂಕಗಳು, ದೀರ್ಘಾವಧಿ ಸೇವಾ ವಿವರಗಳು ಹಾಗೂ ವಿನಾಯಿತಿ ವರ್ಗಗಳನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಇಇಡಿಎಸ್ ತಂತ್ರಾಂಶದಲ್ಲಿ ನೌಕರರು ತಮ್ಮ ಸೇವಾ ವಿವರಗಳನ್ನು ಸರಿಯಾಗಿ ದಾಖಲಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಮಾಹಿತಿ ಇಂದೀಕರಣದಲ್ಲಿ ಲೋಪ ಉಂಟಾಗಿ, ಆದ್ಯತೆ ಅಥವಾ ವಿನಾಯಿತಿಗಳು ಕೈತಪ್ಪಿ ಹೋದರೆ ಅದಕ್ಕೆ ಇಲಾಖೆ ಜವಾಬ್ದಾರಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಎಲ್ಲಾ ಸಿಬ್ಬಂದಿಗಳು ಮತ್ತು ಸಂಬಂಧಪಟ್ಟ ಪ್ರಾಧಿಕಾರಿಗಳು ನಿಯಮಾವಳಿಗಳ ಪ್ರಕಾರವೇ ಕಾರ್ಯನಿರ್ವಹಿಸಬೇಕೆಂದು ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.



















