ಸುದ್ದಿಒನ್, ಚಿತ್ರದುರ್ಗ, ಜುಲೈ. 03 : ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಪ್ರಜಾವಾಣಿಯ ಸಹಾಯಕ ವರದಿಗಾರ ಕೆ.ಪಿ.ಓಂಕಾರಮೂರ್ತಿ ಅವರನ್ನು ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರುನಾಡ ವಿಜಯಸೇನೆಯಿಂದ ಸನ್ಮಾನಿಸಲಾಯಿತು.
ರಾಯಚೂರು ರಿಪೋರ್ಟ್ರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕಥೆ, ಕವನ ಸ್ಪರ್ಧೆಯ ಕಥಾ ವಿಭಾಗದಲ್ಲಿ ಕೆ.ಪಿ.ಓಂಕಾರಮೂರ್ತಿ ಅವರ ‘ಡೆಡ್ಲೈನ್’ ಕಥೆಗೆ ಪ್ರಥಮ ಬಹುಮಾನ ಬಂದಿರುವುದು ಜಿಲ್ಲೆಗೆ ಹೆಮ್ಮೆತರುವ ಸಂಗತಿ. ಇದು ಅನೇಕರಿಗೆ ಸ್ಫೂರ್ತಿ ಆಗಬೇಕು. ಪತ್ರಕರ್ತನಲ್ಲಿದ್ದ ಕತೆಗಾರರನ್ನು ಗುರುತಿಸಿದ ರಾಯಚೂರು ರಿಪೋರ್ಟ್ರ್ಸ್ ಗಿಲ್ಡ್ ಕಾರ್ಯ ಶ್ಲಾಘನೀಯ ಎಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ತಿಳಿಸಿದರು.
ಈ ವೇಳೆ ಹಿರಿಯ ಪತ್ರಕರ್ತರಾದ ಚಳ್ಳಕೆರೆ ಬಸವರಾಜ್, ಈ.ಮಹೇಶ್ ಬಾಬು, ಡಿ.ಕುಮಾರಸ್ವಾಮಿ, ವಿ.ಚಂದ್ರಪ್ಪ, ಸಾಕ್ಷಿ ವೆಂಕಟೇಶ್, ಹನುಮಂತರಾಜು ಇದ್ದರು.


















