ಹುಬ್ಬಳ್ಳಿ: ಅತ್ಯಾಚಾರ ಕೇಸಲ್ಲಿ ಬಂಧಿಯಾಗಿದ್ದ ಪ್ರಜ್ವಲ್ ರೇವಣ್ಣನಿಗೆ ಕೋರ್ಟ್ ಜೀವಾವಧಿ ಶಿಕ್ಷೆಯನ್ನ ನೀಡಿದೆ. ಹತ್ತು ಲಕ್ಷ ದಂಡವನ್ನ ಹಾಕಿದೆ. ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಕಾರಣ ಈ ಶಿಕ್ಷೆಯಿಂದ ಬಿಜೆಪಿಗೆ ಮುಜುಗರವಾಗಿದೆ ಎಂಬೆಲ್ಲಾ ಚರ್ಚೆಗಳು ನಡೆಯುತ್ತಿದೆ. ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉತ್ತರ ನೀಡಿದ್ದಾರೆ. ಬಿಜೆಪಿಗ್ಯಾಕೆ ಇದರಿಂದ ಮುಜುಗರವಾಗಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಜೋಶಿ ಅವರು, ದೇಶದ ನ್ಯಾಯಾಂಗ ವ್ಯವಸ್ಥೆ ಸರಿಯಾಗಿದೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಿದೆ. ಇದರಿಂದ ಬಿಜೆಪಿಗೆಂಥ ಮುಜುಗರ ಆಗುತ್ತೆ. ಪೊಲೀಸರು ತನಿಖೆಮಾಡಿದ್ದಾರೆ, ಕೋರ್ಟ್ ತೀರ್ಪು ನೀಡಿದೆ. ಜೆಡಿಎಸ್ ಒಂದು ಪ್ರತ್ಯೇಕ ಪಕ್ಷ. ಆ ಪಕ್ಷದ ಜೊತೆಗೆ ನಮ್ಮ ಮೈತ್ರಿ ಇದೆ. ಪ್ರಜ್ವಲ್ ಎಷ್ಟು ಜನ ಅಪರಾಧಿಗಳ ಜೊತೆಗೆ ಇದ್ರು. ರಾಹುಲ್ ಗಾಂಧಿ ಖಲಿಸ್ತಾನಿ ಉಗ್ರರ ಜೊತೆಗಿರುವ ಫೋಟೋ ಇದೆ. ಯಾಸಿನ್ ಮಲ್ಲಿಕ್ ಜೊತೆಗಿರುವ ಫೋಟೋ ಕೂಡ ಇದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆ ಬಗ್ಗೆ ಮಾತಾಡೋದು ಏನಿದೆ ಹೇಳಿ. ಅವರ ಪ್ರಕರಣದ ಬಗ್ಗೆ ಮೊದಲು ಗೊತ್ತಿರಲಿಲ್ಲ. ವಿಚಾರ ಹೊರಗೆ ಬಂದ್ಮೇಲೆ ತನಿಖೆ ನಡೆಸಿ, ಶಿಕ್ಷೆ ನೀಡಿದ್ದಾರೆ. ಇವ್ರೆಲ್ಲಾ ಯಾರೆಲ್ಲಾ ಅಪರಾಧಿಗಳ ಜೊತೆಗಿದ್ರು ಅನ್ನೋದನ್ನ ಒಂದೊಂದು ಹೇಳಿದ್ರೆ. ಯಾರ್ಯಾರು ಏನೇನು, ಅವರ ಬ್ಯಾಗ್ರೌಂಡ್ ಅನ್ನೋ ಕೆಸರೆರಚಾಟಕ್ಕೆ ಹೋಗಲ್ಲ. ಕಾಂಗ್ರೆಸ್ ಪಾರ್ಟಿಯ ಜಾತಕ ಬಿಚ್ಚಿಡಬಹುದು. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಿದೆ. ಕಾಂಗ್ರೆಸ್ ಪಾರ್ಟಿಯಲ್ಲಿ ಎಷ್ಟು ಜನಕ್ಕೆ ಶಿಕ್ಷೆ ಆಗಿದೆ ಅಂತ ಶಿವಕುಮಾರ್ ಹೇಳಿ ತೆಗೆಸಬೇಕು ಎಂದಿದ್ದಾರೆ.


