Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಿಡಿ – ಪುಸ್ತಕ ಹಿಡಿ ಅಭಿಯಾನ

---Advertisement---

ಬೆಂಗಳೂರು: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಮತ್ತು ಮೊಬೈಲ್ ಬಳಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಅತ್ಯಂತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ವತಿಯಿಂದ `ಮೊಬೈಲ್ ಬಿಡಿ – ಪುಸ್ತಕ ಹಿಡಿ’ ಎಂಬ ವಿನೂತನ ಅರಿವಿನ ಅಭಿಯಾನವನ್ನು ಅನುಷ್ಠಾನಗೊಳಿಸಲು ಅಧಿಕೃತ ಜ್ಞಾಪನಾ ಪತ್ರವನ್ನು ಹೊರಡಿಸಲಾಗಿದೆ.

ಮೊಬೈಲ್ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಶಾಲಾ ಹಂತದಲ್ಲಿ ಎಸ್ಡಿಎಂಸಿ (SDMC) ಹಾಗೂ ಪೋಷಕರ ಸಭೆಗಳನ್ನು ನಡೆಸಿ, ಶಾಲೆಯಲ್ಲಿ ವಿವಿಧ ಓದುವ ಕಾರ್ಯಕ್ರಮಗಳ ಮುಖಾಂತರ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುತ್ತದೆ. ಕೇವಲ ಶಿಕ್ಷಣ ಇಲಾಖೆಯಷ್ಟೇ ಅಲ್ಲದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತ್, ಗ್ರಂಥಾಲಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ಸಹಭಾಗಿತ್ವದೊಂದಿಗೆ ಮಹಿಳೆಯರು, ಮಕ್ಕಳು ಮತ್ತು ಸಾರ್ವಜನಿಕರಿಗೆ ಮೊಬೈಲ್ ಬಳಕೆಯ ಮಿತಿ ಹಾಗೂ ಓದಿನ ಮಹತ್ವದ ಬಗ್ಗೆ ತಿಳಿಹೇಳಲಾಗುವುದು.

ಈ ಅಭಿಯಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತಗಳಲ್ಲಿ ನೋಡಲ್ ಅಧಿಕಾರಿಗಳನ್ನು ಗುರುತಿಸಲಾಗುತ್ತಿದೆ. ಡಯಟ್ (DIET) ಸಂಸ್ಥೆಯಿಂದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಗ್ರಂಥಪಾಲಕರನ್ನು ಉಪನಿರ್ದೇಶಕರು (ಆಡಳಿತ) ಕಚೇರಿಯಿಂದ ನೋಡಲ್ ಅಧಿಕಾರಿಗಳನ್ನಾಗಿ ಜಿಲ್ಲಾ ಹಂತದಲ್ಲಿ ನೇಮಿಸಲು ಆದೇಶಿಸಲಾಗಿದೆ.

ಗುರುತಿಸಲಾದ ನೋಡಲ್ ಅಧಿಕಾರಿಗಳು ಸರ್ಕಾರದ ನಮೂನೆ-1 ಮತ್ತು ನಮೂನೆ-2 ರ ಅನ್ವಯ ಓದುವ ವಿವಿಧ ಚಟುವಟಿಕೆಗಳನ್ನು ಒಳಗೊಂಡಂತೆ ವಾರ್ಷಿಕ ಕ್ರಿಯಾ ಯೋಜನೆಯನ್ನು (Action Plan) ಸಿದ್ಧಪಡಿಸಿ, ತಮ್ಮ ವ್ಯಾಪ್ತಿಯ ಶಾಲೆ ಹಾಗೂ ಸಂಸ್ಥೆಗಳಿಗೆ ಕಳುಹಿಸಿಕೊಡಲಿದ್ದಾರೆ. ಪ್ರತಿ ತಾಲೂಕು ಹಂತದಲ್ಲಿ ಶಾಲಾ ಬೆಂಬಲ ವ್ಯವಸ್ಥೆಗೆ ಅಗತ್ಯವಾದ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನಗಳನ್ನು ನೀಡುವ ಜವಾಬ್ದಾರಿಯನ್ನು ಇವರಿಗೆ ವಹಿಸಲಾಗಿದೆ.

ಅಭಿಯಾನದ ಅಡಿಯಲ್ಲಿ ನಡೆಸಲಾದ ಕಾರ್ಯಕ್ರಮಗಳ ವಿವರಗಳನ್ನು (ಭಾವಚಿತ್ರಗಳ ಸಮೇತ) ಮತ್ತು ಪ್ರಗತಿ ವರದಿಯನ್ನು ಕ್ರೋಢೀಕರಿಸಿ, ಡಯಟ್ ನೋಡಲ್ ಅಧಿಕಾರಿ ಮುಖಾಂತರವೇ ರಾಜ್ಯ ಕಚೇರಿಯಾದ ಡಿ.ಎಸ್.ಇ.ಆರ್.ಟಿ (DSERT) ಗೆ ಕಡ್ಡಾಯವಾಗಿ ಸಲ್ಲಿಸಬೇಕು.

Join WhatsApp

Join Now

Join Telegram

Join Now