ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ಜು. 16 : ಸಚಿವ ಪ್ರಿಯಾಂಕ ಖರ್ಗೆ ಮತ್ತು ಶಾಸಕ ಅಲ್ಲಪ್ರಭು ಪಾಟೀಲ್ ಆಪ್ತ, ಕಲಬುರ್ಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಡ್ರಗ್ಸ್ ಸಾಗಾಣಿಕೆ ಕೇಸ್ನಲ್ಲಿ ಮಾದಕ ವಸ್ತುಗಳು ಮತ್ತು ನಿಷೇಧಿತ ಎನ್ರೆಕ್ಸ್ ಬಾಟಲ್ಗಳನ್ನು ಸಾಗಿಸುತ್ತಿದ್ದಾಗ ಮುಂಬೈ ಪೊಲೀಸರಿಂದ ಬಂಧನವಾಗಿದ್ದು, ಇದರ ಹಿಂದೆ ರಾಜ್ಯದ ಸಚಿವರಾದ ಪ್ರಿಯಾಂಕ್ ಖರ್ಗೆ ಇರುವ ಅನುಮಾನ ನಿರ್ಮಾಣವಾಗುತ್ತಿದೆ ಈ ಹಿನ್ನಲೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕೆಂದು ಚಿತ್ರದುರ್ಗ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಕರ್ನಾಟಕದಲ್ಲಿ ಇಂದು ವ್ಯಾಪಕವಾಗಿ ಡ್ರಗ್ಸ್ ಮಾಫಿಯಾ ಶಾಲಾ-ಕಾಲೇಜುಗಳಲ್ಲಿ, ಬೀಡಾ ಅಂಗಡಿಗಳಲ್ಲಿ, ಪಬ್ಗಳಲ್ಲಿ ನಡೆಯುತ್ತಿದೆ, ಮಲ್ಲಿನಾಥ್ ಸೊಂತ್ ಎಂಬವರ ಮಗನೂ ಡ್ರಗ್ಸ್ ಸಾಗಾಟದಲ್ಲಿ ಭಾಗಿಯಾಗಿದ್ದು, ಅವನೂ ಸಹ ಕಾಂಗ್ರೆಸ್ ಕಾರ್ಯಕರ್ತ ನಾಗಿರುತ್ತಾನೆ. ಅವರು ಮಲ್ಲಿಕಾರ್ಜುನ ಖರ್ಗೆಯವರಿಗೆ ಆಪ್ತನಾಗಿದ್ದು, ಆದರೆ ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ. ರಿಪಬ್ಲಿಕ್ ಆಫ್ ಕಲಬುರ್ಗಿಯಲ್ಲಿ ಪೊಲೀಸ್ ರಕ್ಷಣೆಯ ಕಣ್ಣಾವಲಿನಲ್ಲಿ ಡ್ರಗ್ಸ್ ಅವ್ಯವಹಾರ ನಡೆಯುತ್ತಿದೆ. ಕಲಬುರ್ಗಿಯಲ್ಲಿ ಎರಡೂರು ತಿಂಗಳ ಹಿಂದೆ ಡ್ರಗ್ಸ್ ವಶಕ್ಕೆ ಪಡೆಯಲಾಗಿದ್ದು ಆಗಲೂ ಕೂಡ ಯಾರ ಮೇಲೂ ಕ್ರಮ ಕೈಗೊಂಡಿರಲಿಲ್ಲ. ಕರ್ನಾಟಕದ ಡ್ರಗ್ಸ್ ಮಾಫಿಯಾದ ರೂವಾರಿ ಪ್ರಿಯಾಂಕ್ ಖರ್ಗೆಯಾಗಿದ್ಧಾರೆ ಎಂದು ದೂರಿದರು.
ಪ್ರಿಯಾಂಕ ಖರ್ಗೆಯವರು ತಮ್ಮ ಇಲಾಖೆಗಳಲ್ಲಿ ಉತ್ತಮ ಕೆಲಸ ಮಾಡಿ ಅದನ್ನು ರಾಜ್ಯದ ಜನರಿಗೆ ತಲುಪಿಸುವ ಬದಲು ಆರ್.ಎಸ್.ಎಸ್ ಮತ್ತು ಬಿಜೆಪಿಯನ್ನು ತೆಗಳಿ ಮಾಧ್ಯಮದಲ್ಲಿ ಪ್ರಚಾರದಲ್ಲಿ ಇರಲು ಪ್ರಯತ್ನಿಸುತ್ತಿದ್ದಾರೆ. ಕುಡಚಿ ಮತಕ್ಷೇತ್ರದ ಒಂದು ಗ್ರಾಮ ಪಂಚಾಯತಿಯಲ್ಲಿ 17 ಕೋಟಿ ಅವ್ಯವಹಾರ ಆಗಿದೆ. ಹಾಗಿದ್ದರೆ ಸುಮಾರು 6 ಸಾವಿರ ಗ್ರಾಮ ಪಂಚಾಯಿತಿಗಳು ಇರುವಂತಹ ರಾಜ್ಯವಿದು. ಪ್ರಿಯಾಂಕ ಖರ್ಗೆ ಅವರೇ ನಿಮ್ಮ ಇಲಾಖೆಯಲ್ಲಿ ನೀವು ಏನು ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ ಕೆ.ಟಿ.ಕುಮಾರಸ್ವಾಮಿ, ತಾವು ಮಾತ್ರ ದಿನನಿತ್ಯ ಮಾಧ್ಯಮದಲ್ಲಿ ಪ್ರಚಾರದಲ್ಲಿ ಇರಬೇಕೆನ್ನುವ ಕಾರಣದಿಂದ ಬಿಜೆಪಿಯ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದೀರಿ ಎಂದು ಪ್ರಿಯಾಂಕ ಖರ್ಗೆಯವರ ಕಾರ್ಯ ವೈಖರಿಯನ್ನು ಟೀಕಿಸಿದರು.
ರಾಜ್ಯದಲ್ಲಿ ಒಂದು ಕಾಮಗಾರಿಗೆ ಹಣ ಬಿಡುಗಡೆ ಮಾಡಲು 3 ಹಂತದ ಕಾಮಗಾರಿ ಫೋಟೋವನ್ನು ಆನ್ಲೈನ್ನಲ್ಲಿ ಅಪ್ ಲೋಡ್ ಮಾಡಬೇಕು. ಆದರೆ, ರಾಜ್ಯದ ಅಧಿಕಾರಿಗಳು ದುಡ್ಡನ್ನು ಮೊಬೈಲಿನಲ್ಲಿ ಚಿಡಿಚಿ ಮ್ಯಾಪನ್ನು ಫೋಟೋ ತೆಗೆದುಕೊಂಡಿದ್ದಾರೆ. ಇದೇ ರೀತಿ ರಾಜ್ಯಾದ್ಯಂತ 2 ಲಕ್ಷ, 3 ಲಕ್ಷ ಮತ್ತು ಲಕ್ಷಗಳ ಸಾವಿರಾರು ಕಾಮಗಾರಿಗಳಿಗೆ ಗೂಗಲ್ ಫೋಟೋ ಅಪ್ ಲೋಡ್ ನಿಯಮಬಾಹಿರವಾಗಿ ಬಿಲ್ಲುಗಳನ್ನು ಅನುಮೋದನೆ ಮಾಡಿದ್ದಾರೆ. ಪ್ರಿಯಾಂಕ ಖರ್ಗೆ ಅವರೆ ನಿಮ್ಮ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರ ನಿಮ್ಮ ಒಪ್ಪಿಗೆ ಇಲ್ಲದೆ ನಡೆದಿರುವುದೇ ಅಥವಾ ಈ ಅವ್ಯವಹಾರದಲ್ಲಿ ನಿಮಗೆ ಎಷ್ಟು ಷೇರು ಇದೆ? ಎಂದು ಪ್ರಶ್ನಿಸಿದರು.
ಕರ್ನಾಟಕ ರಾಜ್ಯದಿಂದ ಬೇರೆ ರಾಜ್ಯಕ್ಕೆ ಹೋದ ಕಂಪನಿಗಳು ಇದು ಐಟಿ & ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ 2 ವರ್ಷದ ಸಾಧನೆ ಎಂದರೆ ಟೊಯೋಟಾ ಇಲೆಕ್ಟಿಕಲ್ ಕಾರ್ 25 ಸಾವಿರ ಕೋಟಿ ಕಂಪನಿಯಿಂದ 30 ಸಾವಿರ ಜನರಿಗೆ ಕೆಲಸ ಸಿಗುತ್ತಿತ್ತು. ಆದರೆ ಇದು ಮಹಾರಾಷ್ಟ್ರಕ್ಕೆ ಹೋಗಿದೆ, ಇನ್ಫೋಸಿಸ್ ಸಂಸ್ಥೆಯ ಹೊಸ ಶಾಖೆ ಹೈದರಾಬಾದಿಗೆ ಸ್ಥಳಾಂತರ – ಈ ಕಂಪನಿಯಿಂದ 5000 ಜನರಿಗೆ ಕೆಲಸ ಸಿಗುತ್ತಿತ್ತು. ಆಪಲ್ ಫಾಕ್ಸ್ಕಾನ್ ಶಾಖೆ ತಮಿಳುನಾಡಿಗೆ ಸ್ಥಳಾಂತರವಾಗಿದೆ ಸೆಮಿಕಂಡಕ್ಟರ್ ಕರ್ನಾಟಕಕ್ಕೆ ಬಂದಿಲ್ಲ. ಉದ್ಯಮಿ ಮೋಹನ್ ದಾಸ್ ಪೈ ಅವರು ಕರ್ನಾಟಕದಲ್ಲಿ ಇರವುದು ಭ್ರಷ್ಟ ಸರ್ಕಾರ ಎಂದು ಹೇಳಿಕೆ ನೀಡಿದ್ದರು.
ಪ್ರಿಯಾಂಕ ಖರ್ಗೆ ಅವರು ಬಾಯಿ ಬಿಟ್ಟರೆ ಅಂತರಾಷ್ಟ್ರೀಯ ಸುದ್ದಿಯನ್ನು ಮಾತನಾಡುತ್ತಾರೆ. ಹಾಗಾಗಿ ಅವರ ಇಲಾಖೆಯಲ್ಲಿ ಸಾವಿರಾರು ಕೋಟಿಯ ಅಕ್ರಮ ಲೂಟಿಯಾಗುತ್ತಿದೆ. ಹಾಗಿದ್ದಲ್ಲಿ ಜನರ ದುಡ್ಡು ಎಲ್ಲಿ ಹೋಗುತ್ತಿದೆ ಪ್ರಿಯಾಂಕ್ ಖರ್ಗೆ ಅವರೇ?. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಯಾವ ರೀತಿ ಭ್ರಷ್ಟಾಚಾರ ನಡೆಯುತ್ತಿದೆ ಎಂದರೆ ಒಂದು ಪಂಚಾಯಿತಿಯಲ್ಲಿ 20 ರಿಂದ 30 ಜನ ಕಾರ್ಮಿಕರನ್ನು ದಿನ ನೇಮಿಸಿ ಪಂಚಾಯಿತಿಯ 50 ರಿಂದ 100 ಕಾಮಗಾರಿಗಳಿಗೆ ಮೇಲೆ ನೇಮಿಸಿದ್ದ ಕಾರ್ಮಿಕರನ್ನು ನಿಲ್ಲಿಸಿ ಫೋಟೋ ತೆಗೆದುಕೊಳ್ಳುತ್ತಾರೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವು ಯಾವ ಮಟ್ಟಿಗೆ ಇದೆ ಎಂದರೆ ರಾಯಬಾಗ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಗದ್ದು ಅವರ ಸಹೋದರ ಬಾಬಸಾಬ್ ಗದ್ದು ಅವರು ನರೇಗಾ ಕಾಮಗಾರಿಯ ಫೋಟೋದಲ್ಲಿ ನಿಲ್ಲುತ್ತಾರೆ. ಅಂದರೆ ಸಚಿವರ ಬೆಂಬಲವಿಲ್ಲದೆ ಒಬ್ಬ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗೆ ಹಾಡುಹಗಲು ಭ್ರಷ್ಟಾಚಾರ ಮಾಡುವುದಕ್ಕೆ ಇಷ್ಟು ಧೈರ್ಯ ಬರುವುದಕ್ಕೆ ಸಾಧ್ಯವೇ ಪ್ರಿಯಾಂಕ್ ಖರ್ಗೆ ಅವರೇ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಪ್ರಶ್ನಿಸಿದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.







