ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 25 : ಯಾದಗಿರಿ ಜಿಲ್ಲೆ ಗುರುಮಠಕಲ್ ಇಂದಿರನಗರದ ಅಲೆಮಾರಿ ವೇಷಗಾರ(ಬುಡ್ಗಜಂಗಮ) ಸಮುದಾಯಕ್ಕೆ ಸೇರಿದ ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರವೆಸಗಿ ಅಮಾನುಷವಾಗಿ ಕೊಲೆ ಮಾಡಿರುವವರನ್ನು ಕೂಡಲೆ ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಅಲೆಮಾರಿ ಬುಡ್ಗ ಜಂಗಮ ಒಕ್ಕೂಟ, ಅಲೆಮಾರಿ, ಅರೆಅಲೆಮಾರಿ ಮಹಾಸಭಾ, ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು.
ಚಿಂದಿ ಆಯಲು ಮನೆಯಿಂದ ಹೊರಗೆ ಹೋಗಿದ್ದ ಶ್ಯಾಮಮ್ಮ, ಸಾಯಮ್ಮ ಇವರುಗಳು ನೀಲಹಳ್ಳಿ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವುದನ್ನು ನೋಡಿದರೆ ಅತ್ಯಾಚಾರವೆಸಗಿ ನಂತರ ಕೊಲೆಗೈದಿರುವ ಅನುಮಾನವಿದೆ. ಇದರಿಂದ ಬಡ್ಗ ಜಂಗಮ ಸಮುದಾಯ ತೀವ್ರ ಆತಂಕಕ್ಕೆ ಒಳಗಾಗಿದೆ. ಘಟನೆ ನಡೆದು ಹದಿನೈದು ದಿನಗಳಾಗಿದ್ದರೂ ಇನ್ನು ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ. ಸಾವಿಗೀಡಾಗಿರುವ ಕುಟುಂಬಗಳಿಗೆ ಸರ್ಕಾರ ತಲಾ ಐವತ್ತು ಲಕ್ಷ ರೂ.ಗಳ ಪರಿಹಾರ ನೀಡುವಂತೆ ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.
ಬುಡ್ಗ ಜಂಗಮ ಒಕ್ಕೂಟದ ಅಧ್ಯಕ್ಷ ವಸಂತಕುಮಾರ್, ಅಲೆಮಾರಿ ಅರೆಅಲೆಮಾರಿ ಮಹಾಸಭಾ ಅಧ್ಯಕ್ಷ ಕೆ.ಎಂ.ನಾಗರಾಜ, ದಾಸ ಸಮುದಾಯದ ನಾಗರಾಜ, ವಿಭೂತಿ ಮಾರಪ್ಪ, ತಿಪ್ಪೇಸ್ವಾಮಿ, ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್ಕುಮಾರ್, ಶಿವಕುಮಾರ್, ಮಂಜುನಾಥ, ರವಿಕುಮಾರ್, ಬಾಬು ಟಿ
ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.













