ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 17 : ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬುಧವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮ ಜರುಗಿತು.
ವಿಶ್ವಕರ್ಮ ಸಮಾಜದ ಮಾಜಿ ತಾಲ್ಲೂಕು ಅಧ್ಯಕ್ಷ ಸಿ. ನಾರಾಯಣಾಚಾರ್ ಪ್ರಾಸ್ತಾವಿಕವಾಗಿ ಮಾತನಾಡಿ ವಿಶ್ವಕರ್ಮ ಸಮಾಜ ದೇಶಕ್ಕೆ ಪಂಚ ಕಸಬುಗಳ ಮೂಲಕ ವಿಶೇಷವಾದ ಕೊಡುಗೆಯನ್ನು ನೀಡಿದೆ. ದೇಶದಲ್ಲಿ ಸುಮಾರು ಏಳು ಕೋಟಿಗೂ ಹೆಚ್ಚು ವಿಶ್ವಕರ್ಮ ಜನಸಂಖ್ಯೆಯಿದ್ದು, ಈ ಸಮುದಾಯವು ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಅನ್ಯಾಯಕ್ಕೆ ಒಳಪಟ್ಟಿದೆ ಎಂದರು.
ತಹಶೀಲ್ದಾರ್ ಎಂ ಸಿದ್ದೇಶ್ ಮಾತನಾಡಿ ನಾಡಿನ ಇತಿಹಾಸವನ್ನು ಕಟ್ಟಿ ಕೊಡುವಲ್ಲಿ ಪ್ರಾಚೀನ ಸ್ಮಾರಕಗಳು ಮತ್ತು ದೇವಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಂತಹ ಸ್ಮಾರಕ ಮತ್ತು ದೇವಾಲಯಗಳನ್ನು ನಿರ್ಮಿಸಿರುವ ನಮ್ಮ ಪೂರ್ವಿಕರ ಶ್ರಮ ಮತ್ತು ಸೃಜನಾತ್ಮಕ ಕಲೆ ಇಂದಿನ ಯುವ ಪೀಳಿಗೆಗೆ ಮಾದರಿ. ಶಿಲ್ಪಕಲೆಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದೆ. ರಾಜ್ಯ ಸರ್ಕಾರವು ವಿಶ್ವಕರ್ಮರ ಕೊಡುಗೆಯನ್ನು ಪರಿಗಣಿಸಿ 2016ರಲ್ಲಿ ವಿಶ್ವಕರ್ಮ ಜಯಂತಿ ಆಚರಣೆಯನ್ನು ಜಾರಿಗೆ ತಂದಿತು. ಇಂದಿನ ಆಧುನಿಕ ಎಂಜಿನಿಯರುಗಳು ಅಸಾಧ್ಯವೆನ್ನುವ ಅನೇಕ ರೀತಿಯ ಕಲೆಯನ್ನು ಬಹಳ ಹಿಂದೆಯೇ ನಮ್ಮ ವಿಶ್ವಕರ್ಮರು ವಿಶ್ವಕ್ಕೆ ಪರಿಚಿಯಿಸಿದರು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಆರ್ ಬಾಲಕೃಷ್ಣ ಮಾತನಾಡಿದರು. ಈ ಸಂದರ್ಭದಲ್ಲಿ ಸತ್ಯನಾರಾಯಣಚಾರ್, ಪ್ರಭಾಕರ್ ಚಾರ್, ಗುರುಮೂರ್ತಿ ಚಾರ್, ಮಂಜುನಾಥ ಚಾರ್, ಮಲ್ಲೇಶ್ ಚಾರ್, ಗೋಪಾಲಚಾರ್, ರಾಘವೇಂದ್ರ, ಶಶಿಧರ್, ಸುರೇಶ್, ಈಶ್ವರಪ್ಪ ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು ಇದ್ದರು.











