ಬೆಂಗಳೂರು: ಸುಮ್ಮನೆ ಹೆಸರುಗಳಿರುವ ಕಡತ ನೋಡಿನೆ ಅಧಿಕಾರಿಗಳು ಕೆಲಸ ಮಾಡೋದಾ ಅಂತ. ಆ ವ್ಯಕ್ತಿ ವೃತ್ತಿಯಲ್ಲಿದ್ದಾರಾ..? ನಿವೃತ್ತಿಯಾಗಿದ್ದಾರಾ ಏನು ನೋಡಲ್ವಾ ಎಂಬ ಅನುಮಾನಗಳು ಕಾಡುವಂತೆ ಮಾಡುತ್ತವೆ ಕೆಲವು ಬೆಳವಣಿಗೆ. ಇದೀಗ ಅಂಥದ್ದೇ ಯಡವಟ್ಟೊಂದು ನಡೆದಿದೆ. ಈ ಕೆಲಸವೂ ಬೇಡ, ಬೇರೆ ಪರಿಪಾಟಲು ಬೇಡ ಅಂತ ಸಂನ್ಯಾಸತ್ವ ಸ್ವೀಕಾರ ಮಾಡಿರುವ ಸ್ವಾಮೀಜಿಗೂ ಪ್ರಮೋಷನ್ ಭಾಗ್ಯ ಕಲ್ಪಿಸಿಕೊಟ್ಟಿದ್ದಾರೆ.
ಹೆಚ್.ಎಲ್. ನಾಗರಾಜು ಎಂಬ ಸ್ವಾಮೀಜಿಯೂ ಸರ್ಕಾರಿ ಸೇವೆಗೆ ಸ್ವಯಂ ನಿವೃತ್ತಿ ಘೋಷಣೆ ಮಾಡಿ ಬಹಳ ವರ್ಷಗಳೇ ಕಳೆದಿವೆ. ಈಗ ಅವರು ಸಂನ್ಯಾಸತ್ವ ಸ್ವೀಕಾರ ಮಾಡಿದ್ದಾರೆ. ಇದರ ನಡುವೆ ರಾಜ್ಯ ಸರ್ಕಾರ ಇತ್ತೀಚೆಗೆ 20 ಕೆಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ, ಆದೇಶವನ್ನು ನೀಡಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವ್ ಪ್ರಸಾದ್ ಅವರು ಹೊರಡಿಸಿರುವ ಪಟ್ಟಿಯಲ್ಲಿ ಸ್ವಾಮೀಜಿ ಹೆಸರು ಕೂಡ ಇದೆ. ಸ್ಥಳ ನಿರೀಕ್ಷಣೆಯಲ್ಲಿರುವ ಅಧಿಕಾರಿ ಎಂದು ನಮೂದಿಸಲಾಗಿದೆ.
ಹೆಚ್.ಎಲ್. ನಾಗರಾಜ್ ಅವರು ಈ ಹಿಂದೆ ಮಂಡ್ಯದಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಕೆ ಮಾಡಿದ್ದರು. ಬಳಿಕ ಲೌಕಿಕ ಬದುಕಿಗೆ ವಿದಾಯ ಹೇಳಿ, ಆದಿಚುಂಚನಗಿರಿ ಶ್ರಿಉ ನಿರ್ಮಲಾನಂದನಾಥ ಸ್ವಾಮೀಜಿಗಳ ಸಮ್ಮುಖದಲ್ಲಿ ದೀಕ್ಷೆ ಪಡೆದಿದ್ದರು. ಆ ಸಂದರ್ಭದಲ್ಲಿ ಒಬ್ಬ ಕೆಎಎಸ್ ಅಧಿಕಾರಿ ಸೇವೆಯಿಂದ ನಿವೃತ್ತಿ ಪಡೆದು ಸ್ವಾಮೀಜಿಯಾಗಿ ಬದಲಾಗಿರುವುದು ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೂ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆಯ ಇಲಾಖೆಯ (DPAR) ಅಧಿಕಾರಿಗಳು ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ನಡೆಸದೆ ಸ್ವಾಮೀಜಿಯಾದವರಿಗೂ ಪ್ರಮೋಷನ್ ನೀಡಿದ್ದಾರೆ. ಇದರಿಂದ ಅಧಿಕಾರಿಗಳು ಎಷ್ಟು ಸೂಕ್ಷ್ಮವಾಗಿ ದಾಖಲೆಗಳನ್ನ ಪರಿಶೀಲನೆ ನಡೆಸ್ತಾರೆ ಅನ್ನೋದು ಅರ್ಥವಾದಂತಿದೆ.


