ಸುದ್ದಿಒನ್,ಬೆಂಗಳೂರು,ಮೇ.08: ವರಸೆಯಲ್ಲಿ ಅಕ್ಕ-ತಮ್ಮನಾಗಬೇಕಾದವರೇ ಪ್ರೀತಿಸಿ ಮದುವೆಯಾಗುವ ಮೂಲಕ ಸಮಾಜ ಹಾಗೂ ಕುಟುಂಬದ ಕೆಂಗಣ್ಣಿಗೆ ಗುರಿಯಾಗಿರುವ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿಯ ಶಶಿಕಲಾ (29) ಹಾಗೂ ಹೊಸಕೋಟೆ ತಾಲ್ಲೂಕಿನ ಹಳೆಊರಿನ ಪ್ರವೀಣ್ (24) ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರಿಬ್ಬರೂ ಸಂಬಂಧದಲ್ಲಿ ಅಕ್ಕ-ತಮ್ಮನಾಗಬೇಕು ಎನ್ನಲಾಗಿದೆ. ಇವರ ಈ ಅಸಹಜ ಪ್ರೇಮ ಸಂಬಂಧಕ್ಕೆ ಎರಡೂ ಕುಟುಂಬಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಮನೆಮಂದಿಯ ಆಕ್ಷೇಪ ಹಾಗೂ ಸಾಮಾಜಿಕ ಕಟ್ಟುಪಾಡುಗಳನ್ನು ಲೆಕ್ಕಿಸದ ಈ ಜೋಡಿ, ಇತ್ತೀಚೆಗೆ ಗುಟ್ಟಾಗಿ ಮದುವೆಯಾಗುವ ಮೂಲಕ ಒಂದಾಗಿದ್ದಾರೆ. ಶಶಿಕಲಾ ಅವರು ತನಗಿಂತ ಐದು ವರ್ಷ ಚಿಕ್ಕವನಾದ ಪ್ರವೀಣ್ನನ್ನು ಮದುವೆಯಾಗಿದ್ದು, ಈ ವಿಚಾರ ತಿಳಿಯುತ್ತಿದ್ದಂತೆಯೇ ಪೋಷಕರು ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಮದುವೆಯ ನಂತರ ಕುಟುಂಬ ಸದಸ್ಯರು ಮತ್ತು ಸಮಾಜದಿಂದ ತಮಗೆ ತೊಂದರೆಯಾಗುವ ಭೀತಿಯಲ್ಲಿರುವ ಈ ನವಜೋಡಿ ಈಗ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.


















