ಸಿಇಟಿ ಪರೀಕ್ಷೆ ಬಂದಾಗೆಲ್ಲಾ ಸಾಕಷ್ಟು ವಿವಾದಗಳು ಸೃಷ್ಟಿಯಾಗುತ್ತವೆ. ಜನಿವಾರ ತೆಗೆಸೋದು, ಮಾಂಗಲ್ಯ ಬಿಚ್ಚಿಸೋದು, ಹಿಜಾಬ್ ತೆಗೆಸೋದು ಹೀಗೆ ಅನೇಕ ವಿಚಾರಗಳಿಗೆ ಸುದ್ದಿಯಾಗುತ್ತದೆ. ಇದೀಗ ಅಂತ ಅನ್ಯಾಯಕ್ಕೊಳಗಾದವರಿಗೆ ಸಿಇಟಿ ಮರು ಪರೀಕ್ಷೆ ಕೊಡಲು ಇಲಾಖೆ ರೆಡಿಯಾಗಿದೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಮಾಹಿತಿ ನೀಡಿದ್ದಾರೆ.

ಜನಿವಾರ ಹಾಗೂ ಹಿಜಬ್ ಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ಎರಡು ಪರೀಕ್ಷಾ ಕೇಂದ್ರದಲ್ಲಿ ಗೊಂದಲ ಆಗಿತ್ತು. ಆದ್ದರಿಂದ ಪರೀಕ್ಷಾರ್ಥಿಗಳು ಮರು ಪರೀಕ್ಷೆಗೆ ಮನವಿ ಮಾಡಿದ್ದರು. ಹೀಗಾಗಿ ತೊಂದರೆಗೆ ಒಳಗಾದ ಪರೀಕ್ಷಾರ್ಥಿಗಳಿಗೆ ಮಾತ್ರ ಅನ್ವಯ ಆಗುವಂತೆ ಮರುಪರೀಕ್ಷೆ ನಡೆಸುತ್ತೇವೆ. ನಾಲ್ವರು ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಸಮಸ್ಯೆ ಆಗಿದೆ. ಹಾಗಾಗಿ ಆ ವಿದ್ಯಾರ್ಥಿಗಳಿಗೆ ಮಾತ್ರ ಮರು ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ. ಪರೀಕ್ಷೆ ಗೊಂದಲಕ್ಕೆ ಒಳಗಾದ ಪರೀಕ್ಷಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಕೊಡುವುದು ಸಮಂಮಜಸವಲ್ಲ. ಹಾಗಾಗಿ ಮರು ಪರೀಕ್ಷೆ ಮಾಡುತ್ತೇವೆ. ಈ ಬಗ್ಗೆ ಚರ್ಚೆ ಮಾಡಿ, ತೀರ್ಮಾನ ತೆಗೆದುಕೊಳ್ಳುತ್ತೇವೆ. ಕಳೆದ ಬಾರಿ ಕೂಡ ಗೊಂದಲ ಆಗಿತ್ತು. ಈ ಬಾರಿ ಮರು ಪರೀಕ್ಷೆ ಮಾಡುವುದು ಸೂಕ್ತ ಅಂತ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.
ಸಿಇಟಿ ಪರೀಕ್ಷೆ ವೇಳೆ ಜನಿವಾರಕ್ಕೆ ಕತ್ತರಿ ಪ್ರಕರಣ ಬಹಳಷ್ಟು ವಿವಾದ ಪಡೆದುಕೊಂಡ ಬೆನ್ನಲ್ಲೇ ಹಿಜಬ್ ಧರಿಸಿ ಸಿಇಟಿ ಪರೀಕ್ಷೆಗೆ ಆಗಮಿಸಿದ್ದ ಪರೀಕ್ಷಾರ್ಥಿಗೆ ಸಿಇಟಿ ಪರೀಕ್ಷೆ ಬರೆಯಲು ನಿರಾಕರಣೆ ಮಾಡಿರುವ ಆರೋಪ ಪ್ರಕರಣ ಚಿಕ್ಕಬಳ್ಳಾಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಅಂದಹಾಗೆ ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿರುವ ಬಿಜಿಎಸ್ ಸೈನ್ಸ್ ಆಕಾಡೆಮಿ ಕಾಲೇಜಿನಲ್ಲಿ ಘಟನೆ ನಡೆದಿದೆ. ಅಂದಹಾಗೆ ಏಪ್ರಿಲ್ 23 ರಂದು ನಡೆದ ಭೌತಶಾಸ್ತ್ರದ ಸಿಇಟಿ ಪರೀಕ್ಷೆಗೆ ಹಿಜಬ್ ಧರಿಸಿ ಹಾಜರಾಗಿದ್ದ ಅಭ್ಯರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದೆ ವಾಪಸ್ ಕಳಿಸಿರುವುದಾಗಿ ಪರೀಕ್ಷಾರ್ಥಿಯ ತಂದೆ ಕೆಇಎ ಗೆ ಅನ್ ಲೈನ್ ಈ ಮೇಲ್ ಮೂಲಕ ದೂರು ನೀಡಿದ್ದಾರೆ.



















