2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎದುರಾದ ರಾಜಕೀಯ ಬೆಳವಣಿಗೆಗಳ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರ ಸಲಹೆ ಅನುಸರಿಸಿ ಕಾಂಗ್ರೆಸ್ಗೆ ಸೇರಿದ್ದರೆ, ಖಂಡಿತವಾಗಿ ಗೆಲುವು ಸಾಧಿಸುತ್ತಿದ್ದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಹಿನ್ನೆಲೆ ನಡೆದ ರಾಜಕೀಯ ಬೆಳವಣಿಗೆಗಳನ್ನು ವಿವರಿಸಿದರು. ಮಾರ್ಚ್ 13ರೊಳಗೆ ತಮಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅದಕ್ಕೂ ಮುನ್ನ ಮಾರ್ಚ್ 12ರಂದು ಡಿಸಿಎಂ ಡಿಕೆ ಶಿವಕುಮಾರ್, ಕುಣಿಗಲ್ ಶಾಸಕ ರಂಗನಾಥ್ ಅವರ ಮೊಬೈಲ್ ಮೂಲಕ ಕರೆ ಮಾಡಿ ಸುಮಾರು 12 ನಿಮಿಷ ಮಾತುಕತೆ ನಡೆಸಿದ್ದರು.
ಗೌರವಯುತವಾಗಿ ಮನೆಗೆ ಬಂದು ಕಾಂಗ್ರೆಸ್ಗೆ ಕರೆದುಕೊಂಡು ಹೋಗಿ ಟಿಕೆಟ್ ನೀಡುವುದಾಗಿ ಅವರು ಆಹ್ವಾನಿಸಿದ್ದರು ಎಂದು ಪ್ರತಾಪ್ ಸಿಂಹ ಹೇಳಿದರು.ಈ ಆಫರ್ಗೆ ತಾವು ಹೇಗೆ ಪ್ರತಿಕ್ರಿಯೆ ನೀಡಿದರು ಎಂಬುದನ್ನೂ ಅವರು ವಿವರಿಸಿದರು. ತಮ್ಮ ಕುಟುಂಬದ ಆರೆಸ್ಸೆಸ್ ಹಿನ್ನೆಲೆ ಹಾಗೂ ಸಿದ್ಧಾಂತ ಭಿನ್ನತೆಗಳನ್ನು ಉಲ್ಲೇಖಿಸಿ, ಕಾಂಗ್ರೆಸ್ ಸೇರ್ಪಡೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾಗಿ ಹೇಳಿದರು. ಈ ವೇಳೆ ಡಿಕೆ ಶಿವಕುಮಾರ್, ಪ್ರಸ್ತುತ ಅಸ್ತಿತ್ವ ಮುಖ್ಯ, ಐದು ವರ್ಷಗಳ ಬಳಿಕ ಮತ್ತೆ ಹಿಂದಿರುಗಬಹುದು ಎಂದು ಸಲಹೆ ನೀಡಿದ್ದರು. ಅಲ್ಲದೆ ಕೆಲ ಕಾಂಗ್ರೆಸ್ ಶಾಸಕರು ಕೂಡ ಸಂಪರ್ಕಿಸಿದ್ದರೂ, ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವುದು ತನ್ನನ್ನು ನಂಬಿರುವ ಯುವಕರಿಗೆ ದ್ರೋಹವಾಗುತ್ತದೆ ಎಂಬ ಕಾರಣದಿಂದ ಆ ಆಫರ್ ಅನ್ನು ಸೌಜನ್ಯದಿಂದ ತಿರಸ್ಕರಿಸಿದ್ದಾಗಿ ಹೇಳಿದರು.

ತಮ್ಮ ರಾಜಕೀಯ ಬಲದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಪ್ರತಾಪ್ ಸಿಂಹ, ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರೂ ಗೆಲುವು ಖಚಿತವಾಗುತ್ತಿತ್ತು ಎಂದರು. ಈಗ ಸಂಸತ್ತಿಗೆ ಪ್ರವೇಶ ಸಾಧ್ಯವಾಗದಿದ್ದರೂ, 2028ರಲ್ಲಿ ವಿಧಾನಸೌಧ ಪ್ರವೇಶಿಸುವ ಗುರಿ ಹೊಂದಿದ್ದೇನೆ ಎಂದು ತಮ್ಮ ಮುಂದಿನ ರಾಜಕೀಯ ಯೋಜನೆಗಳನ್ನು ತಿಳಿಸಿದ್ದಾರೆ. ಈ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.



















