ಉಕ್ರೇನ್-ರಷ್ಯಾ ನಡುವಿನ ಯುದ್ಧವನ್ನು ತಕ್ಷಣವೇ ಅಂತ್ಯಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಕರೆ ನೀಡಿದ್ದಾರೆ. ಗಾಂಧಿ ಮತ್ತು ಬುದ್ಧನ ನಾಡಾಗಿರುವ ಭಾರತವು ಜಗತ್ತಿನಲ್ಲಿ ಶಾಂತಿ ಸ್ಥಾಪಿಸುವ ಎಲ್ಲ ಪ್ರಯತ್ನಗಳನ್ನು ಸದಾ ಬೆಂಬಲಿಸುತ್ತದೆ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.ಕಿರ್ಗಿಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ಪುಟಿನ್ ನಡುವೆ ಮಹತ್ವದ ಮಾತುಕತೆ ನಡೆದಿದೆ. ಈ ವೇಳೆ ಉಕ್ರೇನ್ ಯುದ್ಧದ ಕುರಿತು ಭಾರತದ ನಿಲುವನ್ನು ಪ್ರಧಾನಿ ಮೋದಿ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
‘ಯುದ್ಧ ಅಂತ್ಯಗೊಳಿಸಿ ಎನ್ನುವುದೇ ಭಾರತದ ಸಂದೇಶ’
ಪ್ರತಿದಿನ ನಡೆಯುತ್ತಿರುವ ಯುದ್ಧ ಮಾನವತೆಯನ್ನು ಶಾಂತಿಯಿಂದ ದೂರಕ್ಕೆ ಕೊಂಡೊಯ್ಯುತ್ತಿದೆ. ಹೀಗಾಗಿ ಯುದ್ಧ ಮುಂದುವರಿಸುವ ಸ್ಥಿತಿಯಿಂದ ಹೊರಬಂದು, ಅದನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು ಎಂದು ಪ್ರಧಾನಿ ಮೋದಿ ಪುಟಿನ್ ಅವರಿಗೆ ಮನವಿ ಮಾಡಿದ್ದಾರೆ.ಉಕ್ರೇನ್ ವಿಚಾರವಾಗಿ ಈ ಹಿಂದೆಯೂ ಇಬ್ಬರು ನಾಯಕರು ಹಲವು ಬಾರಿ ಚರ್ಚೆ ನಡೆಸಿದ್ದಾರೆ. ಹಿಂದಿನ ಭೇಟಿಗಳ ಸಂದರ್ಭದಲ್ಲಿ ಪುಟಿನ್ ಅವರು ಈ ವಿಚಾರದ ವಿವಿಧ ಆಯಾಮಗಳನ್ನು ತಮ್ಮೊಂದಿಗೆ ಹಂಚಿಕೊಂಡಿದ್ದರು. ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ ಎಂದಿಗೂ ಮುಂದುವರಿಯಲಿದೆ ಎಂದು ಮೋದಿ ಹೇಳಿದ್ದಾರೆ.

ಇದೇ ವೇಳೆ, ಪುಟಿನ್ ಅವರ ಭಾರತ ಭೇಟಿಯನ್ನೂ ಪ್ರಧಾನಿ ಮೋದಿ ನೆನಪಿಸಿಕೊಂಡಿದ್ದಾರೆ. ಕಳೆದ ವರ್ಷ ನಡೆದ ಭೇಟಿಯು ಯಶಸ್ವಿಯಾಗಿದ್ದು, ಸದಾ ನೆನಪಿನಲ್ಲಿ ಉಳಿಯುವಂತಹದ್ದಾಗಿತ್ತು ಎಂದು ಮೋದಿ ಹೇಳಿದ್ದಾರೆ.ಮುಂದಿನ ವಾರ ಪುಟಿನ್ ಅವರು ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಅದಕ್ಕೂ ಮುನ್ನ ಉಭಯ ನಾಯಕರ ನಡುವೆ ನಡೆದ ಈ ಮಾತುಕತೆ ಮಹತ್ವ ಪಡೆದುಕೊಂಡಿದೆ.










