ದಾವಣಗೆರೆ: ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಭರ್ಜರಿಯಾಗಿ ನಡೀತಾ ಇದೆ. ಆದರೆ ಕಾಂಗ್ರೆಸ್ ಗೆ ಅಲ್ಪಸಂಖ್ಯಾತರನ್ನ ಸಮಾಧಾನ ಮಾಡುವುದೇ ದೊಡ್ಡ ತಲೆ ನೋವಾಗಿದೆ. ಅಲ್ಪಸಂಖ್ಯಾತ ಸಮುದಾಯದ ಸಾಧಿಕ್ ಪೈಲ್ವಾನ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿಯೇ ಇದ್ದು, ಈಗ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಇವರನ್ನ ಸಮಾಧಾನ ಮಾಡುವುದೇ ಕಾಂಗ್ರೆಸ್ ಗೆ ದೊಡ್ಡ ಸವಾಲಾಗಿದೆ.
ಸಾಧಿಕ್ ಪೈಲ್ವಾನ್ ಅವರು ಕೂಡ ಯಾವುದೇ ಕಾರಣಕ್ಕೂ ನಾಮಪತ್ರ ವಾಪಾಸ್ ತೆಗೆದುಕೊಳ್ಳುವುದಿಲ್ಲ ಎಂಬ ಮಾತನ್ನ ಹೇಳಿದ್ದಾರೆ. ಅಹಿಂದ ಸಮುದಾಯದ ಬೆಂಬಲದಿಂದ ಈ ಬಾರಿ ಚುನಾವಣೆಯ ಕಣದಲ್ಲಿ ಇದ್ದೇನೆ. ಅಹಿಂದ ಸಮುದಾಯ ಬಿಟ್ಟು ನಾನಿಲ್ಲ. ಅವರ ಆಶೀರ್ವಾದ ನನ್ನ ಮೇಲೆ ಇದೆ. ಕಾಂಗ್ರೆಸ್ ಮುಖಂಡರು ನಮ್ಮ ಅಹಿಂದ ಸಮುದಾಯಕ್ಕೆ ಟಿಕೆಟ್ ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ವಿಡಿಯೋ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ಶಾಮನೂರು ಶಿವಶಂಕರಪ್ಪ ನಿಧನದ ಬಳಿಕ ತೆರವಾದ ಕ್ಷೇತ್ರಕ್ಕೆ ಬಾರೀ ಡಿಮ್ಯಾಂಡ್ ಸೃಷ್ಟಿಯಾಗಿತ್ತು. ಶಾಮನೂರು ಶಿವಶಂಕರಪ್ಪ ಅವರು ಬದುಕಿದ್ದಾಗಲೇ ಮುಂದಿನ ಚುನಾವಣೆಗೆ ಅಲ್ಪಸಂಖ್ಯಾತರನ್ನೇ ಬೆಂಬಲಿಸ್ತೀನಿ, ಅವರಿಗೆ ಟಿಕೆಟ್ ಕೊಡಿಸುತ್ತೇವೆ ಎಂಬ ಮಾತನ್ನ ಹೇಳಿದ್ದರಂತೆ. ಈ ಬಗ್ಗೆ ಸಚಿವ ಜಮೀರ್ ಅಹ್ಮದ್ ಅವರು ತಿಳಿಸಿದ್ದರು. ಆದರೆ ಉಪಚುನಾವಣೆಯಲ್ಲಿ ಕುಟುಂಬಸ್ಥರಿಗೆ ಟಿಕೆಟ್ ಕೊಡುವ ಪದ್ಧತಿ ಇದೆ ಎಂದು ಕಾಂಗ್ರೆಸ್ ಎರಡು ಕಡೆ ಕುಟುಂಬಸ್ಥರಿಗೆ ಟಿಕೆಟ್ ನೀಡಿದೆ. ಹೀಗಾಗಿ ದಾವಣಗೆರೆಯಲ್ಲಿ ರೊಚ್ಚಿಗೆದ್ದಿರುವ ಮುಸ್ಲಿಮರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅದು ಒಬ್ಬಿಬ್ಬರಲ್ಲ ಬರೋಬ್ಬರಿ 23 ಜನ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈಗ ಸಿದ್ದರಾಮಯ್ಯ ಅವರು ಹೇಗೆ ಬಂಡಾಯ ಶಮನ ಮಾಡ್ತಾರೆ ಅನ್ನೋದನ್ನ ನೋಡಬೇಕಿದೆ.















