ಬೆಂಗಳೂರು: ಇಂದು ಜನಪ್ರತಿನಿಧಿಗಳ ನ್ಯಾಯಾಲಯ ಮಹತ್ವದ ತೀರ್ಪನ್ನ ನೀಡಿದೆ. ಅತ್ಯಾಚಾರ ಅಪರಾಧಿಯಾಗಿರುವ ಪ್ರಜ್ವಲ್ ರೇವಣ್ಣರಿಗೆ ಇಂದು ಶಿಕ್ಷೆಯನ್ನ ವಿಧಿಸಲಾಗಿದೆ.ಜೀವಾವಧಿ ಶಿಕ್ಷೆ ವಿಧಿಸಿ ಜೊತೆಗೆ ದಂಡವನ್ನು ವಿಧಿಸಿದೆ. ಸರ್ಕಾರದ ಪರ ವಕೀಲರು ಶಿಕ್ಷೆಯಾಗಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ದಂಡ ಎಷ್ಟು, ಸಂತ್ರಸ್ತೆಗೆ ಎಷ್ಟು ಎಂಬೆಲ್ಲಾ ಮಾಹಿತಿಯನ್ನು ವಕೀಲರು ನೀಡಿದ್ದಾರೆ.
ಮಾಧ್ಯಮದವರ ಜೊತೆಗೆ ಮಾತನಾಡಿದ ವಕೀಲರು, ಎಂಪಿ ಮತ್ತು ಎಂಎಲ್ಎ ವಿಶೇಷ ನ್ಯಾಯಾಲಯವು ಪ್ರಜ್ವಲ್ ರೇವಣ್ಣಗೆ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಿದೆ. ಜೀವಾವಧಿ ಶಿಕ್ಷೆ ಅಂದ್ರೆ ಸಂಪೂರ್ಣ ಜೀವನದುದ್ದಕ್ಕೂ ಜೈಲಿನಲ್ಲಿಯೇ ಇರಬೇಕು. ಅದಲ್ಲದೇ ನಾವೇನು ಪ್ರಾಸಿಕ್ಯೂಷನ್ ಪರವಾಗಿ ಯಾವ್ಯಾವ ಕಾಲಂ ಅನುಸರಿಸಿದ್ದೇವೋ ಎಲ್ಲಾ ಕಲಂಗಳಲ್ಲಿಯೂ ಸಹ ಪ್ರತ್ಯೇಕ ಶಿಕ್ಷೆಯನ್ನು ವಿಧಿಸಿದೆ. ಪ್ರತ್ಯೇಕ ದಂಡವನ್ನು ಸಹ ವಿಧಿಸಿದೆ. ಒಟ್ಟಾರೆ 11 ಲಕ್ಷದ 50 ಸಾವಿರ ದಂಡ ವಿಧಿಸಿದೆ.
ಅದರಲ್ಲಿ ನಮ್ಮ ಸರ್ಕಾರದ ಪರ ನಾನು ಮತ್ತು ನಮ್ಮ ಸ್ನೇಹಿತರಾದ ಜಗದೀಶ್ ಅವರು ವಾದ ಮಂಡಿಸಿದಂತೆ, ಬಹು ಮುಖ್ಯ ಪಾಲು 11 ಲಕ್ಷ 25 ಸಾವಿರವನ್ನು ಸಂತ್ರಸ್ತೆಗೆ ಕೊಡಬೇಕೆಂದು ನ್ಯಾಯಾಲಯ ಘೋಷಿಸಿದೆ. ಯಾಕಂದ್ರೆ ಸಂತ್ರಸ್ತೆ, ಯಾವುದೇ ಒಳ್ಳೆಯ ಸ್ಥಿತಿಯಲ್ಲಿಲ್ಲ ಹಾಗೂ ಸಮಾಜಕ್ಕೆ ಮುಖ ತೋರಿಸುವಂತೆ ಇಲ್ಲ. ದುಡಿಯುವುದಕ್ಕೆ ಹೋಗುವುದಕ್ಕೂ ಕಷ್ಟ. ಮೇಲಾಗಿ ಆರೋಪಿ ಸಂಸತ್ ಸದಸ್ಯನಾಗಿದ್ದ ಕಾರಣ ಅದೇ ಅವಧಿಯಲ್ಲಿ ಈ ಅತ್ಯಾಚಾರವನ್ನು ಎಸಗಿದ್ದರಿಂದ ಗಂಭೀರವಾಗಿ ಪರಿಗಣಿಸಲಾಗಿದೆ. ಹೀಗಾಗಿ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ವಿಧಿಸಿ ನ್ಯಾಯಾಲಯ ಒಳ್ಳೆಯದೆ ಮಾಡಿದೆ. ಈ ಮೂಲಕ ಕಾನೂನು ಉಲ್ಲಂಘಿಸುವವರಿಗೆ ಸರಿಯಾದ ಪಾಠ ಇದಾಗಿದೆ ಎಂದಿದ್ದಾರೆ.


