ಬಾಗಲಕೋಟೆ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸದ್ಯಕ್ಕೆ ಉತ್ತರಾಧಿಕಾರಿ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಲವರಿಂದ ಬಹುಪರಾಕ್ ಬಂದ್ರೆ ಇನ್ನು ಹಲವರಿಂದ ವಿರೋಧವೂ ಎದುರಾಗಿದೆ. ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರು ಮುಂದಿನ ಉತ್ತರಾಧಿಕಾರಿಯಾಗಿ ಸತೀಶ್ ಜಾರಕಿಹೊಳಿ ಅವರು ಮುಂದುವರೆಯಬಹುದು. ಯಾಕಂದ್ರೆ ತಂದೆಯವರ ಸಿದ್ಧಾಂತದಂತೆ ಅವರು ಕೂಡ ಫಾಲೋ ಮಾಡ್ತಾ ಇದ್ದಾರೆ ಎಂಬ ಹೇಳಿಕೆಯನ್ನ ನೀಡಿದ್ದರು.
ಇತ್ತ ಮುಂದಿನ ಸಿಎಂ ಆಗಬೇಕೆಂದು ಡಿಕೆ ಶಿವಕುಮಾರ್ ಕಾಯ್ತಾ ಇದ್ದಾರೆ. ಈಗ ಸಿದ್ದರಾಮಯ್ಯ ಅವರ ಮಗನೇ ಉತ್ತರಾಧಿಕಾರಿಯ ಬಗ್ಗೆ ಮಾತನಾಡಿದರೆ ಒಂದಷ್ಟು ಚರ್ಚೆಗಳು ಸಹಜವಾಗಿಯೇ ಹುಟ್ಟಿಕೊಳ್ತಾವೆ. ಈಗ ಆಗಿರೋದು ಅದೇ. ಡಿಕೆ ಶಿವಕುಮಾರ್ ಕಡೆಯವರು ಈ ಹೇಳಿಕೆಯನ್ನ ವಿರೋಧಿಸವ್ರೆ. ಸಿದ್ದರಾಮಯ್ಯ ಬಣದವರು ಅದು ಹಂಗಲ್ಲ ಹಿಂಗೆ ಎಂಬ ಮಾತನ್ನ ಹೇಳ್ತಾ ಇದ್ದಾರೆ. ಇದೀಗ ಸ್ವಾಮೀಜಿಯೊಬ್ಬರು ಸತೀಶ್ ಜಾರಕಿಹೊಳಿ ಅವರೇ ಸಿಎಂ ಆಗಲಿ ಎಂದಿದ್ದಾರೆ.
ಕಿತ್ತೂರು ಕೋಟೆಯಲ್ಲಿ ನಡೆದ ಕಿತ್ತೂರು ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬೈಲೂರು ಮಠದ ನಿಜಗುಣ ಪ್ರಭು ಸ್ವಾಮೀಜಿ ಅವರು, ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದೇ ಹಾರೈಸಿದ್ದಾರೆ. ಈ ಬಗ್ಗೆ ಮಾತನಾಡಿ ನಿಜಗುಣ ಪ್ರಭು ಸ್ವಾಮೀಜಿ ಅವರು, ಸತೀಶ್ ಜಾರಕಿಹೊಳಿ ಸೇವೆ ಮೌನದ ಸೇವೆ, ಒಳ್ಳೆಯ ಮುತ್ಸದ್ದಿ ಅವರು, ಒಳ್ಳೆಯ ರಾಜಕಾರಣಿಯೂ ಆಗಿದ್ದಾರೆ. ಮುಂದಿನ ರಾಜ್ಯದ ಭವಿಷ್ಯಗಳೆಲ್ಲವೂ ಸಹ ಅವರ ಕಣ್ಣ ಮುಂದೆ ನಡೆಯಲಿ ಎಂದು ಪರೋಕ್ಷವಾಗಿ ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂಬುದನ್ನ ಹೇಳಿದ್ದಾರೆ. ಸದ್ಯ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಕಿಚ್ಚು ಹಚ್ಚಿರುವ ವಿಚಾರಕ್ಕೆ ಸ್ವಾಮೀಜಿ ಮಾತು ಇನ್ನಷ್ಟು ಕೆರಳುವಂತೆ ಮಾಡುತ್ತಾ ನೋಡಬೇಕಿದೆ.
