ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 15 : ರಾಮ್ಮನೋಹರ್ ಲೋಹಿಯಾರವರ ಗರಡಿಯಲ್ಲಿ ಪಳಗಿದ ಮುಲಾಯಂಸಿಂಗ್ ಯಾದವ್ ಸಮಾಜವಾದಿ ಪಾರ್ಟಿ ಕಟ್ಟಿದಾಗಿನಿಂದಲೂ ಪಕ್ಷಕ್ಕೆ ಅವಿರತವಾಗಿ ಶ್ರಮಿಸಿ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೆಂದು ಸಮಾಜವಾದಿ ಪಾರ್ಟಿ ರಾಜ್ಯಾಧ್ಯಕ್ಷ ಎನ್.ಮಂಜಪ್ಪ ತಿಳಿಸಿದರು.
ಹರಿಹರದ ಕೃಷ್ಣಪ್ಪ ಭವನ ಮಾನವ ಮಂಟಪ ಮೈತ್ರಿ ವನದಲ್ಲಿ ಎರಡು ದಿನಗಳ ಕಾಲ ನಡೆದ ಕರ್ನಾಟಕ ಸೋಷಿಯಲಿಸ್ಟ್ ಫೋರಂನ ರಾಜ್ಯ ಮಟ್ಟದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಖಂಡ ಹಿಂದೂಸ್ಥಾನ ರಚನೆ, ಅಂಗ್ರೇಜಿ ಹಠಾವೋ, ಪ್ರಾದೇಶಿಕ ಭಾಷೆಗಳಿಗೆ ಒತ್ತು, ಜಾತ್ಯತೀತ ಸರ್ವ ಧರ್ಮಗಳ ಸಮನ್ವಯ ಸಂವಿಧಾನ ಸಂರಕ್ಷಿಸುವಂತೆ ಎನ್.ಮಂಜಪ್ಪ ಸಮಾಜವಾದಿ ಪಾರ್ಟಿ ಕಾರ್ಯಕರ್ತರಿಗೆ ಕರೆ ನೀಡಿದರು.
ಸಮಾಜವಾದಿ ಪಾರ್ಟಿಯ ರಾಜ್ಯ ಕಾರ್ಯಾಧ್ಯಕ್ಷ ಎಸ್.ಜಿ.ಹಿರೇಮಠ್ ಸಮಾಜವಾದ ಹಾಗೂ ಸಮಾಜ ವಾದಿ ಪಾರ್ಟಿ ಬೆಳೆದು ಬಂದ ದಾರಿ ಮುಲಾಯಂಸಿಂಗ್ ಯಾದವ್ ಹಾಗೂ ಎಸ್.ಬಂಗಾರಪ್ಪನವರ ಜೊತೆಗಿನ ಒಡನಾಟ ಕುರಿತು ಸ್ಮರಿಸಿದರು.
ಗುಲ್ಬರ್ಗಾ ಜಿಲ್ಲೆಯಲ್ಲಿ ಸಮಾಜವಾದಿ ಪಾರ್ಟಿಯನ್ನು ಗ್ರಾಮ ಮಟ್ಟದಲ್ಲಿ ಕಟ್ಟಿ ಚುನಾವಣೆ ನಡೆಸಿದ್ದರ ಬಗ್ಗೆ ಪ್ರಸ್ತಾಪಿಸಿದರು.
ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವೆ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಮಹಾದಾಯಿ ಯೋಜನೆ. ನೀರಾವರಿ ಸಮಸ್ಯೆಗೆ ನಿವಾರಣೆಗೆ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಶೀಘ್ರ ಅನುಷ್ಠಾನಗೊಳಿಸಬೇಕು.
ಬಚಾವತ್ ಆಯೋಗದ ಎ.ಸ್ಕೀಂ ಮತ್ತು ಬಿ.ಸ್ಕೀಂನಿಂದಾಗಿ ಕೃಷ್ಣಾ ನದಿ ಪಾತ್ರ ಮತ್ತು ಕಾವೇರಿ ನದಿ ಪಾತ್ರದಿಂದ ಸುಮಾರು 282 ಟಿ.ಎಂ.ಸಿ. ನೀರು ಕರ್ನಾಟಕ ರಾಜ್ಯದ ಪಾಲು ಆಂಧ್ರ, ತಮಿಳುನಾಡು ಮತ್ತು ಕೇರಳಕ್ಕೆ ಹರಿದು ಹೋಗುತ್ತಿರುವುದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ರಾಜ್ಯದಲ್ಲಿ ಕೃಷಿ ಚಟುವಟಿಕೆ ನಡೆಸಲು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ರಾಜ್ಯಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬೇಕು.
ಅಪ್ಪರ್ ಭದ್ರಾ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು. ಕೇಂದ್ರ ಸರ್ಕಾರ ಹಿಂದಿನ ಬಜೆಟ್ನಲ್ಲಿ ಐದು ಸಾವಿರ ಕೋಟಿ ರೂ.ಅನುದಾನ ಒದಗಿಸುವುದಾಗಿ ಹೇಳಿದ್ದು, ಕೂಡಲೇ ಹಣ ಬಿಡುಗಡೆಗೊಳಿಸಬೇಕು.
ಕೇಂದ್ರ ಸರ್ಕಾರಿ ನೌಕರಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದ್ದು, ಯು.ಪಿ.ಎಸ್ಸಿ.ಯಲ್ಲಿ ಕನ್ನಡಿಗರಿಗೆ ಆದ್ಯತೆ ಕೊಡಬೇಕು. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ವಿಕಲಚೇತನರಿಗೆ ಮತ್ತು ಮಂಗಳಮುಖಿಯರಿಗೆ ಮೀಸಲಾತಿ ನೀಡಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ಒತ್ತಾಯ. ಸ್ಥಳೀಯ ಸಂಸ್ಥೆ ಹಾಗೂ ಇತರೆ ಚುನಾವಣೆಗಳಲ್ಲಿ ಸಮಾಜವಾದಿ ಪಾರ್ಟಿಯಿಂದ ಸ್ಪರ್ಧಿಸಲು ತೀರ್ಮಾನ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು.
ಸಮಾಜವಾದಿ ಪಾರ್ಟಿಯ ಪಿಡಿಎ.ಸಂಘಟನೆ ಮೂಲಕ ರಾಷ್ಟ್ರ ಮತ್ತು ರಾಜ್ಯಗಳಲ್ಲಿ ಜಾತಿ ಜನಸಂಖ್ಯೆ ಜನಗಣತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಾರದರ್ಶಕವಾಗಿ ನಡೆಸಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು.
ಸಮಾಜವಾದಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಮಂಜುನಾಥ್, ರಾಜ್ಯ ಕಾರ್ಯದರ್ಶಿ ರವಿಕುಮಾರ್ ಕೆ.ಎನ್. ಚಿತ್ರದುರ್ಗ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್, ದಾವಣಗೆರೆ ಜಿಲ್ಲಾಧ್ಯಕ್ಷ ಎಸ್.ಶಿವಾನಂದಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಹೆಚ್.ಎನ್. ನ್ಯಾಯವಾದಿ ಎನ್.ಡಿ.ಗುರುಮೂರ್ತಿ, ಎಸ್ಸಿ.ಎಸ್ಟಿ. ಘಟಕದ ರಾಜ್ಯಾಧ್ಯಕ್ಷ ಗೋವಿಂದ್ ಪನ್ನೂರ್, ಮಹಿಳಾ ಮುಖಂಡರುಗಳಾದ ಜಯಮ್ಮ, ಜಯಶ್ರಿ, ಅಶ್ವಿನಿ ಇವರುಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಎರಡು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 82 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

