ಮೈಸೂರು: ಕಳೆದ ಕೆಲವು ದಿನಗಳಿಂದ ಯತ್ನಾಳ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಬಿಜೆಪಿಯಲ್ಲಿರುವ ಹಲವರು ಯತ್ನಾಳ್ ಬಣ ಸೇರಿಕೊಂಡಿದ್ದು, ಬಿವೈ ವಿಜಯೇಂದ್ರ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಈ ಬಾರಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯತ್ನಾಳ್ ಬಣ ಸ್ಪರ್ಧಿಸಬೇಕೆಂದುಕೊಂಡಿತ್ತು. ಆದರೆ ಈ ಮಧ್ಯೆ ಶಿಸ್ತು ಸಮಿತಿ ನೋಟೀಸ್ ಕೂಡ ನೀಡಿದೆ. ಈ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ಬಂದಿದ್ದಾರೆ.
ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಫೈಲ್ ಒಂದನ್ನ ಇಟ್ಟು ಪೂಜೆ ಮಾಡಿಸಿದ್ದಾರೆ. ಆದರೆ ಆ ಫೈಲ್ ಯಾವುದು ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಆದರೆ ಚಾಮುಂಡಿ ತಾಯಿಯ ಬಳಿ ಫೈಲ್ ಇಟ್ಟು ಪೂಜೆ ಮಾಡಿಸಿದ್ದಾರೆಂದರೆ ಅದು ಬಹಳ ಮುಖ್ಯವಾದ ಫೈಲ್ ಆಗಿರುತ್ತದೆ. ಯಾಕಂದ್ರೆ ವಿಜಯೇಂದ್ರ ವಿರುದ್ಧ ಸದಾ ವಾಗ್ದಾಳಿ ನಡೆಸುತ್ತಿರುವ ಯತ್ನಾಳ್, ಇನ್ನಷ್ಟು ದಾಖಲೆಗಳನ್ನೇನಾದರೂ ಅದರಲ್ಲಿಟ್ಟು ಪೂಜೆ ಸಲ್ಲಿಸಿದ್ದಾರಾ..? ಪೂಜೆಯ ಬಳಿಕ ಆ ದಾಖಲೆಗಳನ್ನ ಹೈಕಮಾಂಡ್ ಗೆ ನೀಡುತ್ತಾರಾ ಎಂಬುದನ್ನು ನೋಡಬೇಕಿದೆ.
ನಿನ್ನೆ ಬೇರೆ ಯತ್ನಾಳ್ ನೇತೃತ್ವದಲ್ಲಿ ರೆಬೆಲ್ ನಾಯಕರ ಸಭೆ ನಡೆದಿದೆ. ಈ ಬಗ್ಗೆ ಮಹತ್ವದ ಚರ್ಚೆ ಕೂಡ ನಡೆದಿದೆ. ಆದರೆ ಯತ್ನಾಳ್ ಬಣದಿಂದ ಮತ್ತಿಬ್ಬ ಸ್ಪರ್ಧಿಯನ್ನು ಕಣಕ್ಕೆ ಇಳಿಸುವ ಯೋಚನೆಯನ್ನು ಕೈಬಿಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಹೈಕಮಾಂಡ್ ನಾಯಕರೇ ಈ ಸಂಬಂಧ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸುಮ್ಮನಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣ ಪಕ್ಷದಲ್ಲಿ ಸಂಪೂರ್ಣ ಸಹಕಾರ ಸಿಗದೆ ಇರುವುದು ಹಾಗೂ ಕೆಲವು ತಟಸ್ಥ ಬಣದವರು ಬೆಂಬಲ ನೀಡಲು ಹಿಂದೇಟು ಹಾಕುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.











