ಬೆಂಗಳೂರು: ಇಂದು ಜನಪ್ರತಿನಿಧಿಗಳ ನ್ಯಾಯಾಲಯವು ಪ್ರಜ್ವಲ್ ರೇವಣ್ಣನವರಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ಪ್ರಜ್ವಲ್ ರೇವಣ್ಣನಿಗೆ ಜೀವಾವಧಿ ಶಿಕ್ಷೆ ನೀಡಿದ್ದು 5 ಲಕ್ಷ ದಂಡದ ಶಿಕ್ಷೆಯನ್ನ ನೀಡಲಾಗಿದೆ. ಜನಪ್ರತಿನಿಧಿಗಳ ಕೋರ್ಟ್ ನಿಂದ ಈ ತೀರ್ಪು ಪ್ರಕಟವಾಗಿದೆ.
ಶಿಕ್ಷೆ ಪ್ರಕಟಕ್ಕೂ ಮೊದಲು ಎರಡು ಕಡೆಯ ವಕೀಲರ ವಾದ ಪ್ರತಿವಾದವನ್ನು ಕೋರ್ಟ್ ಆಲಿಸಿತ್ತು. ಹಣ ಮಾಡಲೆಂದು ಆತ ರಾಜಕೀಯಕ್ಕೆ ಸೇರಿಲ್ಲ. ಸಂತ್ರಸ್ತೆ ಸಮಾಜದಿಂದ ದೂರವಾಗಿಲ್ಲ. ತನ್ನ ಸಂಸಾರದೊಂದಿಗೆ ಜೀವನ ನಡೆಸುತ್ತಿದ್ದಾರೆ. ಯುವ ಸಂಸದನಾಗಿ ಪ್ರಜ್ವಲ್ ಸಮಾಜ ಸೇವೆ ಮಾಡಿದ್ದಾರೆ. ಪ್ರಜ್ವಲ್ ಜೀವನ ಹಾಗೂ ಹೆಸರು ಹಾಳಾಗಿದೆ ಎಂದು ಪ್ರಜ್ವಲ್ ಪರ ವಕೀಲೆ ನಳೀನಿ ಅವರು ವಾದ ಮಂಡಿಸಿದ್ದರು. ಇದೇ ವೇಳೆ ಜೀವನ ಪರ್ಯಂತದ ಶಿಕ್ಷೆಗೆ ಎಸ್ಪಿಪಿ ಮನವಿ ಮಾಡಿದ್ದರು.
ಕೋರ್ಟ್ ನಲ್ಲಿ ಪ್ರಜ್ವಲ್ ರೇವಣ್ಣ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಂದೆ ತಾಯಿಯನ್ನ 6 ತಿಂಗಳಿನಿಂದ ನೋಡಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ನಾನು ಮಾಡಿದ ಒಂದೇ ಒಂದು ತಪ್ಪು ಎಂದರೆ ನಾನು ರಾಜಕೀಯದಲ್ಲಿ ಬಹಳ ಬೇಗ ಬೆಳೆದಿದ್ದು, ಅದೇ ಈಗ ನನಗೆ ಮುಳುವಾಗಿದೆ. ನನ್ನ ರೆಕಾರ್ಡ್ ಪರಿಶೀಲಿಸಿ ನಾನು ಮೆರಿಟ್ ವಿದ್ಯಾರ್ಥಿ. ನಾನು ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿದ್ದೇನೆ ಎಂದಿದ್ದಾರೆ.
ಇನ್ನು ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆಯಾಗಿದ್ದು, ಎರಡು ಅತ್ಯಾಚಾರ ಕೇಸ್ ನಿಂದ ವಕೀಲರು ಹಿಂದೆ ಸರಿದಿದ್ದಾರೆ. ವಕೀಲ ಅರುಣ್ ಅವರು ಈ ಕೇಸ್ ಗಳನ್ನ ನಡೆಸುತ್ತಿದ್ದರು. ಇದೀಗ ಅತ್ಯಾಚಾರ ಕೇಸನ್ನ ನಾನು ಮುಂದುವರೆಸಲ್ಲ ಎಂದಿದ್ದಾರೆ. ಈ ಮೂಲಕ ಪ್ರಜ್ವಲ್ ರೇವಣ್ಣನಿಗೆ ಮತ್ತಷ್ಟು ಹಿನ್ನಡೆಯಾಗಿದೆ.


