Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಪಡಿತರ ವಿತರಣೆ ಕಡ್ಡಾಯ: ಆಹಾರ ಇಲಾಖೆ ಕಟ್ಟುನಿಟ್ಟಿನ ಆದೇಶ

---Advertisement---

ಬೆಂಗಳೂರು.ಜುಲೈ.22: ರಾಜ್ಯದಲ್ಲಿ ಪಡಿತರ ಧಾನ್ಯ ವಿತರಣೆಯಲ್ಲಿ ಎದುರಾಗುತ್ತಿರುವ ವಿಳಂಬವನ್ನು ತಡೆಗಟ್ಟಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದೆ. ಜುಲೈ ತಿಂಗಳ ಅನ್ನಭಾಗ್ಯ ಹಾಗೂ ಎನ್ಎಫ್ಎಸ್ಎ (NFSA) ಪಡಿತರ ಧಾನ್ಯಗಳನ್ನು ಸಾರ್ವಜನಿಕರಿಗೆ ಯಾವುದೇ ಅಡಚಣೆಯಿಲ್ಲದೆ ತಲುಪಿಸಲು ಪ್ರತಿದಿನ ಬೆಳಿಗ್ಗೆ 6-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ನ್ಯಾಯಬೆಲೆ ಅಂಗಡಿಗಳನ್ನು ತೆರೆದಿಟ್ಟು ವಿತರಿಸಬೇಕು ಎಂದು ಇಲಾಖೆಯ ಆಯುಕ್ತರು ರಾಜ್ಯದ ಎಲ್ಲಾ ಜಂಟಿ ಮತ್ತು ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ನ್ಯಾಯಬೆಲೆ ಅಂಗಡಿಯವರು ಸಗಟು ಮಳಿಗೆಗಳಿಂದ ಪೂರ್ಣ ಪ್ರಮಾಣದ ಆಹಾರಧಾನ್ಯಗಳನ್ನು ಎತ್ತುವಳಿ ಮಾಡಿಕೊಂಡಿದ್ದರೂ, ತಕ್ಷಣವೇ ಸಾರ್ವಜನಿಕರಿಗೆ ವಿತರಿಸದೆ ವಿಳಂಬ ಮಾಡುತ್ತಿರುವುದು ಮತ್ತು ಎಲ್ಲಾ ದಾಸ್ತಾನು ಬಂದ ನಂತರವೇ ವಿತರಣೆ ಆರಂಭಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಈ ರೀತಿ ವಿಳಂಬ ಧೋರಣೆ ಅನುಸರಿಸುವುದನ್ನು ತಕ್ಷಣವೇ ತಡೆದು, ಗೋದಾಮಿನಿಂದ ದಾಸ್ತಾನು ಲಭ್ಯವಾದ ಕೂಡಲೇ ತಕ್ಷಣದಿಂದಲೇ ಪಡಿತರ ಹಂಚಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎಂದು ಸುತ್ತೋಲೆಯಲ್ಲಿ ಕಟ್ಟುನಿಟ್ಟಾಗಿ ತಿಳಿಸಲಾಗಿದೆ.

ಜುಲೈ 2026 ರ ಮಾಹೆಯ ಅಂತ್ಯದೊಳಗಾಗಿ ಎಲ್ಲಾ ಅರ್ಹ ಪಡಿತರ ಚೀಟಿದಾರರಿಗೆ ಸಂಪೂರ್ಣವಾಗಿ ಪಡಿತರ ತಲುಪಿಸಬೇಕಾಗಿರುವುದರಿಂದ, ಕಡ್ಡಾಯವಾಗಿ ನಿಗದಿಪಡಿಸಿದ ಅವಧಿಯಲ್ಲಿ ಅಂಗಡಿಗಳನ್ನು ತೆರೆದಿಡಬೇಕಾಗಿದೆ. ಈ ಕಾರ್ಯನಿರ್ವಹಣಾ ಸಮಯವನ್ನು ನಿಯಮಿತವಾಗಿ ಪರಿಶೀಲಿಸಲು ಮತ್ತು ಮೇಲ್ವಿಚಾರಣೆ ನಡೆಸಲು ಆಹಾರ ನಿರೀಕ್ಷಕರಿಗೆ ನಿರ್ದೇಶಿಸಲಾಗಿದೆ. ಸಾರ್ವಜನಿಕರಿಂದ ಯಾವುದೇ ದೂರುಗಳು ಬರದಂತೆ ಪಡಿತರ ಹಂಚಿಕೆ ಮಾಡಬೇಕು ಹಾಗೂ ಸೂಚನೆಗಳನ್ನು ಉಲ್ಲಂಘಿಸುವ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.

 

Join WhatsApp

Join Now

Join Telegram

Join Now