ಕನ್ನಡ ಉಳಿಯುವುದು ಭಾಷಣ ಮತ್ತು ಘೋಷಣೆಗಳ ಮೂಲಕ ಅಲ್ಲ : ಗಂಗಾಧರ್

suddionenews
2 Min Read

 

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 01 : ಕನ್ನಡ ಉಳಿಯುವುದು ಕೇವಲ ಭಾಷಣ ಮತ್ತು ಘೋಷಣೆಗಳ ಮೂಲಕ ಅಲ್ಲ. ಅದು ನಮ್ಮ ಹೃದಯಾಂತರಾಳದ ಭಾಷೆಯಾದಾಗ ಹಾಗೆ ನಮ್ಮ ವೈಯಕ್ತಿಕ ಜೀವನದಲ್ಲಿ ಅದರ ಆಚರಣೆ ಅನುಷ್ಠಾನವಾದರೆ ಮಾತ್ರ ಕನ್ನಡ ಸಮೃದ್ಧವಾಗಿರಲು ಸಾಧ್ಯ ಎಂದು ನಗರದ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಪಾಲಿಟೆಕ್ನಿಕ್ ಉಪನ್ಯಾಸಕರಾದ ಗಂಗಾಧರ್ ಅವರು ಕಳಕಳಿ ವ್ಯಕ್ತಪಡಿಸಿದರು.

ಅವರು ನಗರದ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಪಾಲಟೆಕ್ನಿಕ್ ನಲ್ಲಿ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು ಕನ್ನಡ ಉಳಿಸಿ ಬೆಳೆಸಿ ಅಂದ್ರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಪ್ರತಿ ಕನ್ನಡಿಗರೂ ತಾಯಿ ನುಡಿಯ ಬಗ್ಗೆ ಅಭಿಮಾನ ಇದ್ದಾಗ ಮಾತ್ರ ಭಾಷೆ ಸದಾ ಕ್ರಿಯಾಶೀಲತೆ ಹೊಂದಿರಲು ಸಾಧ್ಯ ಎಂದು ಹೇಳಿದರು.

ಕಾಲೇಜಿನ ಗ್ರಂಥಪಾಲಕ ವೀರಯ್ಯ ಎಂ. ಮಾತನಾಡಿ ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ, ಆನಂತರ ಕರ್ನಾಟಕ ಎಂದು ನಾಮಕರಣವಾಗಲು ಆ ಬಗ್ಗೆ ಶ್ರಮಿಸಿದ ಮಹಾನ್ ವ್ಯಕ್ತಿಗಳ ಶ್ರಮ ಸಾರ್ಥಕವಾಗಬೇಕಾದರೆ ನಾವು ಎಲ್ಲಾ ಹಂತದಲ್ಲಿ ಕನ್ನಡ ಕನ್ನಡ ಅನ್ನುವಂತಾದಾಗ ಮಾತ್ರ ಕನ್ನಡ ನುಡಿಗೆ ಎಲ್ಲಿಲ್ಲದ ಆಧ್ಯತೆ ಸಿಕ್ಕಂತಾಗುತ್ತದೆ ಎಂದು ಹೇಳಿದರು.

ಕಾಲೇಜಿನ ಬೋಧಕ ಸುರೇಶ್. ಕೆ.ಮಾತನಾಡಿ ಕರ್ನಾಟಕದ ಭಾಷಾವಾರು ಪ್ರಾಂತಗಳನ್ನು ಒಗ್ಗೂಡಿಸುವುದು ಅಂದಿನವರಿಗೆ ಒಂದು ದೊಡ್ಡ ಸವಾಲು ಸ್ವಾತಂತ್ರ್ಯಾ ನಂತರದಲ್ಲಿ ಆಗಿತ್ತು. ಅದರಲ್ಲಿ ಕರ್ನಾಟಕ ಗಡಿಭಾಗಗಳನ್ನು ಕೂಡಿಸಿ ಹಂಚಿಹೋಗಿದ್ದ ಪ್ರಾಂತಗಳನ್ನು ಮತ್ತೆ ಕರ್ನಾಟಕಕ್ಕೆ ತರುವ ಪ್ರಯತ್ನ ನಮ್ಮಪೂರ್ವಿಕರು ಮಾಡಿ ಹೋಗಿದ್ದರ ಫಲ ನಮಗೆ ಈಗ ಯಾವ ಸಮಸ್ಯೆ ಇಲ್ಲ. ಇರುವುದನ್ನು ನಾವು ಜೋಪಾನ ಮಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಹೇಳಿದ ಅವರು ನಾವು ಎಂದೆಂದಿಗೂ ಭಾಷಾಭಿಮಾನ ವಿಚಾರದಲ್ಲಿ ಮೈಮರೆತರೆ ಕರ್ನಾಟಕ ,ಕನ್ನಡ ಭಾಷೆ ಹೇಳ ಹೆಸರಿಲ್ಲದಂತಾಗುತ್ತದೆ ಎಂದು, ಆ ಬಗ್ಗೆ ಕನ್ನಡಿಗರಾದ ನಮ್ಮ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ ಎಂದು ಒತ್ತಿ ಹೇಳಿದರು.

ಮೆಕ್ಯಾನಿಕಲ್ ವಿಭಾಗದ ಸೋಮಶೇಖರ್ ಮಾಷ್ಯಾಳ್ ಮಾತಾಡಿ ಎಲ್ಲ ಹಂತದಲ್ಲಿಯೂ ಕನ್ನಡ ಭಾಷೆಗೆ ಆದ್ಯತೆ ನೀಡದ ಹೊರತು ಕನ್ನಡ ಭಾಷೆಗೆ ಉಳಿವಿಲ್ಲ. ಕೆಲವೊಂದು ರಾಜ್ಯಗಳಲ್ಲಿ ಅವರಿಗೆ ಎಷ್ಟೊಂದು ಭಾಷಾ ಪ್ರೇಮವಿದೆ ಎನ್ನುವುದನ್ನು ನಾವು ಅವರಿಂದ ಕಲಿಯಬೇಕಾಗಿದೆ. ಪರ ಭಾಷಿಕರೊಂದಿಗೆ ನಾವು ಅವರದೇ ಆದ ಭಾಷೆಯಲ್ಲಿ ಮಾತನಾಡುವ ದೊಡ್ಡಗುಣ ರೂಡಿಸಿಕೊಂಡ ಕಾರಣ ಕನ್ನಡ ಅನಾಥ ಸ್ಥಿತಿಗೆ ಬರುವಂತ ಸ್ಥಿತಿಗೆ ತಂದು ಒಡ್ಡಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಲೇಜಿನ ಕಛೇರಿ ಸಿಬ್ಬಂದಿ ರುದ್ರಮೂರ್ತಿ ಎಂ.ಜೆ. ಮಾತಾಡಿ ಈಗ ಬರಿ ಬಾಯಿ ಮಾತಿನಿಂದ ಏನು ಸಾಧ್ಯವಿಲ್ಲ. ನಡೆ-ನುಡಿ ಒಂದಾದಾಗ ಮಾತ್ರ ಯಾವುದೇ ಯೋಜನೆ ಫಲಶೃತಿ ಕಾಣಲು ಸಾಧ್ಯ. ಅಂದ ಹಾಗೆ ನಮ್ಮ ಈಗಿನ ಒಂದೆರಡು ತಲೆಮಾರು ಕಳೆದರೆ ಮುಗಿಯಿತು ಕನ್ನಡದ ಸ್ಥಿತಿ. ಈಗಿನ ಮಕ್ಕಳಿಗೆ ಕನ್ನಡ ಓದಲು- ಬರೆಯಲು ಬಾರದ ಸ್ಥಿತಿಯಲ್ಲಿದ್ದಾರೆ. ಕಾರಣ ಎಲ್ಲರೂ ಆಂಗ್ಲಭಾಷೆ ಶಾಲೆಗಳಿಗೆ ಸೇರಿ ಅವರಿಗೆ ಕನ್ನಡ ಬಾರದಂತಾಗಿದೆ.ಮಾತೃ ಭಾಷೆ ನಮ್ಮ ಮಕ್ಕಳಿಗೆ ಸುಲಲಿತ ಎನ್ನುವ ಹಾಗೆ ಇರಬೇಕಿತ್ತು.ಆದರೆ ಕನ್ನಡ ಒಂದು ಕಬ್ಬಿಣದ ಕಡಲೆಯಾಗಿದೆ. ಮೊದಲು ಮಕ್ಕಳಿಗೆ ಕನ್ನಡ ಕಲಿಯಲು ಪ್ರೇರೇಪಿಸಿ ,ಮತ್ತೆ ನಮ್ಮ ಎಲ್ಲಾ ಆಚರಣೆಗಳು ನಾಡು ಮತ್ತು ನುಡಿ ಪ್ರೇಮದ ಹಿನ್ನೆಲೆಯಲ್ಲಿ ನಡೆದಾಗ ಮಾತ್ರ ಕನ್ನಡ ಭಾಷೆಗೆ ಮಹತ್ವ ಬರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಪಿ.ಎ .ರಘು, ಕಾಲೇಜಿನ ಅಧೀಕ್ಷಕ ಸಿ.ಎನ್. ಮೋಹನ್, ನಿರಂಜನ ಹಾಗೂ ವಿನಯ್ ಅವರುಗಳು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *