Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮೂರು ನಮ್ಮ ಹೆಮ್ಮೆ : ಚಿತ್ರದುರ್ಗ : ಮಾನಂಗಿ ಗ್ರಾಮದ ಪರಿಚಯ

---Advertisement---

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

 

ಸುದ್ದಿಒನ್

ಮಾನಂಗಿ ಗ್ರಾಮವು ಸಿದ್ದಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ 9 ಕಿಲೋಮೀಟರ್ ದೂರ ಪಶ್ಚಿಮಕ್ಕೆ,ಚಿತ್ರದುರ್ಗ- ಸಂತೆಬೆನ್ನೂರು ರಾ. ಹೆ.48.ರ ಮಾರ್ಗದಲ್ಲಿದೆ.

ಮಾನಂಗಿ ಎಂದರೆ ಸಣ್ಣಬಾವಿ, ನೀರಿನ ಸೆಲೆ ಎಂಬ ಅರ್ಥವಿದೆ. ನೀರಿನ ಸೆಲೆಯ ಬಳಿಯಲ್ಲಿ ನಿರ್ಮಾಣ ಮಾಡಲಾದ ಈ ಗ್ರಾಮಕ್ಕೆ ಈ ಹೆಸರು ಅನ್ವರ್ಥಕವಾಗಿದೆ.
ಗ್ರಾಮದ ಅರ್ಧ ಕಿಲೋಮೀಟರ್ ದೂರದಲ್ಲಿ (ಆಂಜನೇಯ ಪ್ರೌಢಶಾಲೆಯ ಬಳಿ ) ದಕ್ಷಿಣಕ್ಕೆ ಹಳೆಯ ಗ್ರಾಮ ನಿವೇಶನವಿದ್ದು ಅದು ಈಗ ಬೇಚರಾಕ್ ಆಗಿದೆ. ಅಲ್ಲಿಂದ ಈಗಿನ ಗ್ರಾಮದ ಜಾಗಕ್ಕೆ ಸ್ಥಳಾಂತರಗೊಂಡಿದೆ.
ಗ್ರಾಮವು ಐತಿಹಾಸಿಕವಾಗಿದ್ದರೂ ಐತಿಹಾಸಿಕ ಕುರುಹುಗಳೆಲ್ಲವೂ ಹಳೆಯ ಗ್ರಾಮ ನಿವೇಶನಗಳಲ್ಲಿ ಕಂಡುಬರುತ್ತದೆ. ನೂತನ ಗ್ರಾಮ /ಜನವಸತಿ ಪ್ರದೇಶದಲ್ಲಿ ಯಾವುದೇ ಐತಿಹಾಸಿಕ ಕುರುಹುಗಳು ಕಂಡು ಬರುವುದಿಲ್ಲ.
ಹಳೆ ಗ್ರಾಮ ನಿವೇಶನದಲ್ಲಿ ಇಂದು ಆಂಜನೇಯಸ್ವಾಮಿ ಹಾಗೂ ಈಶ್ವರ ದೇವಾಲಯಗಳಿವೆ.

 

ಭೌಗೋಳಿಕ ಲಕ್ಷಣ :
ಭೌಗೋಳಿಕವಾಗಿ ಗ್ರಾಮವು ಸಮತಟ್ಟು ಒಣ ಭೂಲಕ್ಷಣದ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ.
ಸಮತಟ್ಟು ಮೈದಾನ ಪ್ರದೇಶವು ಸಂಪೂರ್ಣ ಒಣಭೂಮಿಯಾಗಿದೆ.

ಕೆರೆ :
ಗ್ರಾಮದ ದಕ್ಷಿಣ ಭಾಗದ ಕಳ್ಳಿಹಟ್ಟಿಯಲ್ಲಿರುವ ಕೆರೆಯು 100 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿದ್ದು,ಇದಕ್ಕೆ ಜಾನುಕೊಂಡ ಗ್ರಾಮದ ಪೂರ್ವಭಾಗದಲ್ಲಿರುವ ಹೆಜ್ಜೇನುಕಲ್ಲು ಬೆಟ್ಟದ ಉತ್ತರಭಾಗದ ಆಕಳೇರಮ್ಮ ಗುಡ್ಡದಿಂದ ಹರಿದು ಬರುವ ಹಳ್ಳಗಳು ಈ ಕೆರೆಗೆ ಪ್ರಮುಖ ನೀರಿನ ಸೆಲೆಯಾಗಿದೆ. ಕೆರೆ ತುಂಬಿದ ನಂತರ ಮುಂದೆ ಉತ್ತರಭಾಗದ ಕಾತ್ರಾಳು ಕೆರೆಗೆ ಹರಿಯುತ್ತದೆ.

ರಂಗಪಟ್ಟಣದ ಆಂಜನೇಯ ಸ್ವಾಮಿ ದೇವಾಲಯ :
ಮಾನಂಗಿ ಗ್ರಾಮದಿಂದ ಉತ್ತರಕ್ಕೆ ಹೊಸಹಳ್ಳಿಗೆ ಹೋಗುವ ದಾರಿಯಲ್ಲಿರುವ ರಂಗಪಟ್ಟಣದ ಆಂಜನೇಯಸ್ವಾಮಿ ದೇವಸ್ಥಾನವನ್ನು ಮಾನಂಗಿ ಆಂಜನೇಯಸ್ವಾಮಿ ಎಂದೇ ಆಡುಭಾಷೆಯಲ್ಲಿ ಕರೆಯಲಾಗುತ್ತದೆ.1557-1603 ರವರೆಗೂ ಚಿತ್ರದುರ್ಗವನ್ನು ಆಳಿದ ಮತ್ತಿತಿಮ್ಮಣ್ಣನಾಯಕನ ಮಗ ಒಂದನೇ ಓಬಣ್ಣ ನಾಯಕನು ಈ ಸ್ಥಳದಲ್ಲಿ ತಮ್ಮ ಮನೆದೇವರಾದ ನೀರ್ಥಡಿ ಶ್ರೀರಂಗನಾಥಸ್ವಾಮಿಯ ಹೆಸರಿನ ಮೇಲೆ ಒಂದು ಪಟ್ಟಣವನ್ನು ನಿರ್ಮಾಣ ಮಾಡಿ ಅದಕ್ಕೆ ರಂಗಪಟ್ಟಣ ಎಂದು ಹೆಸರಿಸಿದ್ದನು. ಕಾಲಾನಂತರದಲ್ಲಿ ಈ ಪಟ್ಟಣವು ಬೇಚರಾಕ್ ಆಯಿತು.ಆತನು ಇಲ್ಲಿಯೇ ಕೆಲಕಾಲ ನೆಲೆಸಿದ್ದನು ಎನ್ನಲಾಗುತ್ತದೆ. ಈ ಸ್ಥಳದಿಂದ ಪಶ್ಚಿಮಕ್ಕೆ ಹಡವನಹಾಳ್ ( ಹಳೆ ಹಳಿಯೂರು ಗ್ರಾಮ )ಎಂಬಲ್ಲಿ ಆತನ ಕಲಾತ್ಮಕ ಸಮಾಧಿ ಇತ್ತೀಚಿನವರೆಗೂ ಇದ್ದಿದ್ದು, ಇತ್ತೀಚಿನ ದಿನಗಳಲ್ಲಿ ಅದು ನಾಶವಾಗಿದೆ.

ಆಂಜನೇಯಸ್ವಾಮಿ ದೇವಾಲಯವು ಹಿಂದೆ ಪಾಳೇಗಾರರ ಶೈಲಿಯಲ್ಲಿ ನಿರ್ಮಿಸಲಾಗಿತ್ತು.ಇತ್ತೀಚಿನ ವರ್ಷಗಳಲ್ಲಿ ಅದನ್ನು ತೆಗೆದು ನೂತನವಾಗಿ ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಗರ್ಭಗೃಹದಲ್ಲಿ 16-17 ನೇ ಶತಮಾನದ ಪಾಳೇಗಾರರ ಕಾಲದ ಆಂಜನೇಯಸ್ವಾಮಿ ಶಿಲ್ಪವನ್ನು ಪೂಜಿಸಲಾಗುತ್ತದೆ. ಈ ದೇವರಿಗೆ ಹತ್ತಾರು ಊರುಗಳ ಜನರು ನಡೆದುಕೊಳ್ಳುತ್ತಾರೆ. ಹೂವಿನ ಪ್ರಸಾದದ ರೂಪದಲ್ಲಿ ಕೊಡುವ ಅಪ್ಪಣೆಯ ಮೇರೆಗೆ ಜನರು ತಮ್ಮ ಕಾರ್ಯಗಳನ್ನು ನಿರ್ಧರಿಸಿ ಮುಂದುವರೆಯುತ್ತಾರೆ.

ಸಿದ್ದಾಪುರ,ಹಳಿಯೂರು, ಹೊಸಹಳ್ಳಿ,ಕಳ್ಳಿಹಟ್ಟಿ… ಹತ್ತಿರದ ಗ್ರಾಮಗಳಾಗಿವೆ.

ಗ್ರಾಮದಲ್ಲಿರುವ ದೇವಾಲಯಗಳು :

1. ಆಂಜನೇಯ ಸ್ವಾಮಿ ದೇವಸ್ಥಾನ:
ಗ್ರಾಮದ ಪ್ರೌಢಶಾಲೆಯ ಹತ್ತಿರವಿರುವ ಆಂಜನೇಯಸ್ವಾಮಿ ದೇವಾಲಯವು ದಕ್ಷಿಣಾಭಿಮುಖವಾಗಿದ್ದು, ವಿಜಯನಗರೋತ್ತರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ 16-17 ನೇ ಶತಮಾನದ ಶಿಲ್ಪವಿದ್ದು ಪೂಜಿಸಲಾಗುತ್ತದೆ.
ಈ ದೇವರ ಉತ್ಸವವನ್ನು ರಾಮನವಮಿಯಂದು ನಡೆಸಲಾಗುತ್ತದೆ .
ಪ್ರತಿ ವರ್ಷ ಶ್ರಾವಣಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ.

2. ಶ್ರೀರಾಮ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀರಾಮ ಮಂದಿರವು ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ. ಗರ್ಭಗೃಹದಲ್ಲಿ ಶ್ರೀ ರಾಮ, ಲಕ್ಷ್ಮಣ,ಹನುಮಂತ, ಸೀತೆಯ ಶಿಲ್ಪಗಳಿದ್ದು ಪೂಜಿಸಲಾಗುತ್ತದೆ.

3. ದುರ್ಗಾಂಬಿಕಾದೇವಿ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀ ದುರ್ಗಾಂಬಿಕಾ ದೇವಿ ದೇವಾಲಯವು ಸ್ಥಳೀಯ ಶೈಲಿಯಲ್ಲಿದ್ದು,
ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ.
ಈ ದೇವಾಲಯದ ಗರ್ಭಗೃಹದಲ್ಲಿ ದುರ್ಗಾಂಬಿಕಾ ದೇವಿಯನ್ನು ಪೂಜಿಸಲಾಗುತ್ತದೆ.
ಈ ದೇವಿಯ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ನೆರವೇರಿಸಲಾಗುತ್ತದೆ.

4.ಗಣಪತಿ ದೇವಸ್ಥಾನ: ಗ್ರಾಮದ ಮಧ್ಯಭಾಗದಲ್ಲಿರುವ ಗಣಪತಿ ದೇವಸ್ಥಾನವು ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಉತ್ತರಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ.

5. ಈಶ್ವರ ದೇವಸ್ಥಾನ:
ಗ್ರಾಮದ ಕಳ್ಳಿಹಟ್ಟಿ ರಸ್ತೆಯಲ್ಲಿರುವ ಕೆರೆಯ ಉತ್ತರಭಾಗದ ದಂಡೆಯ ಏರಿಯ ಹತ್ತಿರ ಇರುವ ಈ ದೇವಾಲಯವು ಪೂರ್ವಾಭಿಮುಖವಾಗಿದ್ದು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಗರ್ಭಗೃಹದಲ್ಲಿ 16-17ನೇ ಶತಮಾನದ ಪಾಳೆಯಗಾರರ ಕಾಲದ ಈಶ್ವರಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.
ದೇವಾಲಯದ ಹೊರಭಾಗದಲ್ಲಿ ವೀರಗಲ್ಲು ಇದ್ದು,ಹಿಂದೆ ಯೋಧರು ಯುದ್ಧ ಭೂಮಿಯಲ್ಲಿ ಮಡಿದ ಸ್ಮರಣಾರ್ಥವಾಗಿ ಇದನ್ನು ಮಾಡಲಾಗಿದೆ. ಶಿವರಾತ್ರಿಯಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.

6. ಅಂಜನೇಯಸ್ವಾಮಿ -ಬೇವಿನಾಳಮ್ಮ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯವು ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಉತ್ಸವಮೂರ್ತಿಗಳಿಗಾಗಿ ನಿರ್ಮಿಸಲಾದ ದೇವಾಲಯವಾಗಿದೆ.
ಪ್ರತಿವರ್ಷ ನಡೆಯುವ ಜಾತ್ರಾ ಸಮಯದಲ್ಲಿ ಉತ್ಸವಮೂರ್ತಿಗಳನ್ನು ಇಲ್ಲಿಂದ ಗ್ರಾಮದ ಹೊರಭಾಗದ ಈಶ್ವರ ದೇವಾಲಯದವರೆಗೆ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲಾಗುತ್ತದೆ.
ಗರ್ಭಗೃಹ ಹಾಗೂ ಸಭಾಮಂಟಪಗಳನ್ನು ಈ ಮಂದಿರ ಹೊಂದಿದೆ. ಗರ್ಭಗೃಹದಲ್ಲಿ ಆಂಜನೇಯಸ್ವಾಮಿ ಹಾಗೂ ಬೇವಿನಾಳಮ್ಮನ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು,
ಪೂಜಿಸಲಾಗುತ್ತದೆ.

7.ಕರಿಯಮ್ಮ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಕರಿಯಮ್ಮ ದೇವಾಲಯವು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಗರ್ಭಗೃಹದಲ್ಲಿ ಕರಿಯಮ್ಮ ದೇವಿಯನ್ನು ಪೂಜಿಸಲಾಗುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...