ಬೆಂಗಳೂರು; ಭ್ರಷ್ಟ ಅಧಿಕಾರಿಗಳಿಗೆ ಆಗಾಗ ಲೋಕಾಯುಕ್ತ ಅಧಿಕಾರಿಗಳು ಚಳಿಗಾಲದಲ್ಲೂ ಬೆವರಿಳಿಸುತ್ತಾರೆ. ಬೆಳ್ಳಂಬೆಳಗ್ಗೆ ಚಹಾ ಜೊತೆಗೆ ಜೊತೆಯಾಗುತ್ತಾರೆ. ಇದು ಭ್ರಷ್ಟ ಅಧಿಕಾರಿಗಳಿಗೆ ಚಹಾ ಕುಡಿಯುವ ನೆನಪನ್ನೇ ಕಳೆದು ಬಿಡುತ್ತದೆ. ಇಂದು ಕೂಡ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ರಾಜ್ಯದ ಹಲವು ಭಾಗದಲ್ಲಿ ಭ್ರಷ್ಟ ಅಧಿಕಾರಿಗಳ ಮನೆ ಬಾಗಿಲನ್ನ ಬೆಳ್ಳಂ ಬೆಳಗ್ಗೆಯೇ ತಟ್ಟಿದ್ದಾರೆ.
ಧಾರವಾಡ, ಕಲಬುರಗಿ, ಬಾಗಲಕೋಟೆ, ಗದಗ, ಹುನಗುಂದ, ಹೂವಿನಡಗಲಿ, ಹಾವೇರಿ ಸೇರಿದಂತೆ ಹಲವು ಭಾಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಖಲೆಗಳ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಲೋಕಾಯುಕ್ತ ದಾಳಿ ಮಾಡಿದ್ದಾರೆ. ಆ ಭ್ರಷ್ಟ ಅಧಿಕಾರಿಗಳ ಆಸ್ತಿ – ಪಾಸ್ತಿ ಎಷ್ಟಿದೆ ಎಂಬುದರ ದಾಖಲೆಯನ್ನು ಪರಿಶೀಲನೆ ಮಾಡುತ್ತಿದ್ದಾರೆ. ಗದಗ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಗಂಗಾಧರ್ ಶಿರೋಳ ಮನೆ, ಕಚೇರಿ ಸೇರಿ 9 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗಂಗಾಧರ್ ಮನೆ, ಕಚೇರಿ, ಅಳಿಯ, ಭಾವನ ಮನೆ ಸೇರಿ 6 ಕಡೆ ಲೋಕಾಯುಕ್ತ ಎಸ್ಪಿ ಹಣಮಂತರಾಯ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಬಳ್ಳಾರಿಯ PWD ಸೂಪರಿಡರಂಟ್ ಇಂಜಿನಿಯರ್ ಅಮೀಮ್ ಮುಕ್ತಾರ್ ಮನೆ ಮೇಲೆ ದಾಳಿಯಾಗಿದ್ದು, ಈ ವೇಳೆ ಕೋಟಿ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ರ ಪತ್ತೆಯಾಗಿದೆ. ಕಲಬುರಗಿ ನಗರದ ಹೊರವಲಯದಲ್ಲಿ 25 ಎಕರೆ ಜಮೀನಿನ ಆಸ್ತಿ ಪತದರ, ಕಲಬುರಗಿ ವಿಮಾನ ನಿಲ್ದಾಣ ರಸ್ತೆಯಲ್ಲಕ ಪೆಟ್ರೋಲ್ ಬಂಕ್, ಒಂದು ಕ್ರಶರ್ ಮಷೀನ್ ಲೈಸೆನ್ಸ್ ಸೇರಿದಂತೆ ಇತರೆ ಆಸ್ತಿ ಪತ್ರಗಳು ಪತ್ತೆಯಾಗಿವೆ. ಧಾರವಾಡದಲ್ಲಿ ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಹೆಚ್.ಸುರೇಶ್ ಮನೆ ಹಾಗೂ ಸರ್ಕಾರಿ ಕ್ವಾರ್ಟಸ್ ಮೇಲೆ ದಾಳಿಯಾಗಿದೆ.


