ರಾಷ್ಟ್ರೀಯ ಲೋಕ್ ಅದಾಲತ್ : ಮನಸ್ತಾಪ ಮರೆತು ಮತ್ತೆ ಒಂದಾದ ದಂಪತಿಗಳು

2 Min Read

ಚಿತ್ರದುರ್ಗ. ಮಾ.08: ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಸಿವಿಲ್ ವ್ಯಾಜ್ಯಗಳ ಜತೆಗೆ ವೈವಾಹಿಕ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಒಟ್ಟುಗೂಡಿಸಲು ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರೋಣ ವಾಸುದೇವ ಹೇಳಿದರು.

 

ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

 

ಸಿವಿಲ್ ವ್ಯಾಜ್ಯಗಳು ಮಾತ್ರವಲ್ಲದೇ ಇದರ ಜತೆಗೆ ವೈವಾಹಿಕ ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ತೆಗೆದುಕೊಂಡು ಮುನ್ನಡೆ ಸಾಧಿಸಲಾಗುತ್ತದೆ ಎಂದು ಹೇಳಿದರು.

ಯಾವುದೋ ಒಂದು ಮನಸ್ತಾಪದಿಂದಾಗಿ ಸತಿ-ಪತಿಗಳಲ್ಲಿ ಯಾರಾದರೂ ಒಬ್ಬರು ಕೋರ್ಟ್ ಮೊರೆಹೋಗುತ್ತಾರೆ. ಇದರಿಂದ ವೈವಾಹಿಕ ಪ್ರಕರಣದ ಜತೆಗೆ ಹಲವಾರು ಕಾನೂನುಗಳು ಇರುವುದರಿಂದ ಅವುಗಳನ್ನು ಬಳಸಿಕೊಂಡು ಹಲವು ಪ್ರಕರಣಗಳು ಪರಸ್ಪರ ದಾಖಲಾಗುತ್ತವೆ. ಹಾಗಾಗಿ ಇಂತಹ ಪ್ರಕರಣಗಳಲ್ಲಿ ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಜತೆಗೂಡಿಸುವ ಕೆಲಸ ಮಾಡಿದರೆ ಪ್ರಕರಣಗಳ ಕಡಿಮೆಯಾಗುವುದರ ಜತೆಗೆ ಜೀವನಕ್ಕೆ ಹೊಸ ದಾರಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಈ ಹಿನ್ನಲೆಯಲ್ಲಿ ಪಕ್ಷಗಾರರ ಮನವೊಲಿಸಿ ವಿವಿಧ ಕಾರಣಗಳಿಂದ ದೂರವಾಗಿದ್ದ ದಂಪತಿಗಳನ್ನು ಒಂದು ಮಾಡಲಾಗುತ್ತದೆ ಎಂದರು.

 

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ಸುಸಂದರ್ಭದಲ್ಲಿ ಜಿಲ್ಲಾ ನ್ಯಾಯಾಲಯ, ಜಿಲ್ಲೆಯ ಎಲ್ಲ ನ್ಯಾಯಾಲಯಗಳು ಸೇರಿದಂತೆ ದೇಶಾದ್ಯಂತ ರಾಷ್ಟ್ರೀಯ ಲೋಕ್ ಅದಾಲತ್ ನಡೆಯುತ್ತಿದೆ ಎಂದು ತಿಳಿಸಿದ ಅವರು, ವೈವಾಹಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯದಲ್ಲಿ 3 ಪ್ರಕರಣ ಹಾಗೂ ಜಿಲ್ಲೆ ವಿವಿಧ ನ್ಯಾಯಾಲಯಗಳಿಂದ 5 ಪ್ರಕರಣ ಸೇರಿದಂತೆ ಒಟ್ಟು 8 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಕ್ರಮವಹಿಸಲಾಗಿದ್ದು, ಇದಕ್ಕೆ ಕಕ್ಷಿದಾರರು, ವಕೀಲರ ಸಂಘದವರು ಸಹ ಹೆಚ್ಚಿನ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

 

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಡಿ.ಮಮತ, ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎ‌.ಎಂ.ಚೈತ್ರ, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್ ಸೇರಿದಂತೆ ಲೋಕ್ ಅದಾಲತ್ ನಲ್ಲಿ ಚಿತ್ರದುರ್ಗದ ಎಲ್ಲ ನ್ಯಾಯಾಧೀಶರು, ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ ವಕೀಲರು, ಸಾರ್ವಜನಿಕರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *