ದಾವಣಗೆರೆ: ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಕ್ಷೇತ್ರದ ಬಗ್ಗೆ ಮಾತನಾಡಿದ್ದಾರೆ. ಶಿವಮೊಗ್ಗದಲ್ಲಿ ಯಾವನಿಗೂ ಬಾಲ ಬಿಚ್ಚೋದಕ್ಕೆ ಬಿಡಲ್ಲ ಎಂದಿದ್ದಾರೆ. ಇತ್ತೀಚೆಗೆ ಭದ್ರಾವತಿಯಲ್ಲಿ ಕಿಡಿಗೇಡಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರು. ಆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಧು ಬಂಗಾರಪ್ಪ, ಅಲ್ಲಿ ಘೋಷಣೆ ಕೂಗಿದ ಪದ ಬೇರೆ ಇದೆ. ಆ ರೀತಿ ಇಲ್ಲವೇ ಇಲ್ಲ. ಪಾಕಿಸ್ತಾನ ಪರ ಕೂಗಿದ್ದು ನಿಮಗೆ ಗೊತ್ತಾ..? ಏನು ಗೊತ್ತು ಹೇಳಿ ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದ್ದಾರೆ.
ಅಲ್ಲದೇ ಏನು ಕೂಗಿದರು ಎಂಬ ಬಗ್ಗೆ ನನ್ನ ಹತ್ತಿರ ಮಾಹಿತಿ ಇದೆ. ಆದರೆ ಈಗ ಮಾತನಾಡುವುದಿಲ್ಲ. ಎಫ್ಎಸ್ಎಲ್ ವರದಿ ಬಂದ ನಂತರ ನಾನು ಮಾತನಾಡುತ್ತೇನೆ. ಏನಾದರೂ ಆ ರೀತಿ ಹೇಳಿದ್ದರೆ ಅವರಿಗೆ ಕಠಿಣವಾದ ಶಿಕ್ಷೆ ನೀಡಿ ಎಂದು ನಾನೇ ಹೇಳಿದ್ದೇನೆ. ಬೇರೆ ದೇಶಕ್ಕೆ ಜಿಂದಾಬಾದ್ ಎನ್ನುವುದು ಕಾಂಗ್ರೆಸ್ ಗೆ ಏನು ಬಂದಿಲ್ಲ. ಬಿಜೆಪಿಯವರು ಹೇಳುತ್ತಾರೆ ಅಂತ ಎಲ್ಲದಕ್ಕೂ ಉತ್ತರ ಕೊಡುವುದಕ್ಕೂ ಆಗಲ್ಲ. ಪಹಲ್ಗಾಮ್ನಲ್ಲಿ ದಾಳಿ ನಡೆದಿತ್ತು, ಅದರ ಮುನ್ಸೂಚನೆ ಮೋದಿಗೆ ಗೊತ್ತಿರಲಿಲ್ವಾ? ಅಲ್ಲಿ ಜನರು ತೀರಿಕೊಂಡರು, ಇಲ್ಲಿ ಬಿಜೆಪಿಯವರು ವಿಜೃಂಭಿಸುತ್ತಿದ್ದಾರೆ. ಯಾಕೆ ಈ ದಾಳಿ ಆಯ್ತು ಎಂದು ಒಬ್ಬ ಬಿಜೆಪಿಯವನಾದ್ರೂ ಕೇಳಿದ್ದಾನಾ? ಮಣಿಪುರ ಗಲಾಟೆಯಾದಾಗ ಬಿಜೆಪಿಗರ ಗಂಟಲು ಹೋಗಿತ್ತಂತಾ? ಈಗ ಮದ್ದೂರಿನ ವಿಚಾರಕ್ಕೆ ಬಿಜೆಪಿಗರು ಹೋಗಿದ್ದಾರೆ ಎಂದು ಗರಂ ಆಗಿದ್ದಾರೆ. ಸದ್ಯ ಭದ್ರಾವತಿಯಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿದವರ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಎಫ್ಎಸ್ಎಲ್ ವರದಿಗಾಗಿ ಕಾಯುತ್ತಿದ್ದಾರೆ.

