ಬೆಂಗಳೂರು.ಜೂನ್.24: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯಲ್ಲಿ ಆಗುತ್ತಿರುವ ಅಕ್ರಮ ಹಾಗೂ ದುರ್ಬಳಕೆಗೆ ತಡೆ ಹಾಕಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಯೋಜನೆಗೆ ಪಾರದರ್ಶಕತೆ ತರುವ ನಿಟ್ಟಿನಲ್ಲಿ, ಅರ್ಹ ಫಲಾನುಭವಿಗಳು ಮತ್ತೊಮ್ಮೆ ಹೊಸದಾಗಿ ಅರ್ಜಿ ಸಲ್ಲಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ಮುಂದಿನ 2-3 ದಿನಗಳಲ್ಲಿ ಅಧಿಕೃತ ಮಾರ್ಗಸೂಚಿ ಹೊರಬೀಳಲಿದೆ.
ಪ್ರಸ್ತುತ ಮೃತಪಟ್ಟವರ ಖಾತೆಗಳಿಗೆ ಹಾಗೂ ನಿಯಮ ಉಲ್ಲಂಘಿಸಿ ಆದಾಯ ತೆರಿಗೆ (IT) ಮತ್ತು ಜಿಎಸ್ಟಿ (GST) ಪಾವತಿದಾರರಿಗೂ ಯೋಜನೆಯ ಹಣ ಜಮೆಯಾಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಅರ್ಹ ಬಡ ಮಹಿಳೆಯರಿಗೆ ಮಾತ್ರ ಯೋಜನೆಯ ಲಾಭ ಸಿಗುವಂತೆ ಮಾಡಲು ಈ ಮರು ಪರಿಶೀಲನಾ ಪ್ರಕ್ರಿಯೆ ಆರಂಭವಾಗುತ್ತಿದೆ.
ಅರ್ಜಿ ಸಲ್ಲಿಕೆ ಹೇಗೆ?
ಅನಕ್ಷರಸ್ಥರು ಮತ್ತು ತಾಂತ್ರಿಕ ಜ್ಞಾನವಿಲ್ಲದ ಗ್ರಾಮೀಣ ಭಾಗದ ಮಹಿಳೆಯರಿಗೆ ನೆರವಾಗಲು ಸರ್ಕಾರ ವಿಶೇಷ ವ್ಯವಸ್ಥೆ ಮಾಡಿದೆ.
ಅಂಗನವಾಡಿ ಆ್ಯಪ್: ಅಂಗನವಾಡಿ ಸಿಬ್ಬಂದಿಯ ಮೊಬೈಲ್ಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಪ್ರತ್ಯೇಕ ಆ್ಯಪ್ ಇನ್ಸ್ಟಾಲ್ ಮಾಡಲಾಗುವುದು. ಇದರ ಮೂಲಕ ಅವರು ಅರ್ಹರ ಮನೆಬಾಗಿಲಿಗೆ ತೆರಳಿ ಅರ್ಜಿ ಸಲ್ಲಿಸಲು ಸಹಾಯ ಮಾಡಲಿದ್ದಾರೆ.
ಸೇವಾ ಕೇಂದ್ರಗಳು: ಎಂದಿನಂತೆ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಇತರೆ ಅಧಿಕೃತ ಸೇವಾ ಕೇಂದ್ರಗಳಲ್ಲೂ ಅರ್ಜಿ ಸಲ್ಲಿಸಲು ಮುಕ್ತ ಅವಕಾಶವಿರಲಿದೆ.
ಭದ್ರತೆ ಮತ್ತು ನಿಯಮಗಳೇನು?
ಈ ಬಾರಿ ಯಾವುದೇ ತಪ್ಪುಗಳಾಗದಂತೆ ತಡೆಯಲು ಅರ್ಜಿ ಸಲ್ಲಿಕೆ ವೇಳೆಯೇ ಕಟ್ಟುನಿಟ್ಟಿನ ತಂತ್ರಜ್ಞಾನ ಬಳಸಲಾಗುತ್ತಿದೆ.
ಮುಖ ಗುರುತಿಸುವಿಕೆ (Face Recognition) ಮತ್ತು ಬಯೋಮೆಟ್ರಿಕ್ ವ್ಯವಸ್ಥೆಯ ಮೂಲಕವೇ ಅರ್ಜಿದಾರರ ಗುರುತು ದೃಢೀಕರಿಸಲಾಗುವುದು.
ಫಲಾನುಭವಿಗಳು ಕಡ್ಡಾಯವಾಗಿ ರಾಜ್ಯದ ಬ್ಯಾಂಕ್ ಗಳಲ್ಲೇ ಇರುವ ಸಕ್ರಿಯ ಖಾತೆಯ ವಿವರಗಳನ್ನು ನೀಡಬೇಕು.
ಅರ್ಹತೆ: ಬಿಪಿಎಲ್ (BPL) ಮತ್ತು ಎಪಿಎಲ್ (APL) ಕಾರ್ಡ್ ಹೊಂದಿರುವ ಕುಟುಂಬದ ಯಜಮಾನಿ ಮಾತ್ರ ಅರ್ಹರು.
ಅನರ್ಹತೆ: ಆದಾಯ ತೆರಿಗೆ (IT) ಅಥವಾ ಜಿಎಸ್ಟಿ (GST) ಪಾವತಿಸುವ ಕುಟುಂಬಗಳಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ.
ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸಲು ಸರ್ಕಾರ ಕೈಗೊಂಡಿರುವ ಈ ಹೊಸ ನಿರ್ಧಾರದ ಸಂಪೂರ್ಣ ಮಾರ್ಗಸೂಚಿ ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ಪ್ರಕಟಗೊಳ್ಳಲಿದೆ ಎನ್ನಲಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














