ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 19 : ಪರಮರತ್ನ ಸಂಗೀತ ಸಂಸ್ಥೆ ವತಿಯಿಂದ ಗಾನಯೋಗಿ ಪಂಡಿತ ಪಂಚಾಕ್ಷರ ಗವಾಯಿಗಳವರ ಜಯಂತೋತ್ಸವ ಅಂಗವಾಗಿ ಗಾನಯೋಗಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಕೃಪಾಶೀರ್ವಾದದೊಂದಿಗೆ ಇದೇ ಫೆ.21 ಮತ್ತು 22ರಂದು ಚಿತ್ರದುರ್ಗ ನಗರದ ಮದಕರಿ ವೃತ್ತದ ವಾಲ್ಮೀಕಿ ಭವನದಲ್ಲಿ “ಸರಿಗಮ ಸಂಗೀತ ನೃತ್ಯೋತ್ಸವ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಫೆ.21ರಂದು ಸಂಜೆ 5ಕ್ಕೆ ಉದ್ಘಾಟನಾ ಸಮಾರಂಭ ನೆರವೇರಲಿದೆ. ಶಿರಹಟ್ಟಿ ಬಾಳೇಹೊಸೂರು ಸಂಸ್ಥಾನ ಮಠದ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಗೋವಿಂದ ಎಂ.ಕಾರಜೋಳ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ನಗರಸಭಾ ಸದಸ್ಯ ಕೆ.ಟಿ.ಸುರೇಶ್ ಭಾಗವಹಿಸುವರು. ಉದ್ಯಮಿ ಸೈಟ್ ಬಾಬಣ್ಣ, ಚನ್ನಕೇಶವ ಜ್ಯುವಲರ್ಸ್ ಮಾಲೀಕ ಸಿ.ಮಂಜುನಾಥ್, ಜ್ಞಾನ ಜ್ಯೋತಿ ವಿದ್ಯಾಮಂದಿರ ಅಧ್ಯಕ್ಷ ಜಿ.ಟಿ.ಕಿರಣ್ ಕುಮಾರ್ ಗೌರವ ಉಪಸ್ಥಿತಿ ವಹಿಸುವರು.
ಹೂವಿನಹಡಗಲಿಯ ನಿವೃತ್ತ ಪ್ರಾಂಶುಪಾಲ ಟಿ.ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸುವರು. ಅಂಜನಾ ನೃತ್ಯ ಕಲಾ ಕೇಂದ್ರದ ಡಾ.ನಂದಿನಿ ಶ್ರೀ ಶಿವಪ್ರಕಾಶ್, ಲಾಸಿಕಾ ಫೌಂಡೇಶನ್ ಶ್ವೇತಾ ಮಂಜುನಾಥ್, ನಾಟ್ಯ ರಂಜಿನಿ ನೃತ್ಯ ಕಲಾ ಕೇಂದ್ರದ ಜಿ.ಕಿರಣ್ ಅವರಿಗೆ ಗೌರವ ಸನ್ಮಾನ ಮಾಡಲಾಗುವುದು. ಧಾರವಾಡದ ಲೇಖಕ ಡಾ.ಎ.ಎಲ್.ದೇಸಾಯಿ ಅವರ ಶ್ರೀ ಗುರು ವಚನಪ್ರಭ-ವಚನ ವಿಶ್ಲೇಷಣೆ ಸಂಪುಟ-1 ಹಾಗೂ ಗೋಕರ್ಣದ ಡಾ.ಹರೀಶ್ ಹೆಗಡೆ ಸಂಪಾದನೆಯ ಗಾನಸುಧಾ-ಭಾಗ-1, 2 ಪುಸ್ತಕ ಬಿಡುಗಡೆ ಮಾಡುವರು. ಧಾರವಾಡದ ವಿದೂಷಿ ವಿಜೇತಾ ವೆರ್ಣೇಕರ್ ಮತ್ತು ತಂಡದವರಿಂದ ಕಥಕ್ ನೃತ್ಯ ವೈಭವ ನಡೆಯಲಿದೆ.
ಫೆ.22ರಂದು ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸುವರು. ಮುಖ್ಯ ಅತಿಥಿಗಳಾಗಿ ಮುಖ್ಯ ಅತಿಥಿಗಳಾಗಿ ಶಾಸಕ ಟಿ.ರಘುಮೂರ್ತಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಚಲವಾದಿ, ಹೊಸಪೇಟೆ ಉಪ ನೊಂದಣಾಧಿಕಾರಿ ಡಿ.ಜಿ.ಪ್ರೇಮಾನಂದ ಭಾಗವಹಿಸುವರು. ದುರ್ಗದ ಸಿರಿ ಕಲಾ ಸಂಘದ ಅಧ್ಯಕ್ಷ ಎನ್.ಆರ್.ಮಹಾಂತರೆಡ್ಡಿ, ಅಹೋಬಲ ಟಿ.ವಿ.ಎಸ್. ಮಾಲೀಕ ಪಿ.ವಿ.ಅರುಣ್ ಕುಮಾರ್, ಸಮಾಜ ಸೇವಕ ಬಿ.ಆರ್.ಪುಷ್ಪಲತಾ ಗೌರವ ಉಪಸ್ಥಿತಿ ವಹಿಸುವರು.
ಸರಿಗಮ ಸಂಗೀತ ನೃತ್ಯೋತ್ಸವ ಸಮಿತಿ ಅಧ್ಯಕ್ಷ ಸತ್ಯನಾರಾಯಣ ರೆಡ್ಡಿ ಅಧ್ಯಕ್ಷತೆ ವಹಿಸುವರು. ಹಿರಿಯ ಸಂಗೀತ ಕಲಾವಿದರಾದ ತೋಟಪ್ಪ ಉತ್ತಂಗಿ, ಗಿರಿಜಾ ಹಿರೇಮಠ, ಮೀನಾಕ್ಷಿ ಭಟ್, ಶಾರದಾ ಬ್ರಾಸ್ ಬ್ಯಾಂಡ್ನ ಎಸ್.ವಿ.ಗುರುಮೂರ್ತಿ ಅವರಿಗೆ ಗೌರವ ಸನ್ಮಾನ ಮಾಡುವರು. ವಿದೂಷಿ ಸಂಗೀತಾ ಕಟ್ಟಿ ಅವರಿಗೆ ಪರಮರತ್ನ ಸಂಗೀತ ಪುರಸ್ಕಾರ ನೀಡಿ ಗೌರವಿಸಲಾಗುವುದು. ನಂತರ ವಿದೂಷಿ ಸಂಗೀತಾ ಕಟ್ಟಿ ಅವರಿಗೆ ವಿಶೇಷ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.




