ದೆಹಲಿ.ಜುಲೈ.03: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿ ವರ್ಷಕ್ಕೂ ಅಧಿಕ ಕಾಲ ಕಳೆದಿರುವ ನಟ ದರ್ಶನ್ ಗೆ ಈಗ ಮತ್ತೊಂದು ಭಾರಿ ನಿರಾಸೆಯಾಗಿದೆ.
ಈ ಹಿಂದೆ ವೈದ್ಯಕೀಯ ಕಾರಣಗಳಿಗಾಗಿ ದರ್ಶನ್ ಅವರಿಗೆ ಕೋರ್ಟ್ ಕರುಣಿಸಿದ್ದ ಮಧ್ಯಂತರ ಜಾಮೀನನ್ನು ಸುಪ್ರೀಂಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿತ್ತು. ಅಷ್ಟೇ ಅಲ್ಲದೆ, ಮುಂದಿನ ಒಂದು ವರ್ಷದ ಅವಧಿಯಲ್ಲಿ ಕನಿಷ್ಠ 60 ಪ್ರಮುಖ ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳದಿದ್ದರೆ ಮಾತ್ರವೇ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂಬ ಕಠಿಣ ಷರತ್ತನ್ನು ವಿಧಿಸಿತ್ತು.
ಸುಪ್ರೀಂಕೋರ್ಟ್ ನೀಡಿದ್ದ ಈ ಕಠಿಣ ಆದೇಶಕ್ಕೆ ತಿದ್ದುಪಡಿ ಕೋರಿ ದರ್ಶನ್ ಪರ ವಕೀಲರು ಸುಪ್ರೀಂಕೋರ್ಟ್ ಗೆ ಹೊಸದೊಂದು ಪ್ರಾಥಮಿಕ ಅರ್ಜಿಯನ್ನು ಸಲ್ಲಿಸಿದ್ದರು. ತುರ್ತು ಪರಿಸ್ಥಿತಿಗಳು ಎದುರಾದಾಗ ಜಾಮೀನು ಕೋರಲು ನಟನಿಗೆ ಕಾನೂನಾತ್ಮಕ ಅವಕಾಶ ನೀಡಬೇಕು ಮತ್ತು ಆದೇಶದ ಕೆಲವು ನಿಯಮಗಳನ್ನು ಸಡಿಲಿಸಬೇಕು ಎಂಬುದು ಈ ಅರ್ಜಿಯ ಮುಖ್ಯ ಉದ್ದೇಶವಾಗಿತ್ತು.
ಆದರೆ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್, ಇದು ವಿಚಾರಣೆಗೆ ಅರ್ಹವಲ್ಲ ಎಂಬ ಕಾರಣ ನೀಡಿ ತಾಂತ್ರಿಕ ಆಧಾರದ ಮೇಲೆ ತಿರಸ್ಕರಿಸಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಕೋರ್ಟ್ ನ ವಿಚಾರಣಾ ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ ಎಂದು ರಿಜಿಸ್ಟ್ರಾರ್ ಸ್ಪಷ್ಟಪಡಿಸಿದೆ.





















