ಸುದ್ದಿಒನ್,ಕೋಲಾರ,ಮೇ.18: ಈಜಲು ಕಲಿಯಲು ಹೋದ ತಂದೆ ಮತ್ತು ಇಬ್ಬರು ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಅತ್ಯಂತ ದಾರುಣ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ನಕ್ಕನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಶ್ರೀನಿವಾಸ್ (41), ಹಾಗೂ ಇವರ ಮಕ್ಕಳಾದ ಚೇತನ್ (13) ಮತ್ತು ರಾಜೇಶ್ (8) ಮೃತಪಟ್ಟ ದುರ್ದೈವಿಗಳು. ನಕ್ಕನಹಳ್ಳಿ ಗ್ರಾಮದ ಈರಪ್ಪ ಎಂಬುವವರಿಗೆ ಸೇರಿದ ಕೃಷಿ ಹೊಂಡದಲ್ಲಿ ಈ ದುರಂತ ನಡೆದಿದೆ. ತಂದೆ ಶ್ರೀನಿವಾಸ್ ಅವರು ತಮ್ಮ ಇಬ್ಬರು ಮಕ್ಕಳಿಗೆ ಈಜಲು ಕಲಿಸುವ ಉದ್ದೇಶದಿಂದ ಕೃಷಿ ಹೊಂಡಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ, ನೀರಿನ ಆಳ ತಿಳಿಯದ ಹಿನ್ನೆಲೆಯಲ್ಲಿ ಈಜುವ ವೇಳೆ ನಿಯಂತ್ರಣ ತಪ್ಪಿ ಮೂವರೂ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಒಂದೇ ಬಾರಿಗೆ ಪತಿ ಹಾಗೂ ಇಬ್ಬರು ಮುದ್ದಿನ ಮಕ್ಕಳನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.















