Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಷ್ಟ್ರೀಯ ವಿಜ್ಞಾನ ದಿನಾಚರಣೆ | ದೇಶೀಯ ಸಂಶೋಧನೆಗಳು ಹೆಚ್ಚಾದಾಗ ಮಾತ್ರ ಭಾರತ ವಿಕಸಿತವಾಗುತ್ತದೆ : ಪ್ರೊ.ಜಿ.ಎನ್.ಮಲ್ಲಿಕಾರ್ಜುನಪ್ಪ

---Advertisement---

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.28 : ಜಾಗತಿಕ ತಂತ್ರಜ್ಞಾನದಿಂದ ಸ್ವದೇಶೀ ತಂತ್ರಜ್ಞಾನ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ದೇಶೀಯ ಸಂಶೋಧನೆಗಳು ಹೆಚ್ಚಾದಾಗ ಮಾತ್ರ ಭಾರತ ವಿಕಸಿತವಾಗುತ್ತದೆ” ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷರಾದ ಪ್ರೊ.ಜಿ.ಎನ್.ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.

ಅವರು ಇಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್, ಕ.ರಾ.ವಿ.ಪ.ಬೆಂಗಳೂರು ಇವರು ನಗರದ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ “ವಿಕಸಿತ ಭಾರತಕ್ಕಾಗಿ ಸ್ವದೇಶೀ ತಂತ್ರಜ್ಞಾನ” ಕುರಿತು ಉಪನ್ಯಾಸ ನೀಡುತ್ತಿದ್ದರು.

“ಭಾರತ ವಿಕಸಿತವಾಗಲು ಬಂಡವಾಳ ಮತ್ತು ಸ್ವಾವಲಂಬನೆ ಸಾಧಿಸಬೇಕು. ನಾವು ಕಟ್ಟಿಕೊಂಡಿರುವ ಮತಧರ್ಮಗಳ ಬೇಲಿಯನ್ನು ಕಿತ್ತುಹಾಕಬೇಕು. ಸಾವಿರಾರು ವರ್ಷಗಳಿಂದ ಅನ್ವೇಷಿಸಿಕೊಂಡು ಬಂದಿರುವ ದೇಶೀಯ ತಂತ್ರಜ್ಞಾನವನ್ನು ಆಧುನಿಕ ಸಂಶೋಧನಾ ವಿಧಾನಗಳ ಮೂಲಕ ನಾವೀನ್ಯಗೊಳಿಸಬೇಕು. ಬುದ್ಧ,ಬಸವ, ಗಾಂಧಿ ಮತ್ತು ಅಂಬೇಡ್ಕರ್ ಚಿಂತನೆಗಳನ್ನು ತಾತ್ವಿಕ ಅಡಿಪಾಯವಾಗಿ ಇಟ್ಟುಕೊಳ್ಳಬೇಕು. ದೇಶೀಯ ತಂತ್ರಜ್ಞಾನವನ್ನು ಬಳಸುವುದರಿಂದ ವ್ಯಕ್ತಿ, ಸಂಸ್ಥೆ ಮತ್ತು ದೇಶ, ಸಾಲದ ಹೊರೆಯಿಂದ ಹಾಗೂ ಅನಪೇಕ್ಷಿತ ಅವಲಂಬನೆಯಿಂದ ಹೊರಬರಬಹುದು. ಬಡತನರಹಿತ, ನಿರುದ್ಯೋಗ ರಹಿತ, ಪರಿಸರಮಾಲಿನ್ಯ ರಹಿತ, ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣವಾದಾಗ ಮಾತ್ರ ಭಾರತ ವಿಕಸಿತವಾಗುತ್ತದೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸೈನ್ಸ್ ಫೌಂಡೇಶನ್ ನಿರ್ದೇಶಕ ಶ್ರೀ ಈ.ರುದ್ರಮುನಿಯವರು, ವಿಜ್ಞಾನದ ಕಲಿಕೆಗೆ ಭದ್ರ ಬುನಾದಿ ಹಾಕಬೇಕಿದೆ. ಶಿಕ್ಷಕರು ಕೇವಲ ಪರೀಕ್ಷಾ ದೃಷ್ಟಿಯಿಂದ ಮಕ್ಕಳಿಗೆ ಕಲಿಸದೆ, ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಬೇಕಿದೆ. ವೈಜ್ಞಾನಿಕ ಮನೋಭಾವ ಬೆಳೆಸಲು ವೈಚಾರಿಕತೆಯ ಬದುಕನ್ನು ಕಟ್ಟಿಕೊಳ್ಳಲು ಉಪದೇಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಶ್ರೀಮತಿ ಸುಜಾತ ರವರು ಮಾತನಾಡಿ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಮಕ್ಕಳಲ್ಲಿ ನೈತಿಕ, ವೈಜ್ಞಾನಿಕ ಮನೋಭಾವ ಬೆಳೆಸಲು ಸ್ಫೂರ್ತದಾಯಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಭವ್ಯ ಭಾರತದ ವಿಜ್ಞಾನಿಗಳನ್ನು ರೂಪಿಸಬೇಕಿದೆ ಎಂದು ತಿಳಿಸಿದರು.

ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್.ಎಸ್.ಟಿ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿಜ್ಞಾನ ದಿನಾಚರಣೆಯ ಮಹತ್ವವನ್ನು ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಖಜಾಂಚಿ ಕೆ.ವಿ.ನಾಗಲಿಂಗರೆಡ್ಡಿ, ಪ್ರವಾಚಕರಾದ ಜಿ.ಆರ್.ತಿಪ್ಪೇಶಪ್ಪ, ಉಪನ್ಯಾಸಕರಾದ ರಾಜಪ್ಪ, ಹನುಮಂತರಾಯ, ನರಸಿಂಹಪ್ಪ, ಸುಧಾ, ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕು.ವಿದ್ಯಾಶ್ರೀ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಶಿಕ್ಷಣಾರ್ಥಿಗಳಾದ ಗೌತಮಿ ಸ್ವಾಗತಿಸಿ, ಗುರುರಾಜ್ ವಂದಿಸಿದರು. ಭಾರತಮ್ಮ ಕಾರ್ಯಕ್ರಮ ನಿರೂಪಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment