ಮಾದಾರ ಚೆನ್ನಯ್ಯ ಶ್ರೀ ಎಂಪಿ ಚುನಾವಣೆ ಸ್ಪರ್ಧೆಗೆ ಈಶ್ವರಪ್ಪ ಹೇಳಿದ್ದೇನು?

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 19 : ಸುಳ್ಳು ಹೇಳುವುದರಲ್ಲಿ ಹೆಗ್ಗಳಿಕೆ ಪಡೆದಿರುವ ಸಿಎಂ ಸಿದ್ಧರಾಮಯ್ಯ ಹಾಗೂ ರಾಹುಲ್ ಗಾಂಧಿ ಅವರಿಗೆ ನೊಬೆಲೆ ಪ್ರಶಸ್ತಿ ಕೊಡಬೇಕು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಎಂ ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತಾರೆ. ಆದರೆ ಈವರೆಗೂ ಒಬ್ಬ ನಿರುದ್ಯೋಗಿಗೂ 1 ರೂ. ಕೊಟ್ಟಿಲ್ಲ. ವಿದ್ಯುತ್ ಇಲ್ಲ, ಅನೇಕ ಭಾರೀ ದರ ಹೆಚ್ಚಿಸಿದ್ದಾರೆ. ಪಾಪರ್ ಆಗಿದ್ದೇವೆ ಎಂದು ಹೇಳಲೂ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಒಂದಾಗಲ್ಲ. ಇವರುಗಳ ರೀತಿಯೇ ರಾಹುಲ್ ಗಾಂಧಿ ಇದ್ದು, ರಾಮಮಂದಿರಕ್ಕೆ ಪರಿಶಿಷ್ಟರನ್ನು ಕರೆದಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಮಾದಾರ ಚನ್ನಯ್ಯಶ್ರೀ, ಕಾಗಿನೆಲೆ ಶ್ರೀ ಸೇರಿ ಅನೇಕರು ಅಯೋಧ್ಯೆಗೆ ಹೋಗಿದ್ದು, ಕಾರ್ಯಕ್ರಮದ ಬಗ್ಗೆ ಶ್ರೀಗಳು ಆನಂದ ಪಟ್ಟಿದ್ದಾರೆ ಎಂದರು.

ಆರ್. ಎಸ್. ಎಸ್. ನಲ್ಲಿ ಈಶ್ವರಪ್ಪಗೆ ಹೊಡಿ, ಬಡಿ , ಕಡಿ ಟ್ರೈನಿಂಗ್ ಆಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ಹೊಡಿ, ಬಡಿ, ಕಡಿ ಎಂದು ನಾನು ಹೇಳಿಲ್ಲ. ದೇಶ ವಿಭಜನೆ ಬಗ್ಗೆ ಮಾತನಾಡಿದ್ದರ ಬಗ್ಗೆ ಹೇಳಿದ್ದೇನೆ. ಭಾರತ ಮಾತೆ ತುಂಡು ಮಾಡುವ ವ್ಯಕ್ತಿಗೆ ಗುಂಡಿಕ್ಕುವ ಕಾನೂನು ತರಬೇಕೆಂದು ಹೇಳಿದ್ದೆನು ಎಂದ ಅವರು, ನನಗೆ ಆರ್ ಎಸ್ ಎಸ್ ನಲ್ಲಿ ಟ್ರೇನಿಂಗ್ ಆಗಿದೆ. ಆದರೆ ಸಿದ್ಧರಾಮಯ್ಯ ಅವರಿಗೆ ಟ್ರೇನಿಂಗ್ ಆಗದಿರುವುದೇ ಸಮಸ್ಯೆ. ಸಿದ್ಧರಾಮಯ್ಯ ಒಂದು ದಿನ ಆರ್ ಎಸ್ ಎಸ್ ಟ್ರೇನಿಂಗ್ ಗೆ ಬರಲಿ, ಆರ್ ಎಸ್ ಎಸ್ ನಲ್ಲಿ ಏನು ಹೇಳಿಕೊಡುತ್ತಾರೆ ಎಂಬುದು ಗೊತ್ತಾಗುತ್ತದೆ ಎಂದರು.

ರಾಮಮಂದಿರ ಬೇರೆ ಸ್ಥಳದಲ್ಲಿ ನಿರ್ಮಾಣ, ಅವ್ಯವಹಾರ ಆರೋಪ ವಿಚಾರವಾಗಿ ಮಾತನಾಡಿದ ಅವರು, ಸಚಿವ ಸಂತೋಷ್ ಲಾಡ್‍ಗೆ ಏನೂ ಗೊತ್ತಿಲ್ಲ. ಅಜ್ಞಾನದಿಂದ ಸಚಿವ ಸಂತೋಷ್‍ಲಾಡ್ ಈ ರೀತಿ ಮಾತಾನಾಡುತ್ತಿದ್ದಾರೆ. ರಾಮಮಂದಿರ ದೇಶ ಒಂದಾಗಿಸಲು ಕಟ್ಟಿದ ಮಂದಿರ. ಅಯೋಧ್ಯೆಯಲ್ಲಿ 700ಕ್ಕೂ ಹೆಚ್ಚು ಹೋಟೆಲ್ ನಿರ್ಮಾಣ ಆಗಲಿದ್ದು, ಅನೇಕರಿಗೆ ಉದ್ಯೋಗ ಅವಕಾಶ ಲಭಿಸಲಿದೆ. ಅಲ್ಲದೆ ರಾಮನೇ ಕಾಲ್ಪನಿಕ ಎಂದಿರುವ ಪಕ್ಷ ಕಾಂಗ್ರೆಸ್. ಹಾಗಾಗಿ ರಾಮಮಂದಿರ ಬಗ್ಗೆ ಮಾತಾಡುವ ಯೋಗ್ಯತೆ ಸಂತೋಷ್ ಲಾಡ್‍ಗೆ ಇಲ್ಲ ಎಂದು ಲೇವಡಿ ಮಾಡಿದರು.

ರಾಮಮಂದಿರ ನಿರ್ಮಾಣದಿಂದ ದೇಶದ ಜನರ ಒಗ್ಗೂಡಿಕೆ ಆಗಲಿದೆ. ಇದರಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಲಾಭ ಆಗಲಿದೆ. ಎನ್ ಡಿ ಎ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದ ಅವರು, ಒಂದು ಕಡೆ ಮೋದಿ ಆಡಳಿತ, ಮತ್ತೊಂದು ಕಡೆ ರಾಮ ಇರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಆಗಲಿದೆ ಎಂದು ಹೇಳಿದರು.

ಮಾದಾರ ಚನ್ನಯ್ಯಶ್ರೀ ಲೋಕಸಭೆಗೆ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ಅವರು, ರಾಜ್ಯಮಟ್ಟದಲ್ಲಿ ನಮಗೆ ಯಾವುದೇ ಮಾಹಿತಿ ಇಲ್ಲ. ಹೈಕಮಾಂಡ್ ಮಟ್ಟದಲ್ಲಿ ಏನು ಚಿಂತನೆ ನಡೆದಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾದಾರ ಚನ್ನಯ್ಯಶ್ರೀ ಬಂದರೆ ನಾನು ಖುಷಿ ಪಡುತ್ತೇನೆ ಎಂದು ಈಶ್ವರಪ್ಪ ಹೇಳಿದರು.

ಕೇಂದ್ರದಿಂದ ರಾಜ್ಯಕ್ಕೆ ಟ್ಯಾಕ್ಸ್ ಅನುದಾನದ ವಿಚಾರವಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರ ಶ್ವೇತ ಪತ್ರ ಹೊರಡಿಸಿದೆ. ಅದೇ ರೀತಿ ರಾಜ್ಯ ಸರ್ಕಾರವೂ ಶ್ವೇತ ಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.

ಗೋಷ್ಟಿಯಲ್ಲಿ ಮಾಜಿ ಶಾಸಕರಾದ ಜಿಎಚ್.ತಿಪ್ಪಾರೆಡ್ಡಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ, ಸಂಪತ್ ಕುಮಾರ್ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *